
ಘಟಪ್ರಭ ನೀರಿನ ನಾಲೆ ಅಲ್ಲೇ ಮಗುಲಲ್ಲೇ ಹರಿಯುತಿತ್ತು. ಹೆಣ್ಣು ಮಕ್ಕಳು ಯಾವುದರ ಪರಿವೇ ಇಲ್ಲದೆ ಬಟ್ಟೆ ತೊಳೆಯುತ್ತಿದ್ದರು. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುವವರಿಗೂ ಯಾವುದೇ ಅರಿವಿರಲಿಲ್ಲ. ಅಂತಹ ಹೊತ್ತಿನಲ್ಲೇ ನಮ್ಮ ಕಾರು ಅಲ್ಲಿಗೆ ಪ್ರವೇಶಿಸಿತು. ಪ್ರವೇಶದಲ್ಲೇ ಧೂಳು ಹೊದ್ದುಕೊಂಡಂತೆ ಇದ್ದ ಆ ಮನೆಯತ್ತಲೇ ನನ್ನ ದೃಷ್ಟಿ ನೇರವಾಗಿ ಬಿತ್ತು.
ನೀವು ಅಷ್ಟೇ ಗೋಕಾಕದಿಂದ ಕೊಟ್ಟೂರು ಬಸವೇಶ್ವರ ಸನ್ನಿಧಾನ ಇರುವ ಅರಬಾವಿಗೆ ಹೋದರೆ ಮೊದಲು ಸ್ವಾಗತಿಸುವುದೇ ಆ ಮನೆ. ಛೇ ಛೇ ಅದನ್ನು ಮನೆ ಎನ್ನುವುದಕ್ಕಿಂತ ಹಳೆಯ ಬಂಗಲೆ ಎನ್ನಲು ಅಡ್ಡಿ ಇಲ್ಲ. ಆ ಭಾರಿ ಮನೆಯತ್ತಲೇ ನನ್ನ ನೋಟ ನೆಟ್ಟಿತ್ತು. ಏನಿದು ಮನೆಯಾ? ಅರಮನೆಯಾ? ಕಾರು ನಿಲ್ಲಿಸಿ ಫೋಟೋ ತೆಗೆಯುವ ಎಂದು ನಾನು ಮಾತು ಆರಂಭಿಸುವ ಮುನ್ನವೇ ಗೆಳೆಯ ಮುನ್ನಾ ಮಾತನಾಡಲು ಶುರು ಮಾಡಿದ್ದರು.
ಒಂದು ಕಾಲದಲ್ಲಿ ಇದೇ ಮನೆಯಲ್ಲೇ ಸುತ್ತಲ ಹತ್ತು ಹಳ್ಳಿಯ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತಿತ್ತು ಎಂದರು.
ಓಹೋ..ಓಹೋ.. ಅಂತ ವಿಶೇಷ ಏನ್ ಗುರುವೇ ಈ ಮನೆಯಲ್ಲಿ, ನಿಲ್ಲಿಸು ಈಗ ಡೇನಲ್ಲಿ ಏನು ನಡೆಯುತ್ತೆ ನೋಡೋಣ ಅಂದೆ ಗೇಲಿಯಿಂದ.
ಕಾರು ನಿಲ್ಲಿಸಬೇಡಿ. ನಡೆಯಿರಿ. ಹತ್ತೂ ಊರಿನ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತ್ತಿದ್ದದ್ದು ಇಲ್ಲೇ. ಆದರೆ, ಎಲ್ಲಾ ಹೆಣ್ಣು ಮಕ್ಕಳ ಜೊತೆ ಮಲಗುತ್ತಿದ್ದದ್ದು ಮಾತ್ರ ಒಬ್ಬನೇ. ಅವನೇ ಸತ್ಯಪ್ಪ ವಡ್ಡರ ಎಂದು ಪ್ರಥಮ ರಾತ್ರಿಗಳ ಕಥೆಯ ಹಾಳೆಗಳು ತಿರುಗತೊಡಗಿದವು.
ಅದು ಸುಮಾರು 1935 - 1960ರ ನಡುವೆ ನಡೆದ ದರ್ಬಾರಿನ ದಿನಗಳು. ಈ ಸತ್ಯಪ್ಪ ವಡ್ಡರ ಶ್ರೀಮಂತನೂ ಹೌದು, ದೊಡ್ಡ ಪಾಳೇಗಾರ. ಈಗಿನ ಅರ್ಥದಲ್ಲಿ ಹೇಳಬೇಕು ಅಂದರೆ ರೌಡಿ. ಗೂಂಡಾ ಆಗಿದ್ದ. ಅರಬಾವಿಯಿಂದ ಜಮಖಂಡಿಯವರೆಗೂ ಎಲ್ಲೂ ತಪ್ಪದಂತೆ ಹೊಲವಿತ್ತು ಸತ್ಯಪ್ಪನಿಗೆ ಎಂದು ಹೇಳುತ್ತಾರೆ. ಸುತ್ತಲ ಯಾವುದೇ ಹಳ್ಳಿಯಲ್ಲಿ ಮದುವೆಯಾದರೂ ಆ ಹೆಣ್ಣು ಮಗಳ ಮೊದಲ ರಾತ್ರಿ ಮಾತ್ರ ಸತ್ಯಪ್ಪ ವಡ್ಡರ ಜೊತೆಯೇ ಆಗಬೇಕಿತ್ತು. ಇಲ್ಲವೇ ಜೀವ ಕಳೆದುಕೊಳ್ಳಬೇಕಿತ್ತು.
ಅದೇ ಕಟ್ಟಪ್ಪಣೆಯನ್ನು ತನ್ನ ಹಣಕಾಸಿನ ಲೆಕ್ಕ ನೋಡಿಕೊಳ್ಳುತ್ತಿದ್ದಾತನ ಮಗಳಿಗೂ ಅನ್ವಯಿಸಿದ. ಕೈ ಕೈ ಮುಗಿದು ಕಾಲಿಗೆ ಬಿದ್ದರೂ ಸತ್ಯಪ್ಪನ ಆಸೆ ಮಾತ್ರ ಕರಗಲಿಲ್ಲ. ಲೆಕ್ಕದವನ ಮಗಳೊಂದಿಗೆ ಮಲಗಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿಬಿಟ್ಟ. ಬಡಪಾಯಿ ಲೆಕ್ಕದವ ಸತ್ಯಪ್ಪನ ಮೇಲೆ ಸೇಡು ತೀರಿಸಿಕೊಳ್ಳುವುದು ದೂರದ ಮಾತಾಗಿತ್ತು. ಆಗ, ಬ್ರಿಟೀಷರು ಆದಾಯ ತೆರಿಗೆಗಾಗಿ ತಪಾಸಣೆ ನಡೆಸ ತೊಡಗಿದರು. ಗುಟ್ಟಾಗಿ ಸತ್ಯಪ್ಪನ ಕಳ್ಳಲೆಕ್ಕದ ಮಾಹಿತಿ, ಅವಿತಿಟ್ಟ ಸಂಪತ್ತಿನ ಮಾಹಿತಿಯನ್ನು ಬ್ರಿಟೀಷರಿಗೆ ಮುಟ್ಟಿಸಿದ. ಬ್ರಿಟೀಷರು ಎಲ್ಲವನ್ನೂ ಜಫ್ತು ಮಾಡಿಕೊಂಡರು.
ಎಲ್ಲಾ ಗೂಂಡಾಗಿರಿಯ ಮೊದಲ ಶಕ್ತಿಯಾದ ಸಂಪತ್ತು ಅವನಿಂದ ದೂರಾಗಲು ತೊಡಗಿತ್ತು. ಅವನ ದರ್ಪವೂ ನಿಧನವಾಗಿ ಕ್ಷೀಣಿಸತೊಡಗಿತು. ಅಷ್ಟರಲ್ಲಿ ಭಾರತಕ್ಕೆ ಸ್ವಾತಂತ್ರ್ಯವೂ ಬಂತು. ಅನೇಕ ಬದಲಾವಣೆಗಳ ಗಾಳಿಗೆ ಗೋಕಾಕ ತಾಲೂಕು ಮೈ ಒಡ್ಡಿಕೊಂಡಿತು. ಆದರೆ, ವಯಸ್ಸಾಗುತ್ತಿದ್ದ ಸತ್ಯಪ್ಪನಿಗೆ ಮತ್ತಷ್ಟು ಹೆಣ್ಣು ಚಪಲ ಹೆಚ್ಚಾಯಿತು. ಮೊದಲಿನಂತೆ ಅಲ್ಲವಾದರೂ ಹೆದರುವವರನ್ನು ಹೆದರಿಸಿ ಚಪಲ ತೀರಿಸಿಕೊಳ್ಳುತ್ತಿದ್ದ. ಸತ್ಯಪ್ಪನ ತೆವಲಿಗೆ ಜೀವ ಕಳೆದುಕೊಂಡಕೆಯ ಸಾವಿನ ಪ್ರಕರಣದ ತನಿಖೆ ಖಡಕ್ ಅಧಿಕಾರಿಗಳು ಮುಂದಾದರು. ಆಗ ಸತ್ಯಪ್ಪನ ಮನೆ ಮೇಲೆ ದಾಳಿ ನಡೆಸಿದರು. ಅವನ ಮನೆ ಹಿಂದೆ ತೆಗ್ಗು ತೆಗೆಯಲು ತೊಡಗಿದರು. ಸುಮಾರು ೨ ಅಡಿಯಷ್ಟು ಆಳ ತೆಗೆಯುತ್ತಿದ್ದಂತೆ ಮೊದಲು ಚಿಮ್ಮಿದ್ದು ತಲೆಬುರುಡೆ. ಹಾಗೆ ಅಗೆಯುತ್ತಾ ಹೋಗುತ್ತಿದ್ದಂತೆ ತಲೆಬುರುಡೆ, ಮೂಳೆಗಳು ಎಷ್ಟು ಎಂಬುದನ್ನು ಲೆಕ್ಕ ಇಟ್ಟವರಾರು ಈಗ ಉಳಿದಿಲ್ಲವಂತೆ. ಅದಾದ ನಂತರ ಸತ್ಯಪ್ಪನ ಅವನತಿ ಆರಂಭವಾಯಿತಂತೆ. ಕೊನೆಗೆ ನಾನಾ ಕಾಯಿಲೆಗಳು ಅಮರಿಕೊಂಡು ಚಿಂತಾಜನಕ ಸಾವು ಕಂಡನಂತೆ. ಆತನ ಅಧಿಕೃತ ಪತ್ನಿಗೆ ಹುಟ್ಟಿದ ಮಕ್ಕಳ ಮಕ್ಕಳು ಈಗ ಆ ಬಂಗಲೆಯಲ್ಲಿ ಇದ್ದಾರೆ. ಆ ಬಂಗಲೆ ಮೇಲಿನ ಧೂಳು ನೋಡಿದರೆ ತಾತನ ಅಬ್ಬರ ಯಾವುದೂ ಆ ಮನೆ, ಮನದಲ್ಲಿ ಉಳಿದಿಲ್ಲ. ಸತ್ಯಪ್ಪ ವಡ್ಡರ ಎಂದರೆ ನಡಗುತ್ತಿದ್ದ ಗೋಕಾಕ ತಾಲೂಕು ಈಗ ಈ ಮನೆ ಕಡೆಗೆ ಅಸಹ್ಯದಿಂದ ನೋಡುತ್ತಾ ತಮಗೆ ತೋಚಿದಂತೆ ಕಥೆ ಹಳಲು ಶುರುವಿಡುತ್ತಾರೆ. ಆ ಮನೆಯಲ್ಲಿ ಇರುವವರನ್ನು ಕರುಣೆಯಿಂದ ನೋಡುತ್ತಾರೆ. ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುತ್ತಿದೆ ಎಂಬುದು ಅರಬಾವಿ ಮಠದ ಪಕ್ಕದ ಗುಡಿಸಲು ಕ್ಯಾಂಟೀನ್ನಲ್ಲಿ ಟೀ ಕುಡಿಯುತ್ತಾ ಕುಳಿತಿದ್ದ ಹಿರಿಯರೊಬ್ಬರ ವಾದವಾಗಿತ್ತು.
ಎಲ್ಲಾ ಅನ್ಯಾಯ, ಅಕ್ರಮ ಎಸಗಿದವರೇ ಸುಖದಿಂದಲೇ ಜೀವಿಸುತ್ತಾ, ಜೀವ ಬಿಟ್ಟ ಅನೇಕ ಉದಾಹರಣೆಗಳಿವೆ. ಇನ್ನು ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುವುದೇ ಎಂಬ ನನ್ನ ನಖರ ಪ್ರಶ್ನೆ ತುಟಿಗೆ ಬಂತೇ ಹೊರತು ಶಬ್ದವಾಗಿ ಹೊರ ಹೊಮ್ಮಲಿಲ್ಲ.
ಗೋಕಾಕ ತಾಲೂಕಿಗೆ ಕುಟುಂಬ ರಾಜಕಾರಣ, ಗೂಂಡಾಗಿರಿ ಇತ್ತೀಚಿಗೆ ಅಂಟಿಕೊಂಡ ರೋಗವಲ್ಲ. ಅದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಜಮೀನುದಾರಿಕೆ, ಪಾಳುದಾರಿಕೆಯ ಗಟ್ಟಿ ಬೇರಿದೆ ಎಂಬುದು ಅರ್ಥವಾಯಿತು. ಆಮೇಲೆ ಆಧುನಿಕ ಪಾಳೇಗಾರರ ಮೇಲೆ ನನಗೆ ಅಷ್ಟಾಗಿ ಸಿಟ್ಟು ಬರಲಿಲ್ಲ. ಶಿಕ್ಷಣ, ಸ್ವಾತಂತ್ರ್ಯ ಜನಪ್ರಿಯ ಆಗಿರುವ ಈ ಕಾಲದಲ್ಲೂ ಜನರನ್ನು ಇನ್ನು ಹಿಡಿದಿಟ್ಟಿದ್ದಾರಲ್ಲ ಎಂದು ಆಶ್ಚರ್ಯವೇ ಆಯಿತು.





