Tuesday, January 13, 2009

ಆ ಮನೆಯಲ್ಲೇ ಎಲ್ಲರ ಫಸ್ಟ್ ನೈಟ್ ನಡೆಯುತಿತ್ತು...!


ಘಟಪ್ರಭ ನೀರಿನ ನಾಲೆ ಅಲ್ಲೇ ಮಗುಲಲ್ಲೇ ಹರಿಯುತಿತ್ತು. ಹೆಣ್ಣು ಮಕ್ಕಳು ಯಾವುದರ ಪರಿವೇ ಇಲ್ಲದೆ ಬಟ್ಟೆ ತೊಳೆಯುತ್ತಿದ್ದರು. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುವವರಿಗೂ ಯಾವುದೇ ಅರಿವಿರಲಿಲ್ಲ. ಅಂತಹ ಹೊತ್ತಿನಲ್ಲೇ ನಮ್ಮ ಕಾರು ಅಲ್ಲಿಗೆ ಪ್ರವೇಶಿಸಿತು. ಪ್ರವೇಶದಲ್ಲೇ ಧೂಳು ಹೊದ್ದುಕೊಂಡಂತೆ ಇದ್ದ ಆ ಮನೆಯತ್ತಲೇ ನನ್ನ ದೃಷ್ಟಿ ನೇರವಾಗಿ ಬಿತ್ತು.
ನೀವು ಅಷ್ಟೇ ಗೋಕಾಕದಿಂದ ಕೊಟ್ಟೂರು ಬಸವೇಶ್ವರ ಸನ್ನಿಧಾನ ಇರುವ ಅರಬಾವಿಗೆ ಹೋದರೆ ಮೊದಲು ಸ್ವಾಗತಿಸುವುದೇ ಆ ಮನೆ. ಛೇ ಛೇ ಅದನ್ನು ಮನೆ ಎನ್ನುವುದಕ್ಕಿಂತ ಹಳೆಯ ಬಂಗಲೆ ಎನ್ನಲು ಅಡ್ಡಿ ಇಲ್ಲ. ಆ ಭಾರಿ ಮನೆಯತ್ತಲೇ ನನ್ನ ನೋಟ ನೆಟ್ಟಿತ್ತು. ಏನಿದು ಮನೆಯಾ? ಅರಮನೆಯಾ? ಕಾರು ನಿಲ್ಲಿಸಿ ಫೋಟೋ ತೆಗೆಯುವ ಎಂದು ನಾನು ಮಾತು ಆರಂಭಿಸುವ ಮುನ್ನವೇ ಗೆಳೆಯ ಮುನ್ನಾ ಮಾತನಾಡಲು ಶುರು ಮಾಡಿದ್ದರು.
ಒಂದು ಕಾಲದಲ್ಲಿ ಇದೇ ಮನೆಯಲ್ಲೇ ಸುತ್ತಲ ಹತ್ತು ಹಳ್ಳಿಯ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತಿತ್ತು ಎಂದರು.
ಓಹೋ..ಓಹೋ.. ಅಂತ ವಿಶೇಷ ಏನ್ ಗುರುವೇ ಈ ಮನೆಯಲ್ಲಿ, ನಿಲ್ಲಿಸು ಈಗ ಡೇನಲ್ಲಿ ಏನು ನಡೆಯುತ್ತೆ ನೋಡೋಣ ಅಂದೆ ಗೇಲಿಯಿಂದ.
ಕಾರು ನಿಲ್ಲಿಸಬೇಡಿ. ನಡೆಯಿರಿ. ಹತ್ತೂ ಊರಿನ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತ್ತಿದ್ದದ್ದು ಇಲ್ಲೇ. ಆದರೆ, ಎಲ್ಲಾ ಹೆಣ್ಣು ಮಕ್ಕಳ ಜೊತೆ ಮಲಗುತ್ತಿದ್ದದ್ದು ಮಾತ್ರ ಒಬ್ಬನೇ. ಅವನೇ ಸತ್ಯಪ್ಪ ವಡ್ಡರ ಎಂದು ಪ್ರಥಮ ರಾತ್ರಿಗಳ ಕಥೆಯ ಹಾಳೆಗಳು ತಿರುಗತೊಡಗಿದವು.
ಅದು ಸುಮಾರು 1935 - 1960ರ ನಡುವೆ ನಡೆದ ದರ್ಬಾರಿನ ದಿನಗಳು. ಈ ಸತ್ಯಪ್ಪ ವಡ್ಡರ ಶ್ರೀಮಂತನೂ ಹೌದು, ದೊಡ್ಡ ಪಾಳೇಗಾರ. ಈಗಿನ ಅರ್ಥದಲ್ಲಿ ಹೇಳಬೇಕು ಅಂದರೆ ರೌಡಿ. ಗೂಂಡಾ ಆಗಿದ್ದ. ಅರಬಾವಿಯಿಂದ ಜಮಖಂಡಿಯವರೆಗೂ ಎಲ್ಲೂ ತಪ್ಪದಂತೆ ಹೊಲವಿತ್ತು ಸತ್ಯಪ್ಪನಿಗೆ ಎಂದು ಹೇಳುತ್ತಾರೆ. ಸುತ್ತಲ ಯಾವುದೇ ಹಳ್ಳಿಯಲ್ಲಿ ಮದುವೆಯಾದರೂ ಆ ಹೆಣ್ಣು ಮಗಳ ಮೊದಲ ರಾತ್ರಿ ಮಾತ್ರ ಸತ್ಯಪ್ಪ ವಡ್ಡರ ಜೊತೆಯೇ ಆಗಬೇಕಿತ್ತು. ಇಲ್ಲವೇ ಜೀವ ಕಳೆದುಕೊಳ್ಳಬೇಕಿತ್ತು.
ಅದೇ ಕಟ್ಟಪ್ಪಣೆಯನ್ನು ತನ್ನ ಹಣಕಾಸಿನ ಲೆಕ್ಕ ನೋಡಿಕೊಳ್ಳುತ್ತಿದ್ದಾತನ ಮಗಳಿಗೂ ಅನ್ವಯಿಸಿದ. ಕೈ ಕೈ ಮುಗಿದು ಕಾಲಿಗೆ ಬಿದ್ದರೂ ಸತ್ಯಪ್ಪನ ಆಸೆ ಮಾತ್ರ ಕರಗಲಿಲ್ಲ. ಲೆಕ್ಕದವನ ಮಗಳೊಂದಿಗೆ ಮಲಗಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿಬಿಟ್ಟ. ಬಡಪಾಯಿ ಲೆಕ್ಕದವ ಸತ್ಯಪ್ಪನ ಮೇಲೆ ಸೇಡು ತೀರಿಸಿಕೊಳ್ಳುವುದು ದೂರದ ಮಾತಾಗಿತ್ತು. ಆಗ, ಬ್ರಿಟೀಷರು ಆದಾಯ ತೆರಿಗೆಗಾಗಿ ತಪಾಸಣೆ ನಡೆಸ ತೊಡಗಿದರು. ಗುಟ್ಟಾಗಿ ಸತ್ಯಪ್ಪನ ಕಳ್ಳಲೆಕ್ಕದ ಮಾಹಿತಿ, ಅವಿತಿಟ್ಟ ಸಂಪತ್ತಿನ ಮಾಹಿತಿಯನ್ನು ಬ್ರಿಟೀಷರಿಗೆ ಮುಟ್ಟಿಸಿದ. ಬ್ರಿಟೀಷರು ಎಲ್ಲವನ್ನೂ ಜಫ್ತು ಮಾಡಿಕೊಂಡರು.
ಎಲ್ಲಾ ಗೂಂಡಾಗಿರಿಯ ಮೊದಲ ಶಕ್ತಿಯಾದ ಸಂಪತ್ತು ಅವನಿಂದ ದೂರಾಗಲು ತೊಡಗಿತ್ತು. ಅವನ ದರ್ಪವೂ ನಿಧನವಾಗಿ ಕ್ಷೀಣಿಸತೊಡಗಿತು. ಅಷ್ಟರಲ್ಲಿ ಭಾರತಕ್ಕೆ ಸ್ವಾತಂತ್ರ್ಯವೂ ಬಂತು. ಅನೇಕ ಬದಲಾವಣೆಗಳ ಗಾಳಿಗೆ ಗೋಕಾಕ ತಾಲೂಕು ಮೈ ಒಡ್ಡಿಕೊಂಡಿತು. ಆದರೆ, ವಯಸ್ಸಾಗುತ್ತಿದ್ದ ಸತ್ಯಪ್ಪನಿಗೆ ಮತ್ತಷ್ಟು ಹೆಣ್ಣು ಚಪಲ ಹೆಚ್ಚಾಯಿತು. ಮೊದಲಿನಂತೆ ಅಲ್ಲವಾದರೂ ಹೆದರುವವರನ್ನು ಹೆದರಿಸಿ ಚಪಲ ತೀರಿಸಿಕೊಳ್ಳುತ್ತಿದ್ದ. ಸತ್ಯಪ್ಪನ ತೆವಲಿಗೆ ಜೀವ ಕಳೆದುಕೊಂಡಕೆಯ ಸಾವಿನ ಪ್ರಕರಣದ ತನಿಖೆ ಖಡಕ್ ಅಧಿಕಾರಿಗಳು ಮುಂದಾದರು. ಆಗ ಸತ್ಯಪ್ಪನ ಮನೆ ಮೇಲೆ ದಾಳಿ ನಡೆಸಿದರು. ಅವನ ಮನೆ ಹಿಂದೆ ತೆಗ್ಗು ತೆಗೆಯಲು ತೊಡಗಿದರು. ಸುಮಾರು ೨ ಅಡಿಯಷ್ಟು ಆಳ ತೆಗೆಯುತ್ತಿದ್ದಂತೆ ಮೊದಲು ಚಿಮ್ಮಿದ್ದು ತಲೆಬುರುಡೆ. ಹಾಗೆ ಅಗೆಯುತ್ತಾ ಹೋಗುತ್ತಿದ್ದಂತೆ ತಲೆಬುರುಡೆ, ಮೂಳೆಗಳು ಎಷ್ಟು ಎಂಬುದನ್ನು ಲೆಕ್ಕ ಇಟ್ಟವರಾರು ಈಗ ಉಳಿದಿಲ್ಲವಂತೆ. ಅದಾದ ನಂತರ ಸತ್ಯಪ್ಪನ ಅವನತಿ ಆರಂಭವಾಯಿತಂತೆ. ಕೊನೆಗೆ ನಾನಾ ಕಾಯಿಲೆಗಳು ಅಮರಿಕೊಂಡು ಚಿಂತಾಜನಕ ಸಾವು ಕಂಡನಂತೆ. ಆತನ ಅಧಿಕೃತ ಪತ್ನಿಗೆ ಹುಟ್ಟಿದ ಮಕ್ಕಳ ಮಕ್ಕಳು ಈಗ ಆ ಬಂಗಲೆಯಲ್ಲಿ ಇದ್ದಾರೆ. ಆ ಬಂಗಲೆ ಮೇಲಿನ ಧೂಳು ನೋಡಿದರೆ ತಾತನ ಅಬ್ಬರ ಯಾವುದೂ ಆ ಮನೆ, ಮನದಲ್ಲಿ ಉಳಿದಿಲ್ಲ. ಸತ್ಯಪ್ಪ ವಡ್ಡರ ಎಂದರೆ ನಡಗುತ್ತಿದ್ದ ಗೋಕಾಕ ತಾಲೂಕು ಈಗ ಈ ಮನೆ ಕಡೆಗೆ ಅಸಹ್ಯದಿಂದ ನೋಡುತ್ತಾ ತಮಗೆ ತೋಚಿದಂತೆ ಕಥೆ ಹಳಲು ಶುರುವಿಡುತ್ತಾರೆ. ಆ ಮನೆಯಲ್ಲಿ ಇರುವವರನ್ನು ಕರುಣೆಯಿಂದ ನೋಡುತ್ತಾರೆ. ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುತ್ತಿದೆ ಎಂಬುದು ಅರಬಾವಿ ಮಠದ ಪಕ್ಕದ ಗುಡಿಸಲು ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಾ ಕುಳಿತಿದ್ದ ಹಿರಿಯರೊಬ್ಬರ ವಾದವಾಗಿತ್ತು.
ಎಲ್ಲಾ ಅನ್ಯಾಯ, ಅಕ್ರಮ ಎಸಗಿದವರೇ ಸುಖದಿಂದಲೇ ಜೀವಿಸುತ್ತಾ, ಜೀವ ಬಿಟ್ಟ ಅನೇಕ ಉದಾಹರಣೆಗಳಿವೆ. ಇನ್ನು ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುವುದೇ ಎಂಬ ನನ್ನ ನಖರ ಪ್ರಶ್ನೆ ತುಟಿಗೆ ಬಂತೇ ಹೊರತು ಶಬ್ದವಾಗಿ ಹೊರ ಹೊಮ್ಮಲಿಲ್ಲ.
ಗೋಕಾಕ ತಾಲೂಕಿಗೆ ಕುಟುಂಬ ರಾಜಕಾರಣ, ಗೂಂಡಾಗಿರಿ ಇತ್ತೀಚಿಗೆ ಅಂಟಿಕೊಂಡ ರೋಗವಲ್ಲ. ಅದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಜಮೀನುದಾರಿಕೆ, ಪಾಳುದಾರಿಕೆಯ ಗಟ್ಟಿ ಬೇರಿದೆ ಎಂಬುದು ಅರ್ಥವಾಯಿತು. ಆಮೇಲೆ ಆಧುನಿಕ ಪಾಳೇಗಾರರ ಮೇಲೆ ನನಗೆ ಅಷ್ಟಾಗಿ ಸಿಟ್ಟು ಬರಲಿಲ್ಲ. ಶಿಕ್ಷಣ, ಸ್ವಾತಂತ್ರ್ಯ ಜನಪ್ರಿಯ ಆಗಿರುವ ಈ ಕಾಲದಲ್ಲೂ ಜನರನ್ನು ಇನ್ನು ಹಿಡಿದಿಟ್ಟಿದ್ದಾರಲ್ಲ ಎಂದು ಆಶ್ಚರ್ಯವೇ ಆಯಿತು.

Friday, January 2, 2009

ಎಡವಿಬಿದ್ದರೆ ಬಾರ್‌ನಲ್ಲಿ ಎಂಬ ಊರಿನಲ್ಲಿ..,


ನಮ್ಮೂರಿನಲ್ಲಿ ಒಂದು ಮಾತಿದೆ, ಎಡವಿ ಬಿದ್ದರೆ ಬಾರ್‌ನಲ್ಲಿ, ನಗೆದು ಬಿದ್ದರೆ ದವಾಖಾನೆಯಲ್ಲಿ ಎಂದೇ ಮಾತಿಗೆ ಆರಂಭಿಸಿದರು ನನಗೆ ಗೋಕಾಕ ತಾಲೂಕು ಪರಿಚಯಿಸಿದ ಹಿರಿಯ ವರದಿಗಾರ ಮಿತ್ರ ಮುನ್ನಾ ಬಾಗವಾನ್. ಗೋಕಾಕ ನಗರದ ರಸ್ತೆಯೊಂದರಲ್ಲೇ ನಾಲ್ಕಾರು ಬಾರ್ ಅಂಡ್ ರೆಸ್ಟೋರಂಟ್‌ಗಳು, ಅದು ತಾಲೂಕಾದರೂ ಮೆಘಾ ಸಿಟಿಯಲ್ಲಿ ಕಾಣುವಂತಹ ಫೈವ್ ಸ್ಟಾರ್ ಶೈಲಿಯ ಆಸ್ಪತ್ರೆಗಳನ್ನು ಕಂಡು ನಾನು ಅವಕ್ಕಾದಾಗ ಮುನ್ನಾ ಹೇಳಿದ್ದೇ ಹಾಗೆ.
ಕರದಂಟು ಖ್ಯಾತಿಯ ಗೋಕಾಕ ನಗರವು ರಕ್ತಸಿಕ್ತ ರಾಜಕಾರಣಕ್ಕೂ ಹೆಸರು ವಾಸಿ. ಹೆಸರಿಗೆ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಆದರೆ, ಇದು ಒಂದು ಜಿಲ್ಲೆಯಾಗುವಷ್ಟು ಬೆಳೆದಿದೆ. ಈ ತಾಲೂಕಿನ ಒಡಲಲ್ಲಿ ನಾಲ್ಕಾರು ಸಕ್ಕರೆ ಕಾರ್ಖಾನೆ, ಸಿಮೆಂಟು ಕಾರ್ಖಾನೆ ಹಾಗೂ ಕುಟುಂಬ ರಾಜಕಾರಣವಿದೆ.
ಇದೇ ತಾಲೂಕಿನ ಅರಬಾವಿ ವಿಧಾನಸಭಾ ಕ್ಷೇತ್ರವು ಆಪರೇಷನ್ ಕಮಲದಿಂದಾಗಿ ಇತ್ತೀಚೆಗೆ ಉಪ ಚುನಾವಣೆ ಎದುರಿಸಿತು. ಅದಕ್ಕೆ ಸಾಕ್ಷಿಯಾಗುವ ಅವಕಾಶವನ್ನು ನಮ್ಮ ಸಂಪಾದಕರು ನನಗೆ ಕಲ್ಪಿಸಿ ಕಳುಹಿಸಿಕೊಟ್ಟಿದ್ದರು. 10 ದಿನಗಳು ಅಲ್ಲಿ ಕೆಲಸ ಮಾಡಿದ್ದು, ಸಿಕ್ಕ ಗೆಳೆಯರು, ಗಳಿಸಿದ ಅನುಭವ ನನ್ನ ಪಾಲಿಗೆ ಅಮೂಲ್ಯ. 10 ದಿನದ ಉದ್ದಕ್ಕೂ ನನ್ನ ಸಲುಹಿದ ಮುನ್ನಾ ಯಾವಾಗಲೂ ನನೆಪಿನಲ್ಲಿ ಉಳಿಯುತ್ತಾರೆ. ಅವರೊಬ್ಬ ಅದ್ಭುತ ಸ್ಟೋರಿ ಟೆಲ್ಲರ್. ಅದೆಲ್ಲಕ್ಕಿಂತ ಹೆಚ್ಚಾಗಿ ಜೀವನ ಪ್ರೇಮ ಉಳಿಸಿಕೊಂಡಿರುವ ರಸಿಕ. ಅದೇ ತಾಲೂಕಿನ ಮೂಡಲಗಿ ಗ್ರಾಮದ ನಮ್ಮ ಪ್ರತಿನಿಧಿ ಕೃಷ್ಣ ಗಿರಿಯಣ್ಣವರ ತೋರಿಸಿದ ಪ್ರೀತಿ, ಕಳಕಳಿ ನೆನೆದರೆ ಇಂದಿಗೂ ಮನಸ್ಸು ಪ್ರಫುಲ್ಲವಾಗುತ್ತದೆ.
ಈ ತಾಲೂಕಿನಲ್ಲಿ ಜಾರಕಿಹೊಳಿ ಕುಟುಂಬವನ್ನು ಸಾಹುಕಾರರು ಎಂದೇ ಕರೆಯುತ್ತಾರೆ. ಗೋಕಾಕ ತಾಲೂಕಿನ ಬಗ್ಗೆ ಮತಾನಾಡುವಾಗ ಆ ಕುಟುಂಬವನ್ನು ಬಿಟ್ಟು ಮಾತನಾಡುವುದೇ ಕಷ್ಟ. ಅವರ ಬಗ್ಗೆ ಹೆಚ್ಚು ಮಾತನಾಡುವುದು ಕಷ್ಟ. ಇಡೀ ತಾಲೂಕಿನಲ್ಲಿ ಆ ಕುಟುಂಬದ ಬಗ್ಗೆ ಮೆಚ್ಚುವವರು, ಭಕ್ತಿ ತೋರುವವರು, ಭೀತಿಯಿಂದಲೇ ಬಾಯಿ ತೆರೆಯುವವರು, ಅವರ ಕಂಡರೆ ಹಲ್ಲು ಹಲ್ಲು ಕಡಿಯುವವರು ಸಿಗುತ್ತಾರೆ. ಅವರ ರಕ್ತಸಿಕ್ತ ರಾಜಕಾರಣ, ವ್ಯವಹಾರದ ಬಗ್ಗೆ ಮುಂದೆದಾದರೂ ಬರೆದೇನು.
ದಾರಿ ತಪ್ಪುವ ಮುನ್ನ - ಎಡವಿಬಿದ್ದರೆ ಬಾರಿನಲ್ಲಿ ಎಂಬ ಊರಿನಲ್ಲಿ ಸಿಕ್ಕ ಮುನ್ನಾ ಬಾಗವಾನ ಅವರು ಒಂದು ರಾತ್ರಿಯ ತೀರ್ಥಗೋಷ್ಠಿಯ ನಂತರ ಲಾಡ್ಜ್ ಎದುರಿನ ರಸ್ತೆಯಲ್ಲಿ ಏಳೆಂಟು ವರದಿಗಾರ ಮಿತ್ರರು ಮಾತನಾಡುತ್ತಾ ನಿಂತಿದ್ದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರನ್ನು ನೋಡಿದ ಕೂಡಲೇ ಮುನ್ನಾ ಜಾಗೃತರಾದರು. ತಾವು ತೀರ್ಥ ಸೇವನೆ ಶುರು ಮಾಡಿದಕ್ಕೆ ಪೊಲೀಸರೇ ಕಾರಣ ಎಂದು ಹೇಳಿದ ಕಥೆ ಹೀಗಿದೆ...,
ಅದು ಬಾಬ್ರಿ ಮಸೀದಿ ಉರುಳಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಮು ಗಲಭೆ ನಡೆಯುತ್ತಿದ್ದ ದಿನಗಳು. ಆಗ ಅಲ್ಲಿನ ಸ್ಥಳೀಯ ಪತ್ರಿಕೆಯಾದ ಗೋಕಾಕ ಟೈಮ್ಸ್‌ನಲ್ಲಿ ಮುನ್ನಾ ವರದಿಗಾರರಾಗಿದ್ದರು. ಆಗೆಲ್ಲಾ ಒಂದು ಫೋಟೋ ಬ್ಲಾಕ್ ಮಾಡಿಸಲು ಸಹ ಬೆಳಗಾವಿಗೆ ಹೋಗಬೇಕಿತ್ತು. ಇನ್ನು ಪಿಟಿಐ ಸುದ್ದಿಗಳಿಗೂ ಬೆಳಗಾವಿಗೆ ಹೋಗಿ, ಅಲ್ಲಿಯೇ ಅನುವಾದ ಮುಗಿಸಿ ಹೊತ್ತುಕೊಂಡು ಬರುವ ಕೆಲಸ ಮುನ್ನಾ ಅವರದು. ಹಾಗೆ ಹೊರಟ ಒಂದು ದಿನ ಗೋಕಾಕದಲ್ಲಿ ಕರ್ಫ್ಯೂ.. ವಿಧಿಸಲಾಗಿತ್ತು. ತನ್ನ ಗುರುತಿನ ಚೀಟಿಯನ್ನು ಕೊರಳಿಗೆ ನೇತು ಬಿಟ್ಟುಕೊಂಡು ರಸ್ತೆಗಿಳಿದರು ಮುನ್ನಾ. ಎಲ್ಲಾ ಹೊರಗಿನ ಪೊಲೀಸರೇ ಆದ್ದರಿಂದ ಇವರನ್ನು ವರದಿಗಾರರು ಎಂದು ಗುರುತಿಸಬೇಕಿದ್ದದ್ದು ಕೊರಳಿನಲ್ಲಿದ್ದ ಐಡಿ ಕಾರ್ಡ್‌ನಿಂದಲೇ. ಅವರು ಬಸ್ಸು ನಿಲ್ದಾಣದ ಕಡೆಯಿಂದ ಹಾದು ಹೋಗುವಾಗ ಮಲ್ಲಿಕಾಜನ ಗುಡ್ಡದ ಕಡೆಯಿಂದ ಇಬ್ಬರು ಕಂದಮ್ಮಗಳೊಂದಿಗೆ ಮಹಿಳೆಯೊಬ್ಬರು ಬ್ಯಾಗು, ಬಿದಿರು ಬುಟ್ಟಿ ಹಿಡಿದು ಬರುತ್ತಿದ್ದಳು. ಕೂಡಲೇ ಆಕೆಯನ್ನು ಮುತ್ತಿಕೊಂಡ ಪೊಲೀಸರು ತಪಾಸಣೆಗೆ ಇಳಿದರು. ಮಕ್ಕಳು ಅಳಲಾರಂಭಿಸಿದವು. ಇಬ್ಬರು ಪೊಲೀಸರು ಬುಟ್ಟಿ ಬ್ಯಾಗು ಜಾಲಾಡಿ, ಅದರಲ್ಲಿದ್ದ ಒಂದಷ್ಟು ಅನ್ನ ಚೆಲ್ಲಿದರು. ಬಟ್ಟೆ ಎಳೆದಾಡಿದರು. ಪೊಲೀಸೊಬ್ಬ ಆಕೆಯತ್ತ ಲಾಠಿ ಬೀಸತೊಡಗಿದ. ಬೇಡಿ ತಂದಿದ್ದ ಅನ್ನವನ್ನು ಕಸಿದುಕೊಂಡಿರಲ್ಲಾ. ಇನ್ನು ಯಾವ ಮನೆಯಲ್ಲಿ ಬೇಡಲಿ. ಯಾರೂ ಬಾಗಿಲು ತೆಗೆಯೊಲ್ಲಾ ಎಂದು ಕಣ್ಣೀರಾಗತೊಡಗಿದಳು. ಆದರೂ ಲಾಠಿಗೆ ಕನಿಕರ ಬರಲಿಲ್ಲ.
ಅದನ್ನು ತಡೆಯಲು ಹೋದೆ ಅಷ್ಟೇ. ಹಿಗ್ಗಾ ಮುಗ್ಗಾ ಲಾಠಿಗಳು ಅಬ್ಬರಿಸಿ ಮುಗಿಬಿದ್ದು ನಗ್ಗು ಮಾಡಿದವು ನನ್ನ. ಕಾಲುಗಳು ಸರಿದಾಡಿದವು. ತೋಳಿಗೆ, ಮುಖಕ್ಕೆ ಬ್ಯಾಂಡೇಜ್ ಬಂತು. ಆ ನೋವು ಗೊತ್ತಾಗದೇ ಇರಲು ಕುಡಿ ಎಂದು ಗೆಳೆಯರು ಪ್ರೇರೇಪಿಸಿದರು. ಅಂದಿನಿಂದ ತೀರ್ಥ ಸೇವನೆ ಶುರುವಾಯಿತು ಎಂದು ಅವರದ ಅದ್ಭುತ ಶೈಲಿಯಲ್ಲಿ ಕಥೆ ಹೇಳಿದರು. ನಮ್ಮೊಂದಿಗೆ ಪೊಲೀಸರು ನಕ್ಕರು. ನಾವು ನಕ್ಕೆವು. ಆದರೆ ಮುನ್ನಾ ಮುಖದಲ್ಲಿ ನಗುವಿಗಿಂತ ಹೆಚ್ಚು ವಿಷಾದವೇ ಕಾಣುತಿತ್ತು...,

ಮುಂದಿನ ಘಟನೆ - ಆ ಊರಲ್ಲಿ ಯಾರದೇ ಮದುವೆಯಾದರೂ ಅವರ ಫಸ್ಟ್ ನೈಟ್ ಮಾತ್ರ ಆ ಮನೆಯಲ್ಲೇ ನಡೆಯುತಿತ್ತು...!

Wednesday, December 31, 2008

ಕಳೆಯಿತು ಮತ್ತೊಂದು ವರ್ಷ


ಕಳೆಯಿತು ಮತ್ತೊಂದು ವರ್ಷ
ಹರ್ಷವೂ ಇತ್ತು, ಸಮಸ್ಯೆಗಳ ವರ್ಷವೂ ಇತ್ತು ಯುಗಾದಿಯಂತೆ. ಮತ್ತೆ ಗೋಡೆ ಮೇಲಿನ ಕ್ಯಾಲೆಂಡರ್ ಬದಲಿಸಿ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದೇವೆ
ಈ ವರ್ಷವಾದರೂ ಹರ್ಷ ಹೆಚ್ಚಾಗಿರಲಿ. ಬೇವೂ ಇರಲಿ, ಇಲ್ಲದಿದ್ದರೆ ಬೆಲ್ಲದ ಸವಿ ಗೊತ್ತಾದೀತು ಹೇಗೆ?
2008ರ ಅಂತ್ಯದ ತಿಂಗಳು ನನಗೆ ನಾನಾ ಅನುಭವ ನೀಡಿತು. ವಿವಾದಿತ ಸುದ್ದಿಯೊಂದರ ಬೆನ್ನತ್ತಿದ್ದು, ನಂತರ ಅರಬಾವಿ ಚುನಾವಣಾ ವರದಿಗೆ ತೆರಳಿ ಸಾಕಷ್ಟು ಅನುಭವ ಪಡೆದುಕೊಂಡು ಬಂದೆ. ಒಂದಿಷ್ಟು ರೋಚಕ ಕಥೆಗಳನ್ನು ಗೋಕಾಕದಲ್ಲಿ ಕೇಳಿ ಬಂದಿದ್ದೇನೆ. ಅವೆಲ್ಲವನ್ನೂ ಹೇಳಿಕೊಳ್ಳುವ ಆಶಯವಿದ. 2009ರಲ್ಲಿ ನಾನು ನಿಮಗೆ ಕಥೆ ಹಳಿ ಕಾಡುತ್ತೇನೆ. ಸಹಿಸಿಕೊಳ್ಳಿ.
2008ರಲ್ಲಿ ನನ್ನ ಟೀಕಿಸಿ ತಪ್ಪು ತಿದ್ದಿಕೊಳ್ಳುವಂತೆ ಮಾಡಿದವರಿಗೆ, ಸವಾಲು ಹಾಕಿ ನನ್ನ ಶಕ್ತಿ, ದೌರ್ಬಲ್ಯ ತಿಳಿಸಿಕೊಟ್ಟವರಿಗೆ, ನಿಂದಿಸುವವರೆ ಹೆಚ್ಚಿದ್ದಾಗ ಮೆಚ್ಚಿ ಬೆನ್ನು ತಟ್ಟಿದವರಿಗೆ, ನಾನು ಏನೇ ಮಾಡಿದರೂ ಸಲಹುವ, ಪ್ರೀತಿಸುವ ಅವ್ವ, ಅಪ್ಪ, ತರಲೆ ತಮ್ಮ ಹಾಗೂ ಅಸಂಖ್ಯ ಗೆಳೆಯರಿಗೆ ಧನ್ಯವಾದಗಳು. ಇಂಥದಕ್ಕೆಲ್ಲಾ ಕಾರಣವಾಗಿರುವ ನನ್ನ ಸಂಸ್ಥೆಗೆ, ಸಹೋದ್ಯಗಿಗಳಿಗೆ 2009 ಒಳಿತು ಮಾಡಲಿ. ನಿಮ್ಮ ಕನಸುಗಳು ನನಸಾಗಲಿ, ನಿಮ್ಮ ಗುರಿಗಳಿಗೆ ನೀವು ತಲುಪಿಕೊಳ್ಳಿ ಎಂಬ ಹಾರೈಕೆಯೊಂದಿಗೆ...,

Tuesday, December 9, 2008

ಹೋಕೈತ್ರಿ, ಹೋಟೆಲ ಧಾರವಾಡದಲ್ಲೂ ಹೋಗ್ತಾ ಇದೆ ರೀ..,




"ಬಸವೇಶ್ವರ ಹೋಟೆಲ್ದಾಗ ನಾಷ್ಟಾ ಮಾಡಿ ಹೋಕೀನಿ. ನೀನೂ ಹೋಟಲ್ಗಾ ಬಂದ್ಬುಡ್ರಲಾ. ಅಲ್ಲಿ ದೀಡ್ ರೂಪಾಯ್ಗೊಂದು ಇಡ್ಲಿ ಸಿಕ್ತಾವು. ಪೌಣೆ ರುಪಾಯ್ಗೆ ಚಾ ಸಿಕ್ತಾವು. ಹೋಟೆಲ ಬಾಜೂಕ ಬಸ್ ಬರ್‍ತಾವು, ಅಲ್ಲಿಂದಲೇ ಶಾಲಿಗೆ ಹೋಗುವಂತೆ. ನಾ ಎಮ್ಮಿಕೆರಿಗೆ ಹೋಕೀನಿ. ಏನ್ ಮಾಡ್ಲಿಕತ್ತಿ ಲಘುನ ಬಾ"....
ಇದು ಹುಬ್ಬಳ್ಳಿ -ಧಾರವಾಡ ಸೊಗಡಿನ ಭಾಷೆ. ವ್ಯಂಜನಗಳ ಹಂಗಿಲ್ಲ. ಶಬ್ಧಗಳನ್ನು ಅರ್ಧ ಉಚ್ಛರಿಸಿ ಗೊತ್ತಿಲ್ಲ. ಅವರ ಹೃದಯ ವೈಶ್ಯಾಲ್ಯದಂತೆಯೇ ಪದ ಉಚ್ಛಾರದಲ್ಲೂ ಇಲ್ಲಿನವರು ಜಿಪುಣರಲ್ಲ. ಕೆಲವು ನಾಮಪದಗಳನ್ನು ಉಚ್ಛರಿಸುವ ಕೊನೆಯಲ್ಲಿ 'ಇ' 'ಈ' ಕಾರ ಬಳಸುತ್ತಿದ್ದರು. ಮಾತುಕತೆಯ ವೇಳೆ ಹೇರಳವಾಗಿ ಮರಾಠಿ ಹಾಗೂ ಹಿಂದಿ ಪದಗಳು ಬಳಕೆಗೆ ಬರುತ್ತಿದ್ದವು. ಈ ಶೈಲಿ ನಿಧಾನವಾಗಿ ಮಾಯವಾಗುತ್ತಿದೆ.
ಇನ್ನು ಹತ್ತಿಪ್ಪುತ್ತು ವರ್ಷಗಳಿಗೆ ಈ , ಭಾಷೆ , ಈ ಸೊಗಡು ಇತಿಹಾಸ ಆಗುತ್ತದೆ. ಈ ಸೊಗಡಿನಲ್ಲಿ ಬರೆದಿರುವ ಪುಸ್ತಕ, ಕರಪತ್ರ ಸಿಕ್ಕರೆ ಮುಂದಿನ ತಲೆ ಮಾರಿನವರು ನಾವುಗಳು ಈಗ ಹಳಗನ್ನಡದ ಶಾಸನ ಓದಲು ತಡವರಿಸುವಂತೆಯೇ ತಡವರಿಸುವ ಕಾಲ ಬಂದರೂ ಆಶ್ಚರ್ಯವಿಲ್ಲ. ಹಾಗೆ ಇಲ್ಲಿ ಭಾಷೆ ಬದಲಾಗುತ್ತಿದೆ.
ಹಳೇ ಮೈಸೂರು ಭಾಗದ, ರಾಜಧಾನಿ ಬೆಂಗಳೂರಿನಂತೆ ಇಲ್ಲಿನ ಭಾಷೆಯಲ್ಲಿ ಈಗ ಹೇರಳವಾಗಿ ಇಂಗ್ಲಿಷ್ ಬಳಕೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಫ್ಲೆಕ್ಸ್ ಬೋರ್ಡುಗಳು ಬಂದು ಇಲ್ಲಿನವರನ್ನು ವ್ಯಂಜನ ಬಳಸುವಂತೆ, ಪದ ಬಳಕೆಯಲ್ಲಿ ಜಿಪುಣರಾಗುವಂತೆ ಮಾಡಿದೆ.
ವೋಡಾಫೋನ್, ಏರ್‌ಟೆಲ್ ಕಂಪನಿಯ ಬೋರ್ಡುಗಳನ್ನು ಇಲ್ಲಿಯ ಪ್ರಕಾರ ಬರೆದರೆ ವೋಡಾಫೋನ, ಏರಟೆಲ ಎಂದು ಬರೆಯಬೇಕಿತ್ತು. ಆ ರೀತಿಯ ಒಂದೇ ಒಂದು ಬೋರ್ಡು ಕಾಣ ಸಿಗುವುದಿಲ್ಲ. ಇದು ಉದಾಹರಣೆ ಮಾತ್ರ. ಹೋಟೆಲ್, ರೆಸ್ಟೋರಂಟ್, ಕ್ಲಿನಿಕ್ ಎಂಬ ಪದಗಳು ಚಾಲ್ತಿಗೆ ಬಂದಿವೆ. ಇದಕ್ಕೆ ಮೊದಲ ಕಾರಣ ಬೆಂಗಳೂರಲ್ಲೇ ತಯಾರಿಗೆ ಬರುವ ಫ್ಲೆಕ್ಸ್ ಬೋರ್ಡು.
ಇನ್ನು ಭಾಷೆಯಲ್ಲಿನ ಬದಲಾವಣಗೆ ಮೊದಲ ಕೊಡುಗೆ ಟಿವಿ ಮತ್ತು ಸಿನಿಮಾದ್ದು. ನಂತರದ್ದು ಇಲ್ಲಿನವರು ನೌಕರಿಗಾಗಿ ಬೆಂಗಳೂರಿಗೆ ಹೋಗಿ ನೆಲೆಸಿದ್ದು. ಇಲ್ಲಿನ ಸೊಗಡಿನ ಭಾಷೆಗೆ ಅಲ್ಲಿನ ಮಂದಿ ನಕ್ಕಿದ್ದರಿಂದ ಅನಿವಾರ್ಯವಾಗಿ ಬೆಂಗಳೂರಿನ ಭಾಷೆ ವಾತಾವರಣಕ್ಕೆ ಒಗ್ಗಿಕೊಂಡಿದ್ದು ಎನ್ನುತ್ತಾರೆ .
?ಹೋಟೆಲ, ವೋಲಸೇಲ, ಗಜಾನನ ಟ್ರೇಡರ್ಸ, ಮೊಬೈಲ ಪಾಯಿಂಟ, ಎಲೆಕ್ಟ್ರಾನಿಕ್ಸ, ಬ್ಯಾಳಿ, ಬಾಳಿಹಣ್ಣು? ಇತ್ಯಾದಿ ಇಲ್ಲಿನ ಸೊಗಡಿನ ಪದಗಳು ಇನ್ನು ಕೆಲವೆಡೆ ಕಾಣಸಿಗುತ್ತವೆ. ಕಾರಣ ಅವನ್ನು ಇಲ್ಲಿನ ಕಲಾವಿದರ ಕೈಯಲ್ಲಿ ಬರೆಸಿರುತ್ತಾರೆ. ಅಥವಾ ಇತ್ತೀಚೆಗೆ ಈ ಕಡೆಗೂ ಬಂದಿರುವ ಫ್ಲೆಕ್ಸ್ ಮುದ್ರಣದಿಂದ ಅವರು ಸಿದ್ಧಗೊಂಡಿರುತ್ತವೆ.
ಕೆಲವೇ ಕೆಲವು ಸಿನಿಮಾ ಧಾರವಾಹಿ ಬಿಟ್ಟರೆ ಬೇರೆಲ್ಲೂ ಇಲ್ಲಿನ ಭಾಷೆ ಬಳಕೆಯಾಗುತ್ತಿಲ್ಲ. ಇಲ್ಲಿಂದ ಹೋದ ಕಲಾವಿದರು ಈ ಬಗ್ಗೆ ಗಂಭೀರ ಪ್ರಯತ್ನ ಮಾಡಿಲ್ಲ. ಎಲ್ಲಕ್ಕೂ ಗೇಲಿಯ ಹಿಂಜರಿಕೆ ಕಾರಣ. ಸಿದ್ದಲಿಂಗ ಪಟ್ಟಣಶೆಟ್ಟರು ಇಲ್ಲಿಯದೇ ಭಾಷೆಯಲ್ಲಿ ಬರೆಯುತ್ತಿದ್ದ ?ಚಹಾದ ಜೋಡಿ ಚೂಡದ್ಹಾಂಗ? ಜನಪ್ರಿಯವಾಗಿತ್ತು.
ಜಾಗತೀಕರಣದ ಹೊಡೆತದಿಂದ ದೇಶದೆಲ್ಲಡೆ ಸಾಂಸ್ಕೃತಿಕ ಪಲ್ಲಟ ನಡೆಯುತ್ತಿರುವಂತೆಯೇ, ಹುಬ್ಬಳ್ಳಿ -ಧಾರವಾಡದ ಭಾಷೆಯ ಅನನ್ಯತೆ, ಸೊಗಡು ಮಾಯವಾಗುತ್ತಿದೆ
. ಅನ್ಯನತೆ ಉಳಿಸಿಕೊಳ್ಳಬೇಕಾ? ತಂತ್ರಜ್ಞಾನ -ಮಾಧ್ಯಮಗಳು ಬಡಿಸುತ್ತಿರುವ ರೆಡಿಮೇಡ್ ಭಾಷೆಯನ್ನೇ ಅಳವಡಿಸಿಕೊಳ್ಳಬೇಕಾ? ಯಾವುದು ಶುದ್ಧ? ಯಾವುದು ಅಶುದ್ಧ? ಎಂಬ ಪ್ರಶ್ನೆಗಳು ಏಳುವುದುಂಟು. ಇದಾವ ಪ್ರಶ್ನೆಗಳಿಗೂ ಕಿವಿ ಕೊಡುವ ವ್ಯವಧಾನವೂ ಇಲ್ಲದೆ ಇಲ್ಲಿ ಭಾಷೆ ಬದಲಾಗುತ್ತಿದೆ. ಬದಲಾವಣೆ ಮಾತ್ರ ಶಾಶ್ವತ ಎನಿಸುವುದಿಲ್ಲವೇ...?

Thursday, December 4, 2008

ಅವಳಿಗಾಗಿ ನೊಣವಾದನು...!

ಸೇವಂತಿ...
ಹೆಸರಿಗೆ ತಕ್ಕ ಹಾಗೇ ಇದ್ಧಳು. ನೋಡಿದರೇ ನೋಡುತ್ತಲೇ ಇರಬೇಕು ಎಂಬ ಆಸೆ ಇಡಿಯಾಗಿ ಆವರಿಸುವಂತೆ ಇದ್ದಳು. ಸೇವಂತಿಯ ಮನೆಯ ಬೀದಿಯ ಕೊನೆಗೇ ಸಂತೋಷನ ಮನೆ. ನೋಡಿದರೆ ಸಂತೋಷ ಆಗುವಂತೆಯೇ ಸ್ಮಾರ್ಟ್ ಇದ್ದ.
ಇಬ್ಬರು ಒಂದೇ ಸ್ಕೂಲಿನಲ್ಲಿ ಓದಿರಾದರೂ ಅವರಿಬ್ಬರೂ ಹತ್ತಿರಾದದ್ದು ಪಿಯುಸಿಗೆ ಬಂದ ಮೇಲೆಯೇ. ಸೇವಂತಿ ತಾನೂ ಸದ್ಯಕ್ಕೆ ಆ ಏರಿಯಾದ ಸುರಸುಂದರಿ ಎಂದು ಗೊತ್ತಿದ್ದೂ, ಸಿಂಪಲ್ ಆಗಿ ಎಲ್ಲರೊಂದಿಗೆ ಬೆರೆಯುತ್ತಿದ್ದಳು. ಅದೇ ರೀತಿಯಾಗಿ ಸಂತೋಷನಿಗೂ ಹತ್ತಿರಾದಳು. ಆದರೆ, ಸಂತೋಷ ಮನದಲ್ಲಿನ ಪ್ರೀತಿ - ಪ್ರೇಮ - ಪ್ರಣಯದ ಆಸೆಯನ್ನು ಹೇಳಿಕೊಳ್ಳಲು ಆಗಲೇ ಇಲ್ಲ. ಒಂದು ಶನಿವಾರ ಸೇವಂತಿ ಸ್ನಾನಕ್ಕೆ ಹೊರಟ ಸಮಯಕ್ಕೆ ಸರಿಯಾಗಿ ಸಂತೋಷ ಅವಳ ಮನೆ ಪ್ರವೇಶಿಸಿದ. ಸಂತೋಷ ಟಿವಿ ನೋಡ್ತಾ ಕೂತಿರು ಸ್ನಾನ ಮುಗಿಸಿ ಬಂದು ಬಿಡ್ತೇನೆ ಎಂದು ಕ್ಯಾಶುಯಲ್ ಆಗಿ ಹೇಳಿ ಸ್ನಾನದ ಮನೆ ಹೊಕ್ಕಳು.
ಈತ ಟಿವಿ ಕಡೆ ನೋಡಿದ್ದಕ್ಕಿಂತ ಹೆಚ್ಚಾಗಿ ಸ್ನಾನದ ಮನೆಯ ಕಡೆಯೇ ನೋಡುತ್ತಿದ್ದ. ಹಾಗೇ ನೋಡುವಾಗ ನೊಣವೊಂದು ಸ್ನಾನದ ಮನೆಯ ವೆಂಟಿಲೇಟರ್‌ನಿಂದ ನೊಣ ಹೊಕ್ಕೇ ಬಿಟ್ಟಿತು.
ಇತ್ತ ಸಂತೋಷನ ಹೊಟ್ಟೆಯಲ್ಲಿ ಬೆಂಕಿ ಹುಟ್ಟಿ ಜಪಿಸಲು ಶುರು ಮಾಡಿದ. ತಾನು ನಂಬಿದ, ತಿರುಗಿದ ದೇವರನಲ್ಲಿ ಜಪಿಸುತ್ತಲೇ ಮನೆ ಸೇರಿಕೊಂಡ. ಜಪಿಸುವಾಗ ಆತ ಕೇಳುತ್ತಿದ್ದದು ಇಷ್ಟೇ, ದೇವರೇ ನನ್ನನ್ನು ನೊಣ ಮಾಡು!.
ಅದು ಯಾವ ದೇವರಿಗೆ ಮರುಕ ಹುಟ್ಟಿತೋ ಕಾಣೆ. ಅದ್ಯಾವುದೋ ಒಂದು ಘಳಿಗೆಯಲ್ಲಿ ಸಂತೋಷ
ನೊಣವಾಗಿ ಬಿಟ್ಟ. ಸುಂಯ್ ಎಂದು ಹಾಡುತ್ತಾ.., ಹಾರುತ್ತಾ ಸೇವಂತಿಯ ಮನೆಗೆ ಹೋಗಿ ಸೇವಂತಿ ಸ್ನಾನಕ್ಕೆ ಹೋಗುವುದನ್ನೇ ಕಾಯುತ್ತಾ ಕೂತ. ಅವಳ ಸುತ್ತಾ ಸುಳಿದಾಡಿದ. ಇನ್ನು ಸ್ನಾನ ಮಾಡದೇ ಕೊಳಕಾಗಿರುವುದಕ್ಕೆ ನೊಣ ಕಾಡುತ್ತಿರಬೇಕು ಎಂದು ಕೊಂಡೇ ಅವಸರವಸರವಾಗಿ ಸ್ನಾನದ ಮನೆ ಸೇರಿದಳು ಸೇವಂತಿ.
ಸಂತೋಷ ಎಂಬ ನೊಣವು ಸ್ನಾನದ ಮನೆಯೊಳ ಹೋಗಿ ಸೇರಿಕೊಂಡು, ಶವರ್‌ನ ನೀರು ಸಾಗುವ ಪೈಪ್ ಮೇಲೆ ಕಾಯುತ್ತಾ ಕೂತಿತು. ಇತ್ತ ಸಂತೋಷ ಉಸಿರು ಬಿಗಿ ಹಿಡಿದು ಕಾಯುತ್ತಾ...ಕೂತು...ಇನ್ನೇನು...ಎಂದುಕೊಳ್ಳುತ್ತಿರುವಾಗಲೇ, ಸೇವಂತಿ ಸ್ನಾನಕ್ಕಾಗಿ ಬೆತ್ತಲಾಗಲು ಬಟ್ಟೆಗೆ ಕೈ ಹಾಕಿದಳು. ಕಂಟ್‌ಡೌನ್ ಶುರು ಮಾಡಿದ. ಹಾ... ೫,೪,೩,೨,೧ ಎನ್ನುತ್ತಿದ್ದಂತೆ..
ಲಪಕ್ ಲಪಕ್ ಎಂಬ ಎರಡೇ ಸದ್ದಿಗೆ ಸಂತೋಷ ಎಂಬ ನೊಣ ಹಲ್ಲಿಯ ಬಾಯಿ ಸೇರಿ ಹೊಟ್ಟೆಯೊಳಗೆ ಜಾಗ ಪಡೆದಿದ್ದ. ಈ ಸದ್ದು - ಸಾವು ಯಾವುದೂ ಸೇವಂತಿಗೆ ಕೇಳಿಸಲೇ ಇಲ್ಲ. ಸ್ನಾನ ಮಾಡಿ ಹೊರಬಿದ್ದಳು ಹಾಡಿಕೊಳ್ಳುತ್ತಾ.. ಸಂತೋಷಕ್ಕೆ ಹಾಡು...ಸಂತೋಷಕ್ಕೆ..,
(ಇದು ಬಹುಶಃ ಹೈಸ್ಕೂಲಿನ ದಿನಗಳಲ್ಲಿ ಓದಿಕೊಂಡ ಕಥೆ. ಜಪಾನ್ ಅಥವಾ ಚೀನಾ ದೇಶದ ಜನಪದ ಕಥೆ ಎಂಬ ಅಸ್ಪಷ್ಟ ನೆನಪು ಉಂಟು. ಯಾಕೋ ಈ ಕಥೆ ಹೇಳಬೇಕು ಅನಿಸಿತು. ನನ್ನ ಸ್ಟೈಲಿನಲ್ಲಿ ಹೇಳಿದ್ದೇನೆ. ಹೆಸರುಗಳು ಸುಮ್ಮನೆ ತಮಾಷೆಗೆ ಬಳಸಿದ್ದೇನೆ.)

Tuesday, December 2, 2008

ಯುದ್ಧ ಭೂಮಿಯಲ್ಲಿ ನಾನಿರಬೇಕಿತ್ತು ಎಂಬಾಸೆಯೂ, ಅಪಘಾತವೂ...,


ಮುಂಬೈನ ಹೋಟೆಲ್ ತಾಜ್, ಒಬೆರಾಯ್, ನಾರಿಮನ್ ಭವನಗಳ ಮೇಲೆ ಉಗ್ರರು ದಾಳಿ ಇಟ್ಟು ಗುಂಡಿನ ಮಳೆಗೆರೆಯುತ್ತಿರುವುದನ್ನು ಟಿವಿಯಲ್ಲಿ ನೋಡುತ್ತಿದ್ದರೆ ಛೇ ಛೇ ನಾನು ಅಲ್ಲಿ ಇರಬೇಕಿತ್ತು ಅಂತ ಆ ಕ್ಷಣಕ್ಕೆ ಅನಿಸಿತ್ತು. ಯಾಕೋ ಗೊತ್ತಿಲ್ಲ ಆ ಮೂರು ದಿನಗಳ ಕಾಲ ಆ ಯುದ್ಧ ಭೂಮಿಯಲ್ಲಿ ನಿಂತು ವರದಿ ಮಾಡುತ್ತಿದ್ದ ಪತ್ರಕರ್ತರನ್ನು ಕಂಡಾಗ ಅವರ ಬಗ್ಗೆ ಹೆಮ್ಮೆಗಿಂತ ತುಸು ಹೊಟ್ಟೆ ಕಿಚ್ಚೆ ಹೆಚ್ಚಾಯಿತು ನನಗೆ.
ತಿಂಗಳುಗಳ ಹಿಂದೆ ಮೈಸೂರಿನಲ್ಲಿ ಚಿರತೆ ಕಾಣಿಸಿಕೊಂಡು ಓಡಾಡುತ್ತಿದ್ದಾಗ ಟಿವಿ ನೋಡುತ್ತಾ ನೋಡುತ್ತಾ ಮೈಸೂರಿನ ಪತ್ರಕರ್ತರ ಮಿತ್ರರಿಗೆ ಫೋನ್ ಹಚ್ಚಿ ಹೊಟ್ಟೆ ಉರಿದುಕೊಂಡಿದ್ದೆ. ಆನೆ ಧಾರವಾಡದಲ್ಲಿದೆ ಎಂದು ಗೊತ್ತಾದ ಮೇಲೇಯೇ ಚಿರತೆ ಮೈಸೂರಿಗೆ ಬಂದಿದೆ ಎಂದು ಗೇಲಿ ಮಾಡಿದ್ದರು.
ಆಗೀಗ ಗೆಳೆಯರು, ನೀವು ಪತ್ರಕರ್ತರು ಯಾರಿಗಾದರೂ ಏನಾದರೂ ಆಗೋದನ್ನೆ ಕಾಯುತ್ತೀರಿ ಅಲ್ವಾ ಅಂತ ರೇಗಿಸೋದು ಉಂಟು. ಅದಕ್ಕೆ ನಾನು ವಿವರಣೆ ನೀಡಲು ನಿಂತ ಕೂಡಲೇ ಸುಮ್ಮನೆ ತಮಾಷೆ ಮಾಡಿದೋ ಸುಮ್ಮನಿರ್‍ಲಾ ಅಂತ ಹೇಳೋದು ಉಂಟು. ಒಮ್ಮೆ ಮೈಸೂರಲ್ಲಿ ಇದ್ದಾಗ ಎಲ್ಲಾ ಕೆಲಸ ಮುಗಿಸಿ ಬಾಗಿಲು ಹಾಕುವ ಹೊತ್ತಿಗೆ, ಪೊಲೀಸರೊಬ್ಬರ ಫೋನ್ ಬಂತು. ಅಯ್ಯೋ ಏನಾಯಿತು ಗೊತ್ತಿಲ್ಲ ಎಂದು ಗೊಣಗುತ್ತಾ ಫೋನ್ ಸ್ವೀಕರಿಸಿದೆ. ಮಂಡಕಳ್ಳಿ ಹತ್ತಿರ ಕಾರು ಬೈಕು ಆಕ್ಸಿಡೆಂಟ್ ಆಗಿದೆ ಚೆಕ್ ಮಾಡಿಕೊಳ್ಳಿ ಎಂಬ ಮಾಹಿತಿ ದೊರೆಯಿತು.
ಊರಿಂದ ಬಂದು ನನಗಾಗಿ ಕಾಯುತ್ತಿದ್ದ ಗೆಳೆಯನಿಗೆ ಕೂರಲು ಹೇಳಿ ಅಪಘಾತದ ವಿವರ ತೆಗೆಯಲು ಕುಳಿತೆ. ಸೀರಿಯಸ್ ಏನೂ ಇಲ್ಲ. ಮೈನರ್ ಇಂಜುರಿ ಆಗಿದೆ ಅಷ್ಟೇ. ಗಾಯಗೊಂಡವರ ಹೆಸರು... ಎಂದು ಹೆಸರಿಗಾಗಿ ಹುಡುಕಾಡಲು ತೊಡಗಿತು ಖಾಕಿ, ಆಗ ನಾನು, ಅಷ್ಟೇನಾ ಸತ್ತಿದ್ದರೆ ಮಾತ್ರ ಹೆಸರು ಹೇಳಿ. ಇಲ್ಲಂದ್ರೆ ಬೇಡ ಬಿಡಿ ಎಂದು ಫೋನಿಟ್ಟೆ.
ನನ್ನನ್ನೆ ಗಮನಿಸುತ್ತಾ ಕೂತಿದ್ದ ಗೆಳೆಯ ಅಶ್ವತ್ಥ, ಊಟಕ್ಕೆ ಕುಳಿತಾಗ ಅಲ್ಲ ಕಣ್ಲಾ ಸತ್ತಿದ್ದರೆ ಮಾತ್ರ ಹೆಸರು ಅಂತಿಯಲ್ಲಾ ಎಂದು ಗೇಲಿ ಮಾಡಿದ. ಅದಕ್ಕೆ ನಾನು ವಿವರಣೆ, ಸಮರ್ಥನೆಯನ್ನೂ ನೀಡಿದೆ.
ಅಪರಾಧ, ಅತ್ಯಾಚಾರದ ಸುದ್ದಿಗಳನ್ನು ಒಳ್ಳೆ ಸುದ್ದಿ ಎಂದಾಗ ಗೇಲಿಗೆ ಇಳಿದವರಿಗೆ ನಾನು ಹೇಳುತ್ತಿದ್ದದ್ದು - ಅದು ಒಳ್ಳೆ ಸುದ್ದಿ ಆದರೆ, ಅದು ಒಳ್ಳೆ ಘಟನೆ ಅಲ್ಲ. ಸುದ್ದಿಯನ್ನು ಘಟನೆಯನ್ನು ಸೇರಿಸಬೇಡಿ ಎಂದು ಪಾಠ ಹೇಳುತ್ತಿದ್ದೆ.
೨೦೦೭ರ ಡಿಸೆಂಬರ್‌ನಲ್ಲಿ ಧಾರವಾಡದ ಸ್ಟೇಷನ್ ರಸ್ತೆಯಲ್ಲಿ ನನ್ನ ಬೈಕ್ ಆಕ್ಸಿಡೆಂಟ್ ಆಯಿತು. ಹಿರಿಯ ಪತ್ರಕರ್ತ ಮಿತ್ರ ನರಸಿಂಹರಾವ್ ಮತ್ತು ನಾನು ಇಬ್ಬರೂ ಇದ್ದ ಬೈಕ್‌ಗೂ, ಯಮಹಾ ಬೈಕ್‌ಗೂ ಆದ ಡಿಕ್ಕಿ ಅದು. ನಡು ಮಧ್ಯಾಹ್ನವೇ ನಾವಿಬ್ಬರು ಬೀದಿಯಲ್ಲಿ ಕಕ್ಕಾಬಿಕ್ಕಿಯಾಗಿ ಬಿದ್ದಿದ್ದೆವು. ಬಿದ್ದ ಬಿರುಸಿಗೆ ನರಸಿಂಹರಾವ್ ಕೈ ಮೂಳೆ ಮುರಿದುಕೊಂಡು, ಪ್ರಜ್ಞೆಯನ್ನು ಕಳೆದುಕೊಂಡಿದ್ದರು. ದಪ್ಪ ದೇಹ ಇದ್ದದ್ದಕ್ಕೋ, ಡಿಕ್ಕಿ ಹೊಡೆದ ಯಮಹಾ ಬೈಕು ತೋರಿದ ಕರುಣೆಯೋ ನನಗೆ ಅಷ್ಟು ಪೆಟ್ಟಾಗಿರಲಿಲ್ಲ.
ಸಾವರಿಸಿಕೊಂಡು ಎದ್ದವನೇ ಯಮಹಾದವನೊಂದಿಗೆ ಜಗಳಕ್ಕಿಳಿಯುವಷ್ಟರಲ್ಲಿ ಆತ ಪರಾರಿಯಾಗಿದ್ದ. ನಾನು ನಮ್ಮ ಫೋಟೋಗ್ರಾಫರ್‌ಗೆ, ಗೆಳೆಯ ರವಿಗೆ ಫೋನ್ ಮಾಡಿ ಆಕ್ಸಿಡೆಂಟ್ ಆಗಿದೆ ಬನ್ನಿ ಅಂದ ಕೂಡಲೇ ಅತ್ತಲಿಂದ ಬಂದ ಪ್ರಶ್ನೆ..., ಎಷ್ಟು ಡೆತ್! ಹೆಸರು ಸಿಕ್ಕಿತಾ..? ಯಾವ ಊರು? ಯಾವು ಯಾವುದಕ್ಕೆ ನಡೆದಿದ್ದು ಎಂದು ಮರು ಪ್ರಶ್ನೆಗಳನ್ನು ಹಾಕಿದರು. ನನಗೆ ಒಮ್ಮೆಲೇ ನಗು ಕೋಪ ಉಕ್ಕುಕ್ಕಿ ಬಂತು. ನಮ್ಮ ಫೋಟೋಗ್ರಾಫರ್‌ಗಂತೂ ಸ್ಥಳಕ್ಕೆ ಬರುವ ತನಕ ಅಪಘಾತ ಆಗಿರುವುದು ನನಗೇ ಎಂಬುದು ಗೊತ್ತಿರಲಿಲ್ಲ.
ಉಗ್ರರ ದಾಳಿ ಶುರುವಾಗುವ ೨೦ ನಿಮಿಷ ಮೊದಲು ನಾನು ಅಲ್ಲಿಂದ ಪಾಸಾಗಿ ಬಂದು ಬಿಟ್ಟಿದ್ದೆ. ಅಲ್ಲಿ ಇದ್ದಿದ್ದರೆ ನಾನು ಸಿಕ್ಕಿಬೀಳುತ್ತಿದ್ದೆ. ಸದ್ಯ ಬಚಾವಾದೆ ಅನ್ನೋದು ತಮ್ಮ, ತಮ್ಮವರ ಸುಖಕ್ಕೆ, ದುಃಖಕ್ಕೆ ಮಾತ್ರ ಮಿಡಿಯುವ ಸಾಮಾನ್ಯರ ಮಾತು. ಛೇ ಛೇ ೨೦ ನಿಮಿಷ ಮೊದಲು ಅಲ್ಲಿಂದ ಜಾಗ ಖಾಲಿ ಮಾಡಿ ತಪ್ಪು ಮಾಡಿಬಿಟ್ಟೆ. ಅಲ್ಲೇ ಇದ್ದಿದ್ದರೆ ನಾನು ಉಗ್ರರನ್ನು ಮುಖಾಮುಖಿ ಆಗಬಹುದಿತ್ತು. ಒಳ್ಳೆ ಸವಾಲು ಎದುರಿಸಬಹುದಿತ್ತು ಎನ್ನುವುದು ಸೈನಿಕ (ಕೆಲವು ಪ್ರಮಾಣಿಕ ಪೊಲೀಸರು ಇದ್ದಾರೆ) ಮತ್ತು ಪತ್ರಕರ್ತ ಮಾತ್ರ. ಕಾರಣ, ಎಲ್ಲರೂ ತಮಗೆ ಖುಷಿಯಾದಾಗಷ್ಟೇ ನಗುತ್ತಾರೆ. ಆದರೆ, ಸೈನಿಕ ಮತ್ತು ಪತ್ರಕರ್ತ ಮತ್ತೊಬ್ಬರ ಖುಷಿಗೆ ನಗುತ್ತಾನೆ. ಮತ್ತೊಬ್ಬರ ನೋವಿಗೆ ಕಣ್ಣೀರು ಆಗಿರುತ್ತಾನೆ. ಗೊತ್ತಿಲ್ಲದೇ.....

Sunday, November 30, 2008

ಆಗ್ಲೇ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ರೆ...!



ಮೈ ಡಿಯರ್ ಬೀದಿ ಬೆಕ್ಕೇ...,
ಪ್ರೇಮ ಪತ್ರ ಅಂದ ಕೂಡಲೇ ನೀನೆ ನೆನಪಾಗ್ತಿ. ಪ್ರೇಮ ಪತ್ರ ಮಾತ್ರವಲ್ಲ ಈಗ ಔಟ್ ಡೇಟ್ ಆಗಿರೋ ಸ್ಟ್ರೀಟ್ ಕ್ಯಾಟ್ ಸೈಕಲ್ಲು, ದೊಗಳೆ ದೊಗಳೆ ಚೂಡಿ ಧರಿಸಿದ ಹುಡುಗೀರು, ಚರ್ಚ್ ಒಳಗಿನ ಮೌನ, ಹಳದಿ ಗುಲಾಬಿ, ಆಯುರ್ವೇದ ವೈದ್ಯರು ಮತ್ತು ತುಟಿಯ ಮೇಲಿನ ಚುಕ್ಕಿ ಕಂಡಾಗಲೆಲ್ಲಾ ನೀನೆ ನೆನಪಾಗ್ತಿ. ಮತ್ತೂ.., ಮೊಬೈಲ್ ಮೂಲಕ ಲವ್ ಕುದುರಿತು, ಮಿಸ್ ಕಾಲ್‌ನಿಂದ ಶುರುವಾದ ಪರಿಚಯ ಲವ್ ಆಯ್ತು, ಮೆಸೇಜ್ ಮೂಲಕ ಪ್ರಪೋಸ್ ಮಾಡಿಬಿಟ್ಟೆ ಎಂದು ಪಿಯುಸಿ ಹುಡುಗರು ಹೇಳಿಕೊಳ್ಳುವಾಗಲೂ ನೀನು ಒಮ್ಮೆ ಕಣ್ಣ ಮುಂದೆ ಬಂದು ನಕ್ಕಂತೆ ಆಗುತ್ತದೆ. ನಾವು ಪಿಯುಸಿ ಓದೋವಾಗ್ಲೂ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ದಿದ್ರೆ ನೀನು ನನ್ನವಳಾಗ್ತಿದ್ದೇನೋ ಅಂತ ಮನಸ್ಸು ಬಡಬಡಿಸುತ್ತೆ. ಇಲ್ಲಾಂದ್ರೆ ನಮ್ಮಪ್ಪ ಅಟ್ ಲೀಸ್ಟ್ ನನಗೆ ಮೊಬೈಲ್ ಕೊಡಿಸುವಷ್ಟು ಶ್ರೀಮಂತನಾದರು ಆಗಬೇಕಿತ್ತು.
ನಿನಗೆ ನೆನಪಿದೆಯಾ..? ನಾನು ನಿನ್ನ ಪಕ್ಕದ ಬೆಂಚಿನಲ್ಲೇ ಹುಡುಕಿ ಹುಡುಕಿ ಕೂರುತ್ತಿದೆ. ನಿನ್ನ ಪಕ್ಕದ ಜಾಗ ಹಿಡಿದುಕೊಡಲು ಅರುಣ, ಲೋಕೇಶ ಬಹಳವೇ ಕಷ್ಟಪಡುತ್ತಿದ್ದರು. ಆಗಾಗ ಚೀಣ್ಯ ರವಿಯೂ ಹೆಲ್ಪ್ ಮಾಡ್ತಿದ್ದ . ಪುಟ್ಟ ಪುಟ್ಟ ಕವಿತೆ ಬರೆದು, ಅದರ ಕೆಳಗೆ ನನ್ನ ಹೆಸರು ಬರೆದು. ಹೆಸರಿನ ಕೆಳಗೆ ತುಟಿ, ತುಟಿ ಮೇಲೊಂದು ಚುಕ್ಕಿ ಇಡುತ್ತಿದೆ. ನೀನು ನೋಡಲಿ ಅಂತ. ಒಂದು ದಿನ, ನನ್ನ ಮುಂದಿನ ಬೆಂಚಿನಲ್ಲಿ ಕೂತಿದ್ದ ವೆಂಕಟೇಶ ಬಿಡಿಸುತ್ತಿದ್ದ ಕಾರ್ಟೂನ್ ಅನ್ನು ನೀನು ತಲ್ಲೀನಳಾಗಿ ನೋಡುತ್ತಿದ್ದೆ. ಎಷ್ಟು ಕೋಪ ಬಂದಿತ್ತು ಅಂದ್ರೆ ಅವತ್ತು.. ನಾನೂ ಕಾರ್ಟೂನ್ ಬಿಡಿಸಿದ್ದೆ. ಮಾರಿಗುಡಿ ಲೆಕ್ಚರರ್ ಕಾರ್ಟೂನ್ ಬಿಡಿಸಿ ನೀನು ನೋಡಲಿ ಅಂತ ಹರಸಾಹಸ ಮಾಡಿದ್ದೆ. ಅದನ್ನು ನೋಡಿ ನಿನ್ನ ತುಟಿ ಮೇಲಿನ ಚುಕ್ಕಿಯೂ ನಕ್ಕಿತ್ತು! ಅದೇ ಸ್ಫೂರ್ತಿಯಾಗಿ ಶೀಲಾ ಮೇಡಂ, ನಿನ್ನ ಆಪ್ತ ಗೆಳತಿ ಶೈಲಾ, ಶೈನಿ ಹೀಗೆ ಅವರ ಕಾರ್ಟೂನ್‌ಗಳನ್ನು ಬಿಡಿಸಿದ್ದೆ. ಆ ನಗುವಿಗೆ ಏನಿತ್ತೋ ಅರ್ಥ?
ಚಿತ್ರ ಬಿಡಿಸುವುದು ಎಂದರೆ ವಿಚಿತ್ರವಾಗಿ ಆಡುತ್ತಿದ್ದ ನಾನೇನ ಇದನ್ನೆಲ್ಲಾ ಬಿಡಿಸಿದ್ದು ಎಂದು ಅವತ್ತಿಗೂ, ಇವತ್ತಿಗೂ ನನ್ನಲ್ಲಿ ಆಶ್ಚರ್ಯವಿದೆ. ಎಷ್ಟು ಶಕ್ತಿ ಇತ್ತು ನಿನಗೆ. ನನ್ನಿಂದ ದಿನಕ್ಕೆ ೧೦ -೧೨ ಪುಟಗಳ ಪತ್ರ ಬರೆಸುತ್ತಿದ್ದೆ. ಬೆಳಗ್ಗೆ ೪ಕ್ಕೆ ಎದ್ದು ೨ ಕಿ.ಮೀ ಸೈಕಲ್ ತುಳಿದು, ಲಾರಿ ಹಿಡಿದು, ಸಂಜಯ ಟಾಕೀಸ್‌ಬಳಿಯಿಂದ ಕರ್ನಾಟಕ ಬಾರ್ ಸರ್ಕಲ್ ತನಕ ಓಡೋಡಿ ಬರುತ್ತಿದ್ದೆ. ಕ್ಷಣ ಮಿಸ್ಸಾದರೂ ನೀನು, ನಿನ್ನ ಸ್ಮೈಲು ಎರಡು ಮಿಸ್ಸಾಗುತ್ತಿತ್ತು. ಈಗ್ಲೂ ಹಾಗೇ ಟೈಮ್ ಮೇಂಟೇನ್ ಮಾಡ್ತಿಯಾ?, ನೀನಿರೋ ದೇಶದಲ್ಲಿ ಈಗ ಟೈಮೆಷ್ಟು?
ನೆನಪಾಗ್ತೀನಾ..? ಕಡೇ ಪಕ್ಷ ನನ್ನ ಪತ್ರಗಳನ್ನು ಸುಟ್ಟು ನೀನು ಮಾಡಿಕೊಂಡ ಹಿತವಾದ ಸ್ನಾನವಾದರೂ ನೆನಪಿದೆಯಾ?. ಅವ್ನು ಪತ್ರ ಕಳಿಸೋದು ತಡ ಮಾಡ್ಬಿಟ್ಟ ಅಂತ ನೀನು ಹೇಳುತ್ತಿದ್ದದ್ದು ಮೊದಲು ಕೇಳಿಸಿಕೊಂಡಾಗ ನೋವಿನಲ್ಲೂ ಖುಷಿಯಾಗಿತ್ತು. ಅದ್ಕೆ ಈಗ್ಲೂ ನನಗೆ ಈಗಿನ ಮೊಬೈಲು -ಮೆಸೇಜು ಕುದುರಿಸುವ ಲವ್ ನೋಡಿದಾಗ ಹೊಟ್ಟೆ ಕಿಚ್ಚಾಗುತ್ತೆ. ಹೊಟ್ಟೆ ಕಿಚ್ಚಿನಿಂದಲೇ ಅವರಿಗೆ ಹಾರೈಸ್ತೇನೆ. ಅಮ್ಮ ಮದುವೆ ಆಗು ಅಂತಿದ್ದಾಳೆ. ನಾನು ನಿನ್ನ ಕೇಳಬೇಕು ಅಂತ ಕಾಯ್ತಾ ಇದ್ದೀನಿ ಏನಂತಿಯಾ...?
ಇಂದಿಗೂ ನಿನ್ನ
ಆಕಾಂಕ್ಷಿ