Friday, January 2, 2009

ಎಡವಿಬಿದ್ದರೆ ಬಾರ್‌ನಲ್ಲಿ ಎಂಬ ಊರಿನಲ್ಲಿ..,


ನಮ್ಮೂರಿನಲ್ಲಿ ಒಂದು ಮಾತಿದೆ, ಎಡವಿ ಬಿದ್ದರೆ ಬಾರ್‌ನಲ್ಲಿ, ನಗೆದು ಬಿದ್ದರೆ ದವಾಖಾನೆಯಲ್ಲಿ ಎಂದೇ ಮಾತಿಗೆ ಆರಂಭಿಸಿದರು ನನಗೆ ಗೋಕಾಕ ತಾಲೂಕು ಪರಿಚಯಿಸಿದ ಹಿರಿಯ ವರದಿಗಾರ ಮಿತ್ರ ಮುನ್ನಾ ಬಾಗವಾನ್. ಗೋಕಾಕ ನಗರದ ರಸ್ತೆಯೊಂದರಲ್ಲೇ ನಾಲ್ಕಾರು ಬಾರ್ ಅಂಡ್ ರೆಸ್ಟೋರಂಟ್‌ಗಳು, ಅದು ತಾಲೂಕಾದರೂ ಮೆಘಾ ಸಿಟಿಯಲ್ಲಿ ಕಾಣುವಂತಹ ಫೈವ್ ಸ್ಟಾರ್ ಶೈಲಿಯ ಆಸ್ಪತ್ರೆಗಳನ್ನು ಕಂಡು ನಾನು ಅವಕ್ಕಾದಾಗ ಮುನ್ನಾ ಹೇಳಿದ್ದೇ ಹಾಗೆ.
ಕರದಂಟು ಖ್ಯಾತಿಯ ಗೋಕಾಕ ನಗರವು ರಕ್ತಸಿಕ್ತ ರಾಜಕಾರಣಕ್ಕೂ ಹೆಸರು ವಾಸಿ. ಹೆಸರಿಗೆ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಆದರೆ, ಇದು ಒಂದು ಜಿಲ್ಲೆಯಾಗುವಷ್ಟು ಬೆಳೆದಿದೆ. ಈ ತಾಲೂಕಿನ ಒಡಲಲ್ಲಿ ನಾಲ್ಕಾರು ಸಕ್ಕರೆ ಕಾರ್ಖಾನೆ, ಸಿಮೆಂಟು ಕಾರ್ಖಾನೆ ಹಾಗೂ ಕುಟುಂಬ ರಾಜಕಾರಣವಿದೆ.
ಇದೇ ತಾಲೂಕಿನ ಅರಬಾವಿ ವಿಧಾನಸಭಾ ಕ್ಷೇತ್ರವು ಆಪರೇಷನ್ ಕಮಲದಿಂದಾಗಿ ಇತ್ತೀಚೆಗೆ ಉಪ ಚುನಾವಣೆ ಎದುರಿಸಿತು. ಅದಕ್ಕೆ ಸಾಕ್ಷಿಯಾಗುವ ಅವಕಾಶವನ್ನು ನಮ್ಮ ಸಂಪಾದಕರು ನನಗೆ ಕಲ್ಪಿಸಿ ಕಳುಹಿಸಿಕೊಟ್ಟಿದ್ದರು. 10 ದಿನಗಳು ಅಲ್ಲಿ ಕೆಲಸ ಮಾಡಿದ್ದು, ಸಿಕ್ಕ ಗೆಳೆಯರು, ಗಳಿಸಿದ ಅನುಭವ ನನ್ನ ಪಾಲಿಗೆ ಅಮೂಲ್ಯ. 10 ದಿನದ ಉದ್ದಕ್ಕೂ ನನ್ನ ಸಲುಹಿದ ಮುನ್ನಾ ಯಾವಾಗಲೂ ನನೆಪಿನಲ್ಲಿ ಉಳಿಯುತ್ತಾರೆ. ಅವರೊಬ್ಬ ಅದ್ಭುತ ಸ್ಟೋರಿ ಟೆಲ್ಲರ್. ಅದೆಲ್ಲಕ್ಕಿಂತ ಹೆಚ್ಚಾಗಿ ಜೀವನ ಪ್ರೇಮ ಉಳಿಸಿಕೊಂಡಿರುವ ರಸಿಕ. ಅದೇ ತಾಲೂಕಿನ ಮೂಡಲಗಿ ಗ್ರಾಮದ ನಮ್ಮ ಪ್ರತಿನಿಧಿ ಕೃಷ್ಣ ಗಿರಿಯಣ್ಣವರ ತೋರಿಸಿದ ಪ್ರೀತಿ, ಕಳಕಳಿ ನೆನೆದರೆ ಇಂದಿಗೂ ಮನಸ್ಸು ಪ್ರಫುಲ್ಲವಾಗುತ್ತದೆ.
ಈ ತಾಲೂಕಿನಲ್ಲಿ ಜಾರಕಿಹೊಳಿ ಕುಟುಂಬವನ್ನು ಸಾಹುಕಾರರು ಎಂದೇ ಕರೆಯುತ್ತಾರೆ. ಗೋಕಾಕ ತಾಲೂಕಿನ ಬಗ್ಗೆ ಮತಾನಾಡುವಾಗ ಆ ಕುಟುಂಬವನ್ನು ಬಿಟ್ಟು ಮಾತನಾಡುವುದೇ ಕಷ್ಟ. ಅವರ ಬಗ್ಗೆ ಹೆಚ್ಚು ಮಾತನಾಡುವುದು ಕಷ್ಟ. ಇಡೀ ತಾಲೂಕಿನಲ್ಲಿ ಆ ಕುಟುಂಬದ ಬಗ್ಗೆ ಮೆಚ್ಚುವವರು, ಭಕ್ತಿ ತೋರುವವರು, ಭೀತಿಯಿಂದಲೇ ಬಾಯಿ ತೆರೆಯುವವರು, ಅವರ ಕಂಡರೆ ಹಲ್ಲು ಹಲ್ಲು ಕಡಿಯುವವರು ಸಿಗುತ್ತಾರೆ. ಅವರ ರಕ್ತಸಿಕ್ತ ರಾಜಕಾರಣ, ವ್ಯವಹಾರದ ಬಗ್ಗೆ ಮುಂದೆದಾದರೂ ಬರೆದೇನು.
ದಾರಿ ತಪ್ಪುವ ಮುನ್ನ - ಎಡವಿಬಿದ್ದರೆ ಬಾರಿನಲ್ಲಿ ಎಂಬ ಊರಿನಲ್ಲಿ ಸಿಕ್ಕ ಮುನ್ನಾ ಬಾಗವಾನ ಅವರು ಒಂದು ರಾತ್ರಿಯ ತೀರ್ಥಗೋಷ್ಠಿಯ ನಂತರ ಲಾಡ್ಜ್ ಎದುರಿನ ರಸ್ತೆಯಲ್ಲಿ ಏಳೆಂಟು ವರದಿಗಾರ ಮಿತ್ರರು ಮಾತನಾಡುತ್ತಾ ನಿಂತಿದ್ದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರನ್ನು ನೋಡಿದ ಕೂಡಲೇ ಮುನ್ನಾ ಜಾಗೃತರಾದರು. ತಾವು ತೀರ್ಥ ಸೇವನೆ ಶುರು ಮಾಡಿದಕ್ಕೆ ಪೊಲೀಸರೇ ಕಾರಣ ಎಂದು ಹೇಳಿದ ಕಥೆ ಹೀಗಿದೆ...,
ಅದು ಬಾಬ್ರಿ ಮಸೀದಿ ಉರುಳಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಮು ಗಲಭೆ ನಡೆಯುತ್ತಿದ್ದ ದಿನಗಳು. ಆಗ ಅಲ್ಲಿನ ಸ್ಥಳೀಯ ಪತ್ರಿಕೆಯಾದ ಗೋಕಾಕ ಟೈಮ್ಸ್‌ನಲ್ಲಿ ಮುನ್ನಾ ವರದಿಗಾರರಾಗಿದ್ದರು. ಆಗೆಲ್ಲಾ ಒಂದು ಫೋಟೋ ಬ್ಲಾಕ್ ಮಾಡಿಸಲು ಸಹ ಬೆಳಗಾವಿಗೆ ಹೋಗಬೇಕಿತ್ತು. ಇನ್ನು ಪಿಟಿಐ ಸುದ್ದಿಗಳಿಗೂ ಬೆಳಗಾವಿಗೆ ಹೋಗಿ, ಅಲ್ಲಿಯೇ ಅನುವಾದ ಮುಗಿಸಿ ಹೊತ್ತುಕೊಂಡು ಬರುವ ಕೆಲಸ ಮುನ್ನಾ ಅವರದು. ಹಾಗೆ ಹೊರಟ ಒಂದು ದಿನ ಗೋಕಾಕದಲ್ಲಿ ಕರ್ಫ್ಯೂ.. ವಿಧಿಸಲಾಗಿತ್ತು. ತನ್ನ ಗುರುತಿನ ಚೀಟಿಯನ್ನು ಕೊರಳಿಗೆ ನೇತು ಬಿಟ್ಟುಕೊಂಡು ರಸ್ತೆಗಿಳಿದರು ಮುನ್ನಾ. ಎಲ್ಲಾ ಹೊರಗಿನ ಪೊಲೀಸರೇ ಆದ್ದರಿಂದ ಇವರನ್ನು ವರದಿಗಾರರು ಎಂದು ಗುರುತಿಸಬೇಕಿದ್ದದ್ದು ಕೊರಳಿನಲ್ಲಿದ್ದ ಐಡಿ ಕಾರ್ಡ್‌ನಿಂದಲೇ. ಅವರು ಬಸ್ಸು ನಿಲ್ದಾಣದ ಕಡೆಯಿಂದ ಹಾದು ಹೋಗುವಾಗ ಮಲ್ಲಿಕಾಜನ ಗುಡ್ಡದ ಕಡೆಯಿಂದ ಇಬ್ಬರು ಕಂದಮ್ಮಗಳೊಂದಿಗೆ ಮಹಿಳೆಯೊಬ್ಬರು ಬ್ಯಾಗು, ಬಿದಿರು ಬುಟ್ಟಿ ಹಿಡಿದು ಬರುತ್ತಿದ್ದಳು. ಕೂಡಲೇ ಆಕೆಯನ್ನು ಮುತ್ತಿಕೊಂಡ ಪೊಲೀಸರು ತಪಾಸಣೆಗೆ ಇಳಿದರು. ಮಕ್ಕಳು ಅಳಲಾರಂಭಿಸಿದವು. ಇಬ್ಬರು ಪೊಲೀಸರು ಬುಟ್ಟಿ ಬ್ಯಾಗು ಜಾಲಾಡಿ, ಅದರಲ್ಲಿದ್ದ ಒಂದಷ್ಟು ಅನ್ನ ಚೆಲ್ಲಿದರು. ಬಟ್ಟೆ ಎಳೆದಾಡಿದರು. ಪೊಲೀಸೊಬ್ಬ ಆಕೆಯತ್ತ ಲಾಠಿ ಬೀಸತೊಡಗಿದ. ಬೇಡಿ ತಂದಿದ್ದ ಅನ್ನವನ್ನು ಕಸಿದುಕೊಂಡಿರಲ್ಲಾ. ಇನ್ನು ಯಾವ ಮನೆಯಲ್ಲಿ ಬೇಡಲಿ. ಯಾರೂ ಬಾಗಿಲು ತೆಗೆಯೊಲ್ಲಾ ಎಂದು ಕಣ್ಣೀರಾಗತೊಡಗಿದಳು. ಆದರೂ ಲಾಠಿಗೆ ಕನಿಕರ ಬರಲಿಲ್ಲ.
ಅದನ್ನು ತಡೆಯಲು ಹೋದೆ ಅಷ್ಟೇ. ಹಿಗ್ಗಾ ಮುಗ್ಗಾ ಲಾಠಿಗಳು ಅಬ್ಬರಿಸಿ ಮುಗಿಬಿದ್ದು ನಗ್ಗು ಮಾಡಿದವು ನನ್ನ. ಕಾಲುಗಳು ಸರಿದಾಡಿದವು. ತೋಳಿಗೆ, ಮುಖಕ್ಕೆ ಬ್ಯಾಂಡೇಜ್ ಬಂತು. ಆ ನೋವು ಗೊತ್ತಾಗದೇ ಇರಲು ಕುಡಿ ಎಂದು ಗೆಳೆಯರು ಪ್ರೇರೇಪಿಸಿದರು. ಅಂದಿನಿಂದ ತೀರ್ಥ ಸೇವನೆ ಶುರುವಾಯಿತು ಎಂದು ಅವರದ ಅದ್ಭುತ ಶೈಲಿಯಲ್ಲಿ ಕಥೆ ಹೇಳಿದರು. ನಮ್ಮೊಂದಿಗೆ ಪೊಲೀಸರು ನಕ್ಕರು. ನಾವು ನಕ್ಕೆವು. ಆದರೆ ಮುನ್ನಾ ಮುಖದಲ್ಲಿ ನಗುವಿಗಿಂತ ಹೆಚ್ಚು ವಿಷಾದವೇ ಕಾಣುತಿತ್ತು...,

ಮುಂದಿನ ಘಟನೆ - ಆ ಊರಲ್ಲಿ ಯಾರದೇ ಮದುವೆಯಾದರೂ ಅವರ ಫಸ್ಟ್ ನೈಟ್ ಮಾತ್ರ ಆ ಮನೆಯಲ್ಲೇ ನಡೆಯುತಿತ್ತು...!

3 comments:

ಗೋವಿಂದ್ರಾಜ್ said...

guru ninna anubhava kathana superb. ninu bar gogi kud'du a ha ha antaddu ondu kathe barutte. alva? a ha ha Munna bhai gu a kathegu thankks

chanakya said...

ಒಟ್ಟು ಕುಡೀಬೇಕು ಅದ್ಕೆ ನಾವು ಕೊಡೋದು ಒಂದೊಂದು ರೀಸನ್.ಅದೇನೇ ಇರ್ಲಿ ಲಿಮಿಟ್ ಆಗಿ ಕುಡೀಬೇಕು ಅನ್ನೋದಶ್ಟೆ ನನ್ನ ಪ್ರಾಮಾಣಿಕ ಸಲಹೆ. ಯಾಕಂದ್ರೆ ನಾನು ಕುಡಿಯೋ ಕಲ್ಚರ್ ಅನಿವಾರ್ಯವಾಗಿರೋ ಊರಿನವನು.ಅವಿ ನಿನ್ಗೂ ಗೊತ್ತಿರಬೇಕು..ಸಾಂಸ್ಕ್ರತಿಕ ನಗರಿಯಲ್ಲಿ ಸಾಕಶ್ಟು ಸಲ ಒಟ್ಟಿಗೇ ಕೂತ್ರು ನಿನ್ಗೆ ಕುಡಿಸೋಕೆ ಆಗಿರ್ಲಿಲ್ಲ. ಈಗಲೂ ಹಂಗೆ ಇದಿಯೋ..ಅತವಾ ಮುನ್ನನಂತೆ ಕಾರಣ ಕೊಟ್ಕಂಡು ಶುರುಹಚ್ಕೊಂಡಿದೀಯೋ?...

naa baralenu said...

tumba sogasagi barediddira. gokak endamele aaga nenapu baruttiddadu satyappa vaddar, iga jaarkiholi kutumba. ene aagali belgaum jille sampadbharita jille. nimma varadige norondu thanks.