Friday, May 22, 2009

ಬದಕಿನ ಬಂಡಿ ತಿರುಗಿದೆ ಬೆಂಗಳೂರಿನತ್ತ.......



ಕಲಿಸಿ, ಬೆಳೆಸಿದ ಮೈಸೂರು ಬೇಡ ಬೇಡ ಎಂದರೂ ಊರು ಸುತ್ತುವ ಆಸೆಯಿಂದ ಮೈಸೂರು ಬಿಟ್ಟಾಗಲೂ ಕಣ್ಣಲ್ಲಿ ನೀರಿತ್ತು. ಮನಸ್ಸು ಒದ್ದೆ ಮುದ್ದೆ ಮಾಡಿಕೊಂಡು ಧಾರವಾಡಕ್ಕೆ ೨೦೦೭ರ ಮೇ ಒಂದರಂದು ಕಾಲಿರಿಸಿದೆ. ಧಾರವಾಡದಲ್ಲಿ ಆಗಿನ್ನೂ ಬಿಸಿಲು. ಅದು ನಿಗಿ ನಿಗಿ ಉರಿದು ಉತ್ತರ ಕರ್ನಾಟಕದ ಬಿಸಿಲ ಝಲಕ್ ನನಗೆ ಅರಿವಾಗುವ ಹೊತ್ತಿಗೆ ಧಾರವಾಡದ ಮೇಲೆ ಕರಿ ಮೋಡಗಳ ಮೆರವಣಿಗೆ ಶುರುವಾಯಿತು. ಮೋಡಗಳು ಎಂದೂ ಒಂದೊಕ್ಕೊಂದು ಡಿಕ್ಕಿ ಹೊಡೆದು ಸಿಡಾರ್, ಗುಡಾರ್ ಎಂಬ ಸದ್ದು ಹೊರಡಿಸದೇ ಧೋ..ಧೋ... ಎಂದು ಮಳೆ ಸುರಿಸಿತು. ಈ ಊರಲ್ಲಿ ಗುಡುಗು, ಸಿಡಿಲು ಬಾರಿಸುವುದೇ ಇಲ್ಲವಾ ಎಂದನಿಸಿತು.
ಧಾರವಾಡದ ಮಳಿ ನಂಬಬ್ಯಾಡ
ಬೆಳಗಾವಿ ಹುಡುಗಿ ನಂಬಬ್ಯಾಡ
ಎಂಬ ಮಾತುಗಳು ಆಗಾಗ ಮಂದಿ ಆಡತೊಡಗಿದರು. ನಾನು ಮಂಡ್ಯ, ಮೈಸೂರು ಭಾಷೆಯಲ್ಲೇ ಮಾತನಾಡಿದರೆ ಜನ ನನ್ನ ಹೊರಗಿನವ ಎಂದೇ ನೋಡತೊಡಗಿದರು. ನಾನು ಅವರಂತೆಯೇ ಮತಾನಾಡುವುದು ರೂಢಿಸಿಕೊಳ್ಳತೊಡಗಿದೆ. ರೊಟ್ಟಿ ಪಲ್ಲೆ ಇಷ್ಟವಾಯಿತು. ಸಂಜೆ ಹೊತ್ತು ಮಿರ್ಚಿ ಗಿರಮಿಟ್ ಪ್ರಿಯವಾಗತೊಡಗಿತು. ನಾನು ಧಾರವಾಡ ಹಚ್ಚಿಕೊಳ್ಳತೊಡಗಿದೆ.

ಆಗ ತಾನೆ ಹಿಟ್ ಆಗಿದ್ದ ಮುಂಗಾರು ಮಳೆ ಸಿನಿಮಾದ ಅನಿಸುತ್ತಿದೆ ಯಾಕೋ ಇಂದು ಹಾಡಿಗಿಂತ ನನಗೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡೇ ಪ್ರಿಯವಾಗತೊಡಗಿತು. ಕಾರಣ, ಬೆಳಗ್ಗೆ ಕಣ್ಣು ಬಿಡುವ ಹೊತ್ತಿಗೆ ಮಳೆ ಸುರಿಯುತ್ತಿತ್ತು. ಎದ್ದವನೇ ಕಂಪ್ಯೂಟರ್ ಆನ್ ಮಾಡಿ ಮುಂಗಾರು ಮಳೆಯೇ ಹಾಡು ಹಾಕುತ್ತಿದ್ದೆ. ಏಕೋ ಗೊತ್ತಿಲ್ಲ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡು ಶುರುವಾಗುತ್ತಿದ್ದಂತೆ ಮನೆ ಹಿಂದಿನ ಅಪಾರ್ಟ್‌ಮೆಂಟಿನ ಬಾಲ್ಕನಿಯಲ್ಲಿ ಅವಳು ನಿಂತು ಮಳೆ ನೀರು ಹಿಡಿಯುತ್ತಾ ನಿಲ್ಲುತ್ತಿದ್ದಳು. ಅವಳೂ ಇದೇ ಹಾಡು ಗುನುಗುತ್ತಿದ್ದಳು. ನಾನು ಅದನ್ನು ಮೆರೆಯಲ್ಲೇ ನಿಂತು ನೋಡಬೇಕು. ನಾನು ಕಂಡರೆ ಆಕೆ ಮರೆಯಾಗಿ ಬಿಡುತ್ತಿದ್ದಳು. ಆ ಮಳೆ ಅವಳಿಗೆ ಅದ್ಯಾವ ನೆನಪು ತರಿಸುತಿತ್ತೋ...? ಮಳೆ ಮುಗಿಯುವ ಹೊತ್ತಿಗೆ ಅವಳ ಇಹ ಪರ. ಅವಳ ಇಂಜಿನಿಯರಿಂಗ್ ಕಾಲೇಜಿನ ಹುಡುಗ ಎಲ್ಲರೂ ಗೊತ್ತಾದರು.
ಮಳೆ ತನ್ನ ಬಿರುಸು ಕಳೆದುಕೊಳ್ಳುವ ಹೊತ್ತಿಗೆ ನನ್ನ ನೆರಳಿನಂತೆಯೇ ಕಾಯುವ ಗೆಳೆಯ ಕಲಂದರ್ ನನಗೆ ಮಳೆಯಲ್ಲೇ ಅರ್ಧ ಧಾರವಾಡ ತೋರಿಸಿದ್ದರು. ಊರು ನೋಡು ನೋಡುತ್ತಾ ಕಣ್ಮಣಿಗೂ ತೋರಿಸುತ್ತಾ ಮಳೆಯಲ್ಲೇ ತಿರುಗಾಡಿದೆ. ಮಳೆ ಮುಗಿದು ಚಳಿ ಆವರಿಸುವ ಹೊತ್ತಿಗೆ ಕಣ್ಮಣಿ ಆರೋಗ್ಯ ಸುಧಾರಿಸಿ, ಟಾಟಾ ಹೇಳಿಯಾಗಿತ್ತು. ಆದರೆ, ಬೆಳ ಬೆಳಗ್ಗೆ ಏಳುವ ಚಟ ಹೋಗಿರಲಿಲ್ಲ. ನಮ್ಮ ಹುಬ್ಬಳ್ಳಿ ಆವೃತ್ತಿಯೂ ಶುರುವಾಗಿತ್ತು. ಕೆಲಸದ ಜವಾಬ್ದಾರಿ ಜೊತೆಗೆ, ಅಷ್ಟರಲ್ಲಿ ಸರ್ಕ್ಯೂಲೇಷನ್ ವಿಭಾಗಕ್ಕೆ ನಮ್ಮ ಚಿಕ್ಕಮಠ ಬಂದು ರೂಂ ಮೇಟ್ ಆದ. ಟಾಟಾ ಮರೆತು ಕೆಲಸದಲ್ಲಿ ಸಕ್ರಿಯನಾದೆ. ಧಾರವಾಡದ ಊರೂರು ಸುತ್ತುತ್ತಾ ವಿಶೇಷ ವರದಿಗಳ ಹೆಕ್ಕಿ ತಂದೆ. ಇವ ಸಣ್ಣ ಹುಡುಗ ಅಂದುಕೊಂಡವರು ಮೆಚ್ಚುಗೆಯಿಂದ ನೋಡ ತೊಡಗಿದರು. ಕೆಲವರು ಸಣ್ಣ ಕಿರಿಕಿರಿ ಮಾಡಿದರು. ಅದು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಒಂದು ವರ್ಷ ಕಳೆಯುವುದರ ಒಳಗೆ ನಾನು ಧಾರವಾಡಿಗನಾಗಿದ್ದೆ.
ಧಾರವಾಡದ ಸುದ್ದಿಗಾರರ ಪೈಕಿ ನಾನೇ ಅತಿ ಚಿಕ್ಕ ವಯಸ್ಸಿನವನಿದ್ದೆ. ಒಂದು ವರ್ಷ ಕಳೆಯುವುದರೊಳಗೆ ಧಾರವಾಡ ಮೀಡಿಯಾದಲ್ಲಿ ಹೊಸಬರು ಬಂದರು. ನಾನು ಹಳಬನಾಗಿದ್ದೆ. ಪತ್ರಕರ್ತರೆಲ್ಲರ ಮಿತ್ರ ಡಾ. ಶ್ಯಾಮಮೂರ್ತಿ ನಾಯಕ ಅಚ್ಚುಮೆಚ್ಚಾಗಿದ್ದ. ಆವರ ೭೫ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದೆವು. ಎದುರಾದ ಸವಾಲುಗಳೆಲ್ಲಾ ನನ್ನ ಗಟ್ಟಿಯಾಗಿಸಿದವು. ಮಧ್ಯೆ ಬೇರೆಲ್ಲೋ ಅಲೆಯುವ ಆಸೆಯಾಗಿ ಮತ್ತೆ ಧಾರವಾಡಕ್ಕೆ ಮರಳಿದ್ದೆ. ಚುನಾವಣೆ ಕೆಲಸಗಳಿಗಾಗಿ ಬೆಳಗಾವಿ ಜಿಲ್ಲೆ ಸುತ್ತಾಡುವ ಅವಕಾಶ ಸಿಕ್ಕಿತು. ಈಗ ಮತ್ತೆ ಧಾರವಾಡದ ಮೇಲೆ ಕರಿ ಮೋಡಗಳ ಮೆರವಣಿಗೆ ಶುರುವಾಗಿದೆ. ಆದರೆ, ಈ ಬಾರಿ ಸಿಡಿಲು ಗುಡುಗು ಜೋರಾಗಿದೆ. ನನ್ನ ನಿರೀಕ್ಷೆ, ಬೇಡಿಕೆಯಂತೆಯೇ ಬೆಂಗಳೂರಿಗೆ ಬಾ ಎಂದು ಸಂಪಾದಕರು ಸೂಚಿಸಿದ್ದಾರೆ. ನನ್ನ ಬದುಕಿನ ಬಂಡಿ ಬೆಂಗಳೂರಿನತ್ತ ಹೊರಟಿದೆ. ಆದರೆ, ಇಲ್ಲಿ ಸಿಕ್ಕ ಗೆಳೆಯರು ಸಂಖ್ಯೆ, ಅವರು ತೋರಿದ ಪ್ರೀತಿ, ವಿಶ್ವಾಸ ಅಪಾರ. ಅವರ ಹೆಸರು ಬರೆದರೇ ಒಂದು ಪುಟವಾಗುತ್ತೆ. ಆ ಎಲ್ಲ ಗೆಳೆಯರ ಒಡನಾಟ, ಮಾತುಗಳು ಕೈ ಜಗ್ಗುತ್ತಿದೆ. ಕಣ್ಣಲ್ಲಿ ನನಗೇ ಗೊತ್ತಿಲದೆ ಹನಿಗೂಡಿ ವಿದಾಯ ಹೇಳುತ್ತಿವೆ. ನನ್ನೂರಿನ ಗೆಳೆಯರಿಗೆ ನಾನು ಬೆಂಗಳೂರಿಗೆ ಬರುತ್ತಿರುವುದು ಖುಷಿ. ಇಲ್ಲಿನ ಗೆಳೆಯರಿಗೆ ಕಷ್ಟ. ನನಗೆ ಎರಡೂ ಆಗುತ್ತಿದೆ. ಆದರೆ, ಧಾರವಾಡದ ಮೇಲಿನ ಮೂಹ ಎಷ್ಟಿದೆಯೆಂದರೇ.. ಐದು ದಿನಗಳಿಂದ ಯಾಕೋ ಊರಿಗೆ ಫೋನ್ ಮಾಡಿಲ್ಲ. ಅಲ್ಲಿ ಸಂಭ್ರಮದ ಮಾತು ಕೇಳಿ ಬರುತ್ತವೆ. ಯಾಕೋ ಫೋನ್ ಮಾಡಬೇಕು ಅನಿಸುತ್ತಲೂ ಇಲ್ಲ. ಎಮೋಷನಲ್ ಫೂಲ್ ಆಗಬೇಡ ಎಂಬ ಕಣ್ಮಣಿಯ ಮಾತುಗಳು ನೆನಪಾಗುತ್ತವೆ. ಸವಿ ನೆನಪುಗಳ ಹೊತ್ತು ಬೆಂಗಳೂರಿಗೆ ಹೊರಟಿದ್ದೇನೆ. ಮತ್ತೆ ಮಳೆ ಉಯ್ಯುತ್ತಿದೆ, ಎಲ್ಲಾ ನೆನಪಾಗುತ್ತಿದೆ....,

Sunday, May 3, 2009

ಸಂಬಳ ಹೆಚ್ಚು ಅಂತ ಹೆಣ್ಣು ಕೊಡಲಿಲ್ಲ!


ಸಂಬಳ ಕಡಿಮೆ ಅಂತ ಪತ್ರಕರ್ತರಿಗೆ, ಪತ್ರಿಕೆಯಲ್ಲಿ ಕೆಲಸ ಮಾಡುವವರಿಗೆ ಹೆಣ್ಣು ಕೊಡುತ್ತಿರಲಿಲ್ಲ. ಪತ್ರಕರ್ತರೊಬ್ಬರು ಹೆಣ್ಣು ನೋಡಲು ಹೋದಾಗ, ‘ಪತ್ರಿಕೆಯಲ್ಲಿ ಕೆಲಸ ಮಾಡೋದೇನೋ ಸರಿ. ಜೀವನಕ್ಕೆ ಏನು ಮಾಡ್ತೀರಿ’ ಅಂತ ಒಬ್ಬರು ಕೇಳಿದ್ದರಂತೆ ಎಂಬುದು ಪತ್ರಿಕೋದ್ಯಮದಲ್ಲಿ ಚಾಲ್ತಿಯಲ್ಲಿರುವ ಹಳೆಯ ಘಟನೆ.

ಆದರೆ, ನನ್ನ ಗೆಳೆಯನೊಬ್ಬನಿಗೆ ಸಂಬಳ ಹೆಚ್ಚು ಅನ್ನೋ ಕಾರಣಕ್ಕೆ ಹೆಣ್ಣು ಕೊಡಲಿಲ್ಲ. ಅವನಿಗೆ ಮೂವತ್ತು ಸಾವಿರ ಸಂಬಳ ಬರುತ್ತದೆ ಎಂದರೆ ನಂಬಲು ಹೆಣ್ಣಿನ ಕಡೆಯವರಿಗೆ ಸಾಧ್ಯವೇ ಆಗಲಿಲ್ಲ. ಕೊನೆಗೆ ಈ ಪರಿ ಸುಳ್ಳು ಹೇಳೋ ಗಂಡಿಗೆ ಹೆಣ್ಣು ಕೊಡಲ್ಲ ಎಂದು ಬಿಟ್ಟರು!.

ಹೌದು, ನಾನು ಧಾರವಾಡಕ್ಕೆ ಬಂದ ಐದು ತಿಂಗಳಲ್ಲಿ ಸರ್ಕ್ಯೂಲೇಶನ್ ವಿಭಾಗಕ್ಕೆ ಶಿವಾನಂದ ಚಿಕ್ಕಮಠ ನೇಮಕವಾಯಿತು. ಆತ ಬರಿಯ ಸಹೋದ್ಯೋಗಿಯಾಗದೆ ನನ್ನ ರೂಂಮೇಟ್ ಆದ. ಹೋಗಿ -ಬನ್ನಿ ಮಾಯಾವಾಗಿ ಹೋಗಲೇ ಅನ್ನುವಷ್ಟು ಆತ್ಮೀಯರಾದೆವು. ಆತನಿಗೆ ಬರವಣಿಗೆಯ ಮೋಹವೂ ಇದ್ದುದ್ದರಿಂದ ನನ್ನ ಕೆಲಸದಲ್ಲಿ ಅವನು, ನಾನು ಅವನ ಕೆಲಸದಲ್ಲಿ ಕೈ ಜೋಡಿಸುತ್ತಿದ್ದೆವು. ಒಂದು ದಿನ ಧಾರವಾಡ ರೈಲ್ವೆ ಸ್ಟೇಷನ್‌ನಲ್ಲಿ ನಾನು ಟೋಪಿ ಧರಿಸಿ ಪೇಪರ್ ಮಾರುವಂತೆಯೂ ಮಾಡಿದ್ದ. ಕೆಲಸದಲ್ಲಿ ದೈತ್ಯ ಆತ.

ಸುಮಾರು ಒಂದು ವರ್ಷದಲ್ಲಿ ಆತನ ದೈತ್ಯ ಕೆಲಸ ಕೇಂದ್ರ ಸರ್ಕಾರಿ ನೌಕರಿ ಎಂದೇ ಕರೆಯಿಸಿಕೊಳ್ಳುವ ಇಂಗ್ಲಿಷ್‌ನ ದಿ ಹಿಂದು ಪತ್ರಿಕೆಯವರಿಗೆ ಇಷ್ಟವಾಗಿ ನೇಮಿಸಿಕೊಂಡರು. ನಮ್ಮಲ್ಲಿ ಟಿಎ ಡಿಎ ಎಲ್ಲಾ ಸೇರಿ ಹತ್ತು ಸಾವಿರ ರು.ವರೆಗೆ ಸಂಬಳ ಬರುವುದು ಕಷ್ಟವಿತ್ತು. ಆದರೆ, ದಿ ಹಿಂದು ಪತ್ರಿಕೆಯಲ್ಲಿ ಆತ ಟಿಎ ಡಿಎ ಎಲ್ಲಾ ಸೇರಿ ತಿಂಗಳಿಗೆ ಮೂವತ್ತು ಸಾವಿರ ರು.ವರೆಗೂ ಪಡೆಯುತ್ತಾನೆ. ಅದೇ ಸತ್ಯವನ್ನು ಹೆಣ್ಣಿನ ಕಡೆಯವರಿಗೆ ನಂಬಲಾಗಲಿಲ್ಲ. ಒಮ್ಮೆ ನೇರವಾಗಿಯೇ, ತಮಾಷೆ ಬೇಡ ಸರಿಯಾಗಿ ಹೇಳಿ ಎಂದು ಕೇಳಿದ್ದಾರೆ. ಪೇಪರ್ ಕೆಲಸದಲ್ಲಿ ಇಷ್ಟು ಕೊಡುವುದು ಸಾಧ್ಯವೇ ಇಲ್ಲ ಎಂದು ವಾದಿಸಿದ್ದಾರೆ. ಆತ ಕಚೇರಿಯಲ್ಲಿ ಇಲ್ಲದ ಸಮಯ ನೋಡಿ ಅವರ ಮೇಲಿನವರಲ್ಲಿ ವಿಚಾರಿಸಿದ್ದಾರೆ. ಅವರು ಸಂಬಳದ ಮೊತ್ತ ಅಷ್ಟೇ ಹೇಳಿದ್ದಾರೆ. ಕೊನೆಗೆ ಮದುವೆ ದಲ್ಲಾಳಿಯ ಬಳಿ, ‘ಮದುವೆಗೆ ಮೊದಲೆ ಈ ಪರಿ ಸುಳ್ಳು ಹೇಳ್ತಾರಲ್ರಿ. ಅವರ ಆಫೀಸಲ್ಲೂ ಅಡ್ಜಸ್ಟ್ ಮಾಡಿಸ್ಯಾನ. ಹೆಣ್ಣು ಕೊಡಲ್ಲ’ ಅಂದು ಬಿಟ್ಟರಂತೆ.

ನನಗೆ ಫೋನ್ ಮಾಡಿ ಹೇಳಿದಾಗ ಇಬ್ಬರೂ ಜೋರಾಗಿ ನಕ್ಕಿದ್ದೆವು. ಕೈಯಾಗ ರೊಕ್ಕ ಇಲ್ಲದ ಕಾಲದಾಗೂ ಹೆಣ್ಣು ಕೊಡಲಿಲ್ಲ, ರೊಕ್ಕ ಐತಿ ಅಂದ್ರು ಕೊಡ್ತಿಲ್ವಲ್ಲ ಎಂದು ನಗುತ್ತಲೇ ವಿಷಾದ ವ್ಯಕ್ತಪಡಿಸಿದ್ದ. ಆ ಶಿವಾನಂದನಿಗೆ ಕೊನೆಗೂ ಜಮಖಂಡಿ ಬಳಿಯ ಹೆಣ್ಣು ಗೊತ್ತಾಗಿದೆ. ಮೇ 26ರಂದು ಬೆಳಗಾವಿಯಲ್ಲಿ ಮದುವೆ. ಆದರೆ, ನಮ್ಮ ಶಿವಾನಂದನಿಗೆ ಒಂದು ಡೌಟು -‘ಆ ಹುಡುಗಿಗೆ ಟೇಸ್ಟೆ ಇಲ್ಲ ಅನ್ಸುತ್ತಾ ಇದೆ. ಸುಮಾರು ನೂರು ಹುಡುಗಿಯರನ್ನು ನೋಡಿದೆ. ಎಲ್ಲರಿಂದಲೂ ತಿರಸ್ಕೃತನಾದ ನನ್ನನ್ನು ಅಷ್ಟು ಚೆನ್ನಾಗಿ ಇರೋ ಹುಡುಗಿ ಒಪ್ಯಾಳಲ್ಲ. ಕೇಳೇ ಬಿಡ್ಲಾ ಅವಳ್ನಾ..’ಎಂದ. ಬೇಡ ಇರು ಗುರು ಮದುವೆ ಆದ್ಮೇಲೆ ಕೇಳು. ಆಮೇಲೆ ಅವಳು ಬ್ಯಾಡ ಅಂದಾಳು ಎಂದು ನಕ್ಕೆವು. ಇಷ್ಟು ದಿನ ಇಬ್ಬರು ಸೇರಿದರೆ ನಗುವುದೇ ಕಾಯಕವಾಗಿತ್ತು. ಮೇ 26ರಂದು ಕೊನೆಯ ಬಾರಿ ನಕ್ಕು ಬಿಡು ಎಂದಿದ್ದೇನೆ. ನಿನ್ನ ನಗುವಿಗೂ ಕೊನೆ ಹೇಳ್ತೀನಿ ಅಂತ ಶಪಥ ಮಾಡ್ಯಾನ. ಶಪಥ ಸುಳ್ಳಾಗಿ, ಅವನ ಹೊಸ ಜೀವನಕ್ಕೆ ಒಳ್ಳೆಯದಾಗಲಿ. ನಗು ಜಾರಿಯಲ್ಲಿರಲಿ...,

Saturday, April 25, 2009

ಸಕ್ಕರೆ ನಾಡಿನ ಕಹಿ ಸತ್ಯಗಳು



‘ಚಿಕ್ಕೋಡಿ’ ಒಂದು ಕಾಲಕ್ಕೆ ರಾಷ್ಟ್ರರಾಜಕಾರಣದಲ್ಲಿ ಹೆಸರು ವಾಸಿ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರವು ಸಮಸ್ಯೆಗಳಿಂದಲೇ ಹೆಚ್ಚು ಸುದ್ದಿಗೆ ಬರುತ್ತಿವೆ. ಸಮಸ್ಯೆಗಳು ಮಾತ್ರವಲ್ಲ ಈ ಕ್ಷೇತ್ರದಲ್ಲಿ ಸಮೃದ್ಧಿಯೂ ಇರುವುದು ವಿಶೇಷ. ಇಲ್ಲಿ ಬೇವೂ ಇದೆ, ಬೆಲ್ಲವೂ ಇದೆ.
ಕ್ಷೇತ್ರದ ಭೌಗೋಳಿಕ ವ್ಯಾಪ್ತಿಯ ವಿಸ್ತಾರದಷ್ಟೇ ವೈಚಿತ್ರದಂತೆಯೇ ಇಲ್ಲಿನ ಸಮಸ್ಯೆಗಳು ಒಂದು ವಿಧಾನಸಭಾ ಕ್ಷೇತ್ರಕ್ಕಿಂತ ಒಂದು ವಿಚಿತ್ರವಾಗಿದೆ. ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ವ್ಯತಿರಿಕ್ತ ಎನ್ನುವಂತಹ ವಾತಾವರಣ ಇದೆ. ಅಥಣಿ, ರಾಯಬಾಗ, ಕಾಗವಾಡ, ಕುಡಚಿ, ಚಿಕ್ಕೋಡಿ, ನಿಪ್ಪಾಣಿ, ಹುಕ್ಕೇರಿ, ಯಮಕನಮರಡಿ ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿದೆ. ಈ ಎಲ್ಲಾ ಕ್ಷೇತ್ರಗಳಲ್ಲಿ ನೆರೆಯೂ ಉಂಟು, ಬರವೂ ಉಂಟು. ಬರ ಮತ್ತು ನೆರೆಯ ವಿಷಯದಲ್ಲಿ ಇದೊಂದು ೫೦:೫೦ ಕ್ಷೇತ್ರ.
ಸಪ್ತನದಿಗಳಿವೆ..,
- ಸಮೃದ್ಧಿ ತಂದುಕೊಡಬೇಕಾದ ಕೃಷ್ಣಾ ನದಿ ಸಂಕಷ್ಟ ಹಂಚತೊಡಗಿದೆ. ೨೦೦೫ರಿಂದ ಕೃಷ್ಣಾ ನದಿ ಪ್ರವಾಹ ನದಿ ದಂಡೆಯ ಹಳ್ಳಿಗಳನ್ನು ಹಣಿದು ಹಾಕಿದೆ. ಚಿಕ್ಕೋಡಿ ತಾಲೂಕು ಒಂದರಲ್ಲೇ ವೇದಗಂಗಾ, ದೂದಗಂಗಾ, ಚಕಂತ್ರಾ, ಪಂಚಗಂಗಾ ಹಾಗೂ ಕೃಷ್ಣಾ ಸೇರಿದಂತೆ ೫ ನದಿಗಳು ಹರಿಯುತ್ತವೆ. ಆದರೆ, ನಾಲ್ಕು ಸಣ್ಣ ನದಿಗಳೂ ಚಿಕ್ಕೋಡಿ ತಾಲೂಕಿನ ವಿವಿಧೆಡೆ ಕೃಷ್ಣಾ ಜೊತೆ ಸೇರಿಕೊಂಡು ಕೃಷ್ಣಾರ್ಪಣ ಆಗುತ್ತದೆ. ಇನ್ನು ಯಮಕನಮರಡಿ ಕ್ಷೇತ್ರದಲ್ಲಿ ಘಟಪ್ರಭಾದಲ್ಲಿ ಹಿರಣ್ಯಕೇಶಿ ನದಿ ವಿಲೀನಗೊಂಡು ಸಾಗುತ್ತದೆ. ಇದು ಸಪ್ತನದಿಗಳ ಕ್ಷೇತ್ರ.
ಬರ ಥರ..ಥರ..
- ಕುಡಚಿ, ಚಿಕ್ಕೋಡಿ ಹಾಗೂ ರಾಯಬಾಗ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವಲ್ಪ ನೀರಾವರಿ ಪ್ರದೇಶ ಹೆಚ್ಚು. ಆದರೆ, ಅಲ್ಲೂ ಬರಗಾಲ ಎದುರಿಸುವ ಪ್ರದೇಶ ಇದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಉತ್ತರ ದಿಕ್ಕಿಗೆ ಇರುವ ಎಲ್ಲಾ ಹಳ್ಳಿಗಳು ಬರ ಎದುರಿಸುತ್ತಿವೆ. ಕುಡಿಯುವ ನೀರಿನ ಸಮಸ್ಯೆ ಇದೆ. ಎಲ್ಲಕ್ಕಿಂತ ಹೆಚ್ಚು ಬರಗಾಲ ಎದುರಿಸುವುದು ಅಥಣಿ ವಿಧಾನಸಭಾ ಕ್ಷೇತ್ರದ ಹಳ್ಳಿಗಳು.
- ೧೯೭೨ ರಿಂದ ಅಥಣಿ ಪ್ರದೇಶದಲ್ಲಿ ಅತೀ ಕಡಿಮೆ ಮಳೆಯಾಗುತ್ತದೆ. ಇಲ್ಲಿನ ಎಲ್ಲಾ ಜನರು ವರ್ಷದಲ್ಲಿ ಇಲ್ಲೇ ವಾಸಿಸುವುದು ಹೆಚ್ಚೆಂದರೇ ೬ ತಿಂಗಳು ಮಾತ್ರ. ನಂತರ ಕೆಲಸ ಅರಸಿ ಗುಳೇ ಹೋಗುತ್ತಾರೆ. ಈ ಕ್ಷೇತ್ರದ ಹೆಚ್ಚು ಮಂದಿ ಉದ್ಯೋಗಕ್ಕಾಗಿ ಮಹಾರಾಷ್ಟ್ರವನ್ನೇ ನೆಚ್ಚಿಕೊಂಡಿದ್ದಾರೆ. ನೀರಾವರಿ ಪ್ರದೇಶ ಇದ್ದರೂ ರಾಯಬಾಗ, ಕಾಗವಾಡ ಕ್ಷೇತ್ರಗಳಲ್ಲಿ ಜವಳು -ಸವಳು ಭೂಮಿ, ನೀರಿನ ಸಮಸ್ಯೆ ಇದೆ. ಅಥಣಿ ಕ್ಷೇತ್ರದ ೨೨ ಹಳ್ಳಿಗಳಲ್ಲಿ ಫ್ಲೋರೈಡ್ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ.
ಗಡಿ -ಬಿಡಿ..,
- ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೮ ವಿಧಾನಸಭಾ ಕ್ಷೇತ್ರಗಳ ಪೈಕಿ ರಾಯಬಾಗ ಮತ್ತು ಕುಡಚಿ ವಿಧಾನಸಭಾ ಕ್ಷೇತ್ರಗಳು ಮಾತ್ರ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿಲ್ಲ. ಆದರೂ ಈ ಕ್ಷೇತ್ರಗಳಲ್ಲೂ ಮರಾಠಿಯ ಪ್ರಭಾವವಿದೆ. ನಿಪ್ಪಾಣಿ ಹಾಗೂ ಅಥಣಿ ಕ್ಷೇತ್ರದ ಅತಿ ಹೆಚ್ಚು ಪ್ರದೇಶ ಮಹಾರಾಷ್ಟ್ರದ ಜೊತೆ ಗಡಿ ಹಂಚಿಕೊಂಡಿವೆ. ನಿಪ್ಪಾಣಿಯಲ್ಲಂತೂ ಮರಾಠಿಯದ್ದೇ ಪ್ರಾಬಲ್ಯ. ಹೀಗಾಗಿ ಮತ ಕೇಳುವವರು ಇಲ್ಲಿ ಮರಾಠಿಯ ಮೊರೆ ಹೋಗುವುದು ಸಾಮಾನ್ಯ.
ಅತಿ ದೊಡ್ಡ ಗ್ರಾಪಂ..
- ರಾಯಬಾಗ ವಿಧಾನಸಭಾ ಕ್ಷೇತ್ರದ ಹಾರೋಗೇರಿ ಗ್ರಾಮ ಪಂಚಾಯ್ತಿ ರಾಜ್ಯದಲ್ಲೇ ಅತಿ ದೊಡ್ಡ ಗ್ರಾಪಂ ಎಂಬ ಖ್ಯಾತಿ ಪಡೆದಿದೆ. ಹಾರೋಗೇರಿ ಗ್ರಾಮ ಪಂಚಾಯ್ತಿಯಲ್ಲಿ ೭೨ ಸದಸ್ಯರಿದ್ದಾರೆ. ಸುಮಾರು ೨೫ ಸಾವಿರ ಮತದಾರರಿದ್ದಾರೆ. ಒಂದು ಪುರಸಭೆ ಆಗುವ ಲಕ್ಷಣ ಇದ್ದರೂ, ಗ್ರಾಮ ಪಂಚಾಯ್ತಿಯಾಗಿಯೇ ಅದು ಉಳಿದಿದೆ.
೧೫ ಸಕ್ಕರೆ ಕಾರ್ಖಾನೆ..,
- ಚಿಕ್ಕೋಡಿ ಲೋಕಸಭಾ ಕ್ಷೇತ್ರ ಒಂದರಲ್ಲೇ ಒಟ್ಟು ೧೫ ಸಕ್ಕರೆ ಕಾರ್ಖಾನೆಗಳಿವೆ. ಈ ಪೈಕಿ ೯ ಕಾರ್ಖಾನೆಗಳು ಚಾಲ್ತಿಯಲ್ಲಿದ್ದರೆ, ೫ ಕಾರ್ಖಾನೆಗಳು ನಿರ್ಮಾಣದ ಹಂತದಲ್ಲಿವೆ. ೧ ಕಾರ್ಖಾನೆ ರೋಗಗ್ರಸ್ಥವಾಗಿ ಬಂದ್ ಆಗಿದೆ. ಇವುಗಳಲ್ಲಿ ನಾಲ್ಕು ಸಹಕಾರಿ ಸಕ್ಕರೆ ಕಾರ್ಖಾನೆಗಳಾಗಿವೆ. ಅಥಣಿ ವಿಧಾನಸಭಾ ಕ್ಷೇತ್ರ ಒಂದೇ ೬ ಸಕ್ಕರೆ ಕಾರ್ಖಾನೆಗಳಿಗೆ ನೆಲ ನೀಡಿದೆ. ಇಷ್ಟೆಲ್ಲಾ ಕಾರ್ಖಾನೆಗಳಿದ್ದರೂ ಇಲ್ಲಿನ ಬಹುಪಾಲು ಕಬ್ಬು ಮಹಾರಾಷ್ಟ್ರ ಸಕ್ಕರೆ ಕಾರ್ಖಾನೆಗೆ ಹೋಗುತ್ತವೆ.
ವ್ಯಕ್ತಿ ರಾಜಕಾರಣ..,
ಇಷ್ಟೆಲ್ಲಾ ವಿಚಿತ್ರ ವೈರುಧ್ಯ, ಸಮಸ್ಯೆಗಳಿರುವ ಈ ಕ್ಷೇತ್ರದಲ್ಲಿ ಪಕ್ಷಕ್ಕಿಂತ, ಪ್ರಣಾಳಿಕೆ, ಕಾರ್ಯಕ್ರಮಗಳಿಗಿಂತ ವ್ಯಕ್ತಿಗತ ರಾಜಕಾರಣಕ್ಕೇ ಹೆಚ್ಚು ಬೆಲೆ. ವ್ಯಕ್ತಿಗತ ವರ್ಚಸ್ಸೇ ಇಲ್ಲಿನ ಚುನಾವಣೆ ವಸ್ತು. ಇಷ್ಟು ದಿನ ಮೀಸಲು ಕ್ಷೇತ್ರವಾಗಿದ್ದ ಇದು ಸಾಮಾನ್ಯ ಕ್ಷೇತ್ರವಾಗಿ ಹೊಸದಾಗಿ ಜಾತಿ ಲೆಕ್ಕಾಚಾರಕ್ಕೂ ಎಡೆ ಮಾಡಿದೆ.

Friday, April 17, 2009

ಚಿಕ್ಕೋಡಿ ಎಂಬ ಬೇವು ಬೆಲ್ಲದ ನಾಡಿನಲ್ಲಿ..,


‘ಧಾರವಾಡ’ ಉತ್ತರ ಕರ್ನಾಟಕದಲ್ಲೇ ಇದೆ. ‘ಚಿಕ್ಕೋಡಿ’ ಉತ್ತರ ಕರ್ನಾಟಕದಲ್ಲೇ ಇದೆ.ಆದರೆ, ಧಾರವಾಡಕ್ಕೂ ಚಿಕ್ಕೋಡಿಗೂ ಸಾಮಾನ್ಯ ಎನ್ನುವಂತಹ ಒಂದೇ ಒಂದು ಅಂಶವಿಲ್ಲ.ಅಷ್ಟೇ ಏಕೆ ಬೆಳಗಾವಿ ಜಿಲ್ಲೆಯ ಒಡಲಲ್ಲೇ ಇರುವ ಚಿಕ್ಕೋಡಿಗೆ ಬೆಳಗಾವಿ ಜೊತೆಗೂಹೋಲಿಸಿ ಮಾತನಾಡುವುದು ಸಾಧ್ಯವಿಲ್ಲ. ಅಬ್ಬಬ್ಬಾ ಸಮೃದ್ಧ ನಾಡು ಎಂದುಕೊಳ್ಳುತ್ತಾ ಸಾಗುತ್ತಿದ್ದಂತೆ ನಿಮಗೆ ಬರಗಾಲ ಪ್ರದೇಶಎದುರಾಗುತ್ತದೆ. ಇಲ್ಲಿನ ಬಿಸಿಲು, ಸಮುದ್ರದಂತೆ ಕೊನೆಯಿಲ್ಲದೆ ಚಾಚಿಕೊಂಡಿರುವಬರಭೂಮಿ ಕೆಲಕಾಲ ಆತಂಕ ಮೂಡಿಸುತ್ತದೆ.
ಮತ್ತೆ ಒಂದಿಷ್ಟು ದೂರ ಸಾಗುತ್ತಿದ್ದಂತೆಕೃಷ್ಣಾ ನದಿ ಗಕ್ಕನೆ ಎದುರಾಗುತ್ತದೆ. ಇದು ಥೇಟು ಪುರುಷ ಗಾಂಭೀರ್ಯದಿಂದಲೇಹರಿಯುತ್ತದೆ, ಹಣಿಯುತ್ತದೆ. ಈ ನದಿಗೆ ಕಾವೇರಿ, ಮಲಪ್ರಭಾ, ಘಟಪ್ರಭಾ ನದಿಗಳಂತೆ ನಲಿಯುತ್ತಾ ಸಾಗುವುದು ಒಗ್ಗುವುದೇಇಲ್ಲ ಎಂಬಷ್ಟು ಗಾಂಭೀರ್ಯದಿಂದಲೇ ಹರಿಯುತ್ತದೆ. ತೀರಾ ಕೆಲವೇ ಕೆಲವು ಕಡೆ ಸಾಗುವ ದೃಶ್ಯ ಕಾಣುತ್ತದೆ. ಬರಗಾಲವನ್ನೇ ಹಾಸಿ, ಹೊದ್ದು, ಉಂಡು ಬದುಕುವಪ್ರದೇಶವಿದೆ. ಇಷ್ಟೆಲ್ಲದರ ಜೊತೆಗೆ ದೇವದಾಸಿ, ಗಾಳಿ ಬಿಡಿಸುವುದು ಮತ್ತಿತ್ಯಾದಿ ಕಂದಾಚಾರಗಳು ಇದರ ಒಡಲಲ್ಲಿವೆ.
ಇದೊಂದೇ ಲೋಕಸಭಾ ಕ್ಷೇತ್ರದಲ್ಲಿ ೧೫ ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಕಾರ್ಖಾನೆಗಳಸಮೃದ್ಧಿಯಷ್ಟೇ ರೈತರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ವ್ಯಾಪಕ ತಂತ್ರ,ಕುತಂತ್ರಗಾರಿಕೆಗಳು ಇವೆ. ಹೊಲದಲ್ಲಿ ನಡು ಬಗ್ಗಿಸಿ ದುಡಿಯುವ ರೈತ ಮಾತ್ರಚುನಾವಣೆಯಲ್ಲಿ ಉತ್ತಮನನ್ನು ಆಯ್ಕೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರಕಂಡುಕೊಳ್ಳಬಹುದು. ಆದರೆ, ಅಂತುಹುದೆಲ್ಲವನ್ನೂ ಇಡೀ ಭಾರತದಲ್ಲೇ ಕಷ್ಟವಾಗಿರುವುದರಿಂದಇಲ್ಲಿ ನಿರೀಕ್ಷಿಸುವುದು ತಪ್ಪಾಗುತ್ತದೆ. ಅಂತಹುದೊಂದು ಐಡಿಯಾವೇ ಇದ್ದಂತಿಲ್ಲಇವರಿಗೆ.
ಬಡತನ, ಅನಕ್ಷರತೆಯು ಸಲೀಸಾಗಿ ಪಾಳೇಗಾರಿಕೆಗೆ, ಹಣಕ್ಕೆ ಬೆದರಿ ಶರಣಾದಂತೆಯೇಇಲ್ಲಿನ ಕತ್ತಿ ಸಾಹುಕಾರ ಹಾಗೂ ಹುಕ್ಕೇರಿ ಸಾಹುಕಾರರಿಗೆ ಜನ ತಲೆಬಾಗಿದ್ದಾರೆ.ಮರಾಠಿಯ ಪ್ರಾಬಲ್ಯ, ಗಡಿ ಸಮಸ್ಯೆ, ಜಲ ಸಮಸ್ಯೆ, ಸಕ್ಕರೆಯ ಕಣಜದಲ್ಲಿ ಓಡಾಡಿ ಅನುಭವಹೆಚ್ಚಿಸಿಕೊಳ್ಳಲು ನಮ್ಮ ಸಂಪಾದಕರು ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ೧೪ ದಿನಗಳಿಂದನನ್ನ ಅನುಭವದ ಬುತ್ತಿ ತುಂಬಿದೆ. ಇನ್ನು ಒಂದು ವಾರ ಇಲ್ಲೇ ಓಡಾಡುತ್ತೇನೆ. ಎಲ್ಲಾಅನುಭವಗಳನ್ನು ಹೇಳಿಕೊಳ್ಳುವುದು ಕಷ್ಟ. ಹೇಳಿಕೊಳ್ಳಲೇಬೇಕು ಎಂದು ಕಾಡುವುದನ್ನುಬರೆಯುವ ಯತ್ನ ಮಾಡುತ್ತೇನೆ. ಅಥಣಿ ಎಂಬ ಬರಗಾಲದ ಊರಿನಲ್ಲಿ ಭಗೀರಥನಂತೆಶ್ರಮಿಸುತ್ತಿರುವ ಬಿ.ಎಲ್. ಪಾಟೀಲರು ಬಗ್ಗೆ ಹೇಳಲೇಬೇಕು. ಎಲ್ಲಾ ಸರಿ ನಿಮ್ಮೂರಲ್ಲಿಎಲೆಕ್ಷನ್ ಕಾವು ಹೇಗಿದೆ...?

Saturday, March 21, 2009

ಯಾವ ಕಾನ್ಫಿಡೆನ್ಸಿಗಿದೆ...?


ತುಂಬಾ ಪ್ರೀತಿಸಿದ ಗರ್ಲ್ ಫ್ರೆಂಡ್ ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುರಂತ ಏನಾದರೂ ಇದೆಯಾ? ಯುವಕನೊಬ್ಬ ಸ್ವಾಮಿ ವಿವೇಕಾನಂದರ ಮುಂದೆ ನಿಂತು ಕೇಳಿದ.
ಹೌದು ಖಂಡಿತಾ ಇದೆ. ಮತ್ತೊಬ್ಬ ಹುಡುಗಿ ಸಿಕ್ಕೇ ಸಿಗುತ್ತಾಳೆ ಎಂಬ ಆತ್ಮವಿಶ್ವಾಸ ಕಳೆದುಕೊಳ್ಳವುದು ದೊಡ್ಡ ದುರಂತ. ಆತ್ಮವಿಶ್ವಾಸ ಕಳೆದುಕೊಂಡರೇ ಜೀವನವನ್ನೇ ಕಳೆದುಕೊಂಡಂತೆ ಎಂದು ವಿವೇಕಾನಂದರು ಉತ್ತರಿಸಿದರಂತೆ.
ಈ ಘಟನೆ ಎಸ್‌ಎಂಎಸ್ ರೂಪದಲ್ಲಿ ಒಂದು ತಡರಾತ್ರಿ ವೈದ್ಯ ಮಿತ್ರ ಡಾ. ಮಂಜು ಮೊಬೈಲ್‌ನಿಂದ ಬಂತು. ಮಲಗಿದ್ದರೂ ನಿದ್ದೆ ಬರದೇ ಒದ್ದಾಡುತ್ತಿದ್ದವನು, ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಏನು ಗೊತ್ತು? ಎಂದು ಮೆಸೇಜಿಸಿದ.
ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಗೊತ್ತಿಲ್ಲ. ಕಾನ್ಫಿಡೆನ್ಸ್ ಗೊತ್ತು ಎಂದು ಪಾಠ ಶುರುವಿಟ್ಟ.
ಪಾಠ ಕೇಳಿದ ಮನಸ್ಸು, ‘ಇಡೀ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸವನ್ನು ಒಬ್ಬ ಗರ್ಲ್‌ಫ್ರೆಂಡ್ ನೀಡಬಲ್ಲಳು, ನೀಡುತ್ತಾಳೆ. ಯಾವ ಕಾನ್ಫಿಡೆನ್ಸು ಒಬ್ಬ ಗರ್ಲ್‌ಫ್ರಂಡ್ ಅನ್ನು ಗೆದ್ದೇ ಗೆಲ್ಲಬಲ್ಲೇ ಎಂದು ಕಾನ್ಫಿಡೆಂಟ್ ಆಗಿ ಹೇಳುತ್ತದೆ’ ಎಂಬ ಪ್ರಶ್ನೆ ಎಸೆದೆ. ಇನ್ನೂ ಉತ್ತರ ಬಂದಿಲ್ಲ.

Monday, March 2, 2009

ಈ ಊರು ಪ್ರತಿ ಬೇಸಿಗೆಗೂ ಮೊಮ್ಮಕ್ಕಳಿರುವ ವೃದ್ಧಾಶ್ರಮ


ಬಿಸಿಲ ಬೇಗೆ ಶುರುವಾಗಿದೆ. ಮರದಲ್ಲಿ ಎಲೆ ಉದುರುತ್ತಿದೆ. ಗರಿಕೆ ಹುಲ್ಲು ಕಮರಿದೆ. ದನ -ಕರುಗಳಿಗೆ ಮೇವಿನ ಅಭಾವ. ದುಡಿಯುವ ಕೈಗಳಿಗೆ ಕೆಲಸದ ಅಭಾವ. ಹೀಗಾಗಿ ಧಾರವಾಡ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಮಂದಿ ಕೆಲಸ ಅರಸಿ ಊರು ಬಿಡವುದು ಸಾಮಾನ್ಯ. ತಾಲೂಕಿನ ಹುಣಶಿಕುಮರಿ ಮತ್ತು ಉಡವನಾಗಲಾವಿ ಗ್ರಾಮಗಳಂತೂ ವಲಸೆಯಿಂದಾಗಿ ಗ್ರಾಮಗಳು ಮೊಮ್ಮಕ್ಕಳೊಂದಿಗೆ ವೃದ್ಧರಿರುವ ವೃದ್ಧಾಶ್ರಮಗಳಾಗಿ ಬಿಟ್ಟಿವೆ.
ಸರಿಯಾದ ರಸ್ತೆಯನ್ನೂ ಕಾಣದ ಈ ಎರಡು ಹಳ್ಳಿಗಳ ಯುವಕರು, ಮಧ್ಯ ವಯಸ್ಕರು ಪ್ರತಿ ಬೇಸಿಗೆಯಂತೆಯೇ ಈ ಬಾರಿಯೂ ಊರು ಬಿಟ್ಟಿದ್ದಾರೆ. ಕೆಲವರು ಮನೆಯಲ್ಲಿನ ದನಗಳನ್ನು ಮೇವಿರುವ ಕಡೆಗೆ ಮೇಯಿಸಲು ಹೋಗಿಬಿಟ್ಟಿದ್ದಾರೆ. ಇನ್ನು ಕೆಲವರು ಗೋವಾದಲ್ಲಿ ಕೆಲಸ ಅರಸಿ ಗಂಟು ಮೂಟೆ ಕಟ್ಟಿ ತಿಂಗಳಾಗಿದೆ. ಈಗ ಈ ಎರಡೂ ಹಳ್ಳಿಗಳಲ್ಲಿ ಇರುವುದು ವೃದ್ಧರು, ಮಕ್ಕಳು ಮತ್ತು ಹೆಣ್ಣು ಮಕ್ಕಳು ಮಾತ್ರ.
ಇಂತಹ ವಲಸೆ ತಡೆಯಬೇಕು. ಅವರಿರುವ ಊರಿನಲ್ಲೇ ಉದ್ಯೋಗ ದೊರಕಿಸಿಕೊಡಬೇಕು. ದುಡಿಯುವ ಕೈಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ ಎಂಬ ತತ್ವದೊಂದಿಗೆ ಜಾರಿಗೆ ಬಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೂ ಈ ವಲಸೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಎರಡೂ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯ ನೋಂದಣಿಯಾಗಿದ್ದರೂ ಯಾರೂ ಆ ಯೋಜನೆಯ ಕೆಲಸಕ್ಕೆ ಹೋಗದೇ, ಊರು ಬಿಟ್ಟಿದ್ದಾರೆ.
ನಿತ್ಯದ ಹಾಲಿಗೆ ಎಂದು ಒಂದೆರಡು ಹಸುಗಳನ್ನು ಕೆಲವರು ಊರಲ್ಲೇ ಉಳಿಸಿಕೊಂಡಿದ್ದಾರೆ. ಎರಡೂ ಗ್ರಾಮದಲ್ಲಿ ಜನಸಂಖ್ಯೆಗಿಂತ ಮೂರು ಪಟ್ಟು ಹಸು -ಕರುಗಳಿವೆ. ಪಶುಸಂಗೋಪನೆಯೇ ಈ ಗ್ರಾಮದ ದೊಡ್ಡ ಉದ್ಯೋಗ. ಇವರ್‍ಯಾರು ಹಾಲು ಮಾರುವುದಿಲ್ಲ. ಹಾಲನ್ನು ಖೋವಾ ಮಾಡಿ, ಧಾರವಾಡದ ಸಿಹಿ ತಯಾರಕರಿಗೆ ಮಾರುತ್ತಾರೆ.
ಆರೋಗ್ಯ ಕೆಟ್ಟರೆ..
ಈ ಎರಡೂ ಗ್ರಾಮಗಳು ಧಾರವಾಡ ತಾಲೂಕಿನಲ್ಲಿದ್ದರೂ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಇವು ಧಾರವಾಡದಿಂದ ೧೭ ಕಿಮೀ ದೂರದಲ್ಲಿರುವ ಕಲಕೇರಿ ಗ್ರಾಮ ಪಂಚಾಯ್ತಿಗೆ ವ್ಯಾಪ್ತಿಯಲ್ಲಿವೆ. ಕಲಕೇರಿಯಿಂದ ಕಚ್ಚಾ ಮಣ್ಣಿನ ಹಳ್ಳಕೊಳ್ಳದ ರಸ್ತೆಯಲ್ಲಿ ೫.೫ ಕಿಮೀ ಸಾಗಿದರೆ ಹುಣಶೀಕುಮರಿ ಸಿಗುತ್ತದೆ. ಅಲ್ಲಿಂದ ಇನ್ನೂ ೨.೫ ಕಿಮೀ ಸಾಗಿದರೆ ಉಡವ ನಾಗಲಾವಿ ಗ್ರಾಮ ಸಿಗುತ್ತದೆ. ೪೦೦ ಜನಸಂಖ್ಯೆ ಇರುವ ಉಡವ ನಾಗಲಾವಿಗೆ ಹೋಲಿಸದರೆ ೬೦೦ ರಷ್ಟು ಜನಸಂಖ್ಯೆ ಇರುವ ಹುಣಶೀಕುಮರಿ ಸ್ವಲ್ಪ ಅಭಿವೃದ್ಧಿ ಕಂಡಿದೆ. ಅಂದರೆ ಹೆಂಚಿನ ಮನೆಗಳು ಹೆಚ್ಚಿವೆ ಅಷ್ಟೇ. ರಸ್ತೆಯಂತೂ ಎರಡೂ ಊರಿಗೂ ಇಲ್ಲ.
ಊರಲ್ಲಿ ಶಕ್ತರಾದ ಮಕ್ಕಳು ಇಲ್ಲದ ಹೊತ್ತಿನಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ, ದೇವರೆ ಗತಿ. ಕಾರಣ ಅವರನ್ನು ಆಸ್ಪತ್ರೆಗೆ ಒಯ್ಯಬೇಕು ಅಂದರೆ ಹೊತ್ತುಕೊಂಡೇ ಸಾಗಬೇಕು. ಒಬ್ಬಿಬ್ಬರ ಬಳಿ ಬೈಕ್ ಇದ್ದರೂ ಅದನ್ನು ಆ ಕಲ್ಲಿನ ಹಾದಿಯಲ್ಲಿ ಓಡಿಸುವುದೇ ಒಂದು ಸಾಹಸದ ಕೆಲಸ. ಬೈಕ್ ಓಡಿಸುವ ಮಕ್ಕಳು ಸದ್ಯ ದನ ಅಟ್ಟಿಕೊಂಡು ಊರು ಬಿಟ್ಟಿದ್ದಾರೆ.
ಯಾರಿಗೆ ಬೇಕ್ರಿ ಖಾತ್ರಿ..?
ಉದ್ಯೋಗ ಖಾತ್ರಿ ಯೋಜನೆಗೆ ನಾವೆಲ್ಲಾ ಸೇರಿವಿ. ದಿನಕ್ಕೆ ೮೨ ರೂಪಾಯಿ ಕೊಡ್ತಾರಂತೆ. ಅದೇ ಗೋವಾ, ಬೆಳಗಾವಿ, ಹುಬ್ಬಳ್ಯಾಗ ಹೋದ್ರೆ ೨೦೦ ರು.ವರೆಗೂ ಸಂಪಾದಿಸ್ತಾರೆ. ಅಲ್ಲದೆ, ಇಲ್ಲಿ ಏನ ಕೆಲಸ ಸಲಾಕೆ (ಗುದ್ದಲಿ)ಯಾಗ ರಸ್ತೆ ಅಗೆಯೋದು. ಮಣ್ಣಿನಲ್ಲಿ ರಸ್ತೆ ಮಾಡಿಕೋರಿ ಅಂತ ೧.೪೦ ಲಕ್ಷ ರು.ದ ಕಾಮಗಾರಿ ಹೇಳ್ಯಾರ. ಯಾರೂ ಆ ನೌಕರಿಗೆ ಹೋಗಿಲ್ಲ. ಹೋಗಾದೂ ಇಲ್ಲ. ಎಲ್ಲಾ ದನ ಹೊಡ್ಕಂಡು, ಕೆಲವರು ಗೋವಾಗೆ ಹೋಗ್ಯಾರ ಅಂತ ಅಳಲು ತೋಡಿಕೊಂಡವರು ಹುಣಶಿಕುಮರಿ ಗ್ರಾಪಂ ಮಾಜಿ ಸದಸ್ಯ ತುಕಾರಾಮ.
ಮಳೆಗಾಲಕ್ಕೆ ಬರೋದು..,
ನಮ್ಮ ಹುಡುಗರು ದೇವಗಿರಿ ಕಡೇಗೆ ದನ ಹೊಡ್ಕಂಡು ಹೋಗ್ಯಾರ. ನಮ್ಮ ಪೈಕಿ ಕೆಲವರು ಗೋವಾಗೂ ಹೋಗ್ಯಾರ. ಇದ ಇಲ್ಲಿ ಪ್ರತಿ ಬೇಸಿಗೆಗೂ ಕಾಯಂ ನಡೆಯೋದ್ರಿ. ಮಳೆಗಾಲ ಶುರುವಾದ ಕೂಡ್ಲೆ ಎಲ್ಲಾ ವಾಪಸ್ ಬರ್‍ತಾರೆ. ಉದ್ಯೋಗ ಕಾರ್ಡ್ ಕೊಟ್ಟಾರೆ, ಎಲ್ಲಾ ಮನೆಯಾಗೆ ಅದಾವು. ಅದೇನು ಮಾಡೋದ್ರಿ ಎಂದು ಪ್ರಶ್ನಿಸಿದವರು ಭೈರು.
ಉದ್ಯೋಗ ಖಾತರಿ ಯೋಜನೆ ಎಲ್ಲಿ ವಿಫಲವಾಗಿದೆ? ಏಕೆ ವಿಫಲವಾಗಿದೆ? ಹೇಗೆ ವಿಫಲವಾಗಿದೆ? ಎಂಬ ಪ್ರಶ್ನೆಗಳಿಗೆ ಈ ಊರುಗಳಲ್ಲಿ ಉತ್ತರ ಸಿಗುತ್ತದೆ.

ಹೇಳುವುದು ಏನೋ ಉಳಿದು ಹೋಗಿದೆ............


Wednesday, February 18, 2009

ನನ್ನೊಬ್ಬನ ಬಿಟ್ಟು...,







ಕಾಯೋದಿಲ್ಲ ಯಾರು ನಿನಗೆ ಸದಾ,




ನನ್ನೊಬ್ಬನ ಬಿಟ್ಟು...,




ನಿನ್ನ ಇರುವಿಕೆಯ ಮಧುರ ಭಾವದಲ್ಲೇ




ಕಾದಿರುವೆ............




ನೀ ಬರುವ ಹಾದಿಯಲ್ಲೇ ನಾನಿರುವೆ




ಕಾಯೋದಿಲ್ಲ ಯಾರು ಮಳೆಗೆ ಸದಾ




ಭುವಿಯ ಬಿಟ್ಟು




ಕಾದಿರುವೆ ನಾ ಭುವಿಯಾಗಿ




ಎಂದು ಬರುವೆ ನೀ ಮಳೆಯಾಗಿ.....?




ಕಾಯೋದಿಲ್ಲ ಯಾರು ಸದಾ




ನನ್ನೊಬ್ಬನ ಬಿಟ್ಟು.....




- ಡಾ. ವಿನಯ್ ಮಂಡ್ಯ




(ಗುಳಿಗೆ, ಸೂಜಿ, ಕಾಯಿಲೆ ಅಂತ ಓದುತ್ತ, ಕೆಲಸ ಮಾಡುತ್ತ ಬ್ಯುಸಿ ಆಗಿರಬೇಕಾದ ಗೆಳಯ ವಿನಯ್ ಅವಳಿಗೆ ಕಾಯುತ್ತ ಕವಿಯಾಗಿದ್ದಾನೆ.)

Sunday, February 15, 2009

59 ಪ್ರೇಮ ವಿವಾಹ ಮಾಡಿಸಿದ 'ಸಾಧನಾ'


ಪ್ರೀತಿಸಿದ ಹೃದಯಗಳನ್ನು ಬೇರ್ಪಡಿಸುವ ಮನೆಯವರ ಯತ್ನಕ್ಕೆ ಹೆದರಿ ಧಾರವಾಡದತ್ತ ಓಡಿ ಬರುವ ಜೋಡಿಗಳಿಗೆ ಇಲ್ಲಿನ ತೇಜಸ್ವಿನಿನಗರದ ಮನೆಯೊಂದು ತವರು ಮನೆಯಾಗುತ್ತದೆ.
ಹೀಗೆ ಓಡಿ ಬಂದ ಜೋಡಿಯೊಂದು ಆತ್ಮಹತ್ಯೆಗೆ ಯತ್ನಿಸುವಾಗ ವ್ಯಕ್ತಿಯೊಬ್ಬರಿಗೆ ಸಿಕ್ಕಿದ ಕೂಡಲೇ ಅವರು ತಂದು ಬಿಟ್ಟದ್ದು ಇದೇ ಮನೆಗೆ. ಪ್ರೀತಿಯ ಹೆಸರಲ್ಲಿ ಗರ್ಭವತಿ ಮಾಡಿ ಹುಡುಗ ಕೈ ಕೊಟ್ಟಾಗಲೂ ಇಲ್ಲಿನವರಿಗೆ ನೆನಪಾಗುವುದು ಇದೇ ಮನೆಯೇ. ಕಳೆದ 8 ವರ್ಷಗಳಲ್ಲಿ ಹೀಗೆ ಬಂದ 59 ಜೋಡಿಗಳಿಗೆ ಮದುವೆ ಮಾಡಿಸಿದೆ ಈ ಮನೆ. ಇದರ ಹೆಸರು 'ಸಾಧನಾ' ಸ್ವಯಂ ಸೇವಾ ಸಂಸ್ಥೆ. ಇದು ಮನೆಯೂ ಹೌದು. 'ಸಾಧನಾ'ದ ಕಚೇರಿಯೂ ಹೌದು.
ಇಸೆಬೆಲ್ಲಾ ಝೇವಿಯರ್ ಪಾಟೀಲ್ ಎಂಬಾಕೆಯೇ ಇದರ ಮುಖ್ಯಸ್ಥೆ. ಪ್ರೇಮಿಗಳ ಪೈಕಿ ಹೆಣ್ಣು ಮಕ್ಕಳಿಗೆ ತಾಯಿಯಾಗಿ, ಹುಡುಗರಿಗೆ ಅತ್ತೆಯಾಗುವ ಈಕೆಯದೂ ಒಂದು ದುರಂತ ಪ್ರೇಮ ಕಥೆ ಇದೆ. 8ನೇ ತರಗತಿಯಲ್ಲಿರುವಾಗಲೇ ತನ್ನ ಮೇಲೆ ನಡೆದ ದೌರ್ಜನ್ಯಗಳೇ ಈ ಕಾರ್ಯಕ್ಕೆ ಪ್ರೇರಣೆ. ತನ್ನ ಪ್ರೀತಿಯಂತೆ ಇನ್ನೊಬ್ಬರ ಪ್ರೀತಿಯು ಸಮಸ್ಯೆಗೆ ಸಿಲುಕಬಾರದು ಎಂಬ ಆಸೆ, ಪ್ರೇಮ ವಿವಾಹದಿಂದ ಜಾತಿಯ ಎಲ್ಲೆಗಳು ನಾಶವಾಗುತ್ತವೆ ಎಂಬ ಆಶಯದಿಂದ ಪ್ರೇಮ ವಿವಾಹಕ್ಕೆ ಪೌರೋಹಿತ್ಯ ವಹಿಸುತ್ತಾ, ಮಾನವ ಹಕ್ಕುಗಳ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ.
59ರಲ್ಲಿ..
59 ಮದುವೆಗಳ ಪೈಕಿ 26 ಜೋಡಿಗಳು ಮನೆಯವರಿಗೆ ಹೆದರಿ ಓಡಿ ಬಂದಾಗ ನಿಂತು ಮದುವೆ ಮಾಡಿಸಿದವು. 26ರ ಪೈಕಿ 23 ಜೋಡಿಗಳು ಸುಖಿ ಸಂಸಾರ ಸಾಗಿಸುತ್ತಿದ್ದಾರೆ. ಅಂತರ್ಜಾತಿ ವಿವಾಹಗಳೇ ಹೆಚ್ಚು. 3 ಕುಟುಂಬಗಳು ಮಾತ್ರ ಅತಿಯಾದ ಪ್ರೀತಿ, ಅನುಮಾನದಿಂದ, ಕೇವಲ ದೈಹಿಕ ಆಕರ್ಷಣೆಯಾದ್ದರಿಂದ ಒಡೆದ ಮನೆಯಾಗಿವೆ. ಸಾಧನಾ ಸಂಸ್ಥೆಗೂ ಮೊದಲು ತಾನು ಶಿಕ್ಷಕಿಯಾಗಿದ್ದಾಗ ಬೆಂಬಲಿಸಿ ಮಾಡಿಸಿದ ಪ್ರೇಮ ವಿವಾಹಗಳ ಸಂಖ್ಯೆ ಲೆಕ್ಕಕ್ಕಿಟ್ಟಿಲ್ಲ ಎಂದು ತಾವು ನಡೆದು ಬಂದ ಹಾದಿ, ಅನುಭವದ ಬಗ್ಗೆ ಇಸೆಬೆಲ್ಲಾ, ಮಾಹಿತಿ ನೀಡಿದರು.
ಉಳಿದ 33 ಮದುವೆಗಳು ಮಾತ್ರ ತೀವ್ರ ತರಹದ ಹೋರಾಟದಿಂದಲೇ ಮಾಡಿಸಿದವು. ಊರಿನಲ್ಲಿ ಹುಡುಗಿಯನ್ನು ನಂಬಿಸಿ, ಗರ್ಭವತಿ ಮಾಡಿದ ನಂತರ ಜಾತಿ, ಅಂತಸ್ತಿನ ನೆಪ ಹೇಳಿ ಕೈ ಕೊಡುತ್ತಿದ್ದ ವಂಚಕ ಪ್ರಕರಣಗಳ ಮದುವೆ ಅವು. ಕಾನೂನು ಪ್ರಕಾರ ಸಿಗಬೇಕಾದ ನ್ಯಾಯ ಒದಗಿಸಿದ ತೃಪ್ತಿ ಅಷ್ಟೇ ಇದರಿಂದ ಸಿಕ್ಕಿದ್ದು. ಈ ಜೋಡಿಗಳ ಪೈಕಿ ಸುಖಿ ಸಂಸಾರ ಕಾಣುತ್ತಿರುವುದು ಕೆಲವೇ ಕೆಲವು ಅಂತಾರೆ.
ಹೇಳಿಕೊಳ್ಳಲು..
ನಮ್ಮ ಎಲ್ಲಾ ಆಚರಣೆಯಂತೆಯೇ 'ಪ್ರೇಮಿಗಳ ದಿನ'ವೂ ಒಂದು. ಅದು ಅಗತ್ಯ ಕೂಡ. ಆಕೆ ಅಥವಾ ಆತನ ಮೇಲೆ ಆಸೆ, ಪ್ರೀತಿ ಹುಟ್ಟಿದ್ದರೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿರುತ್ತಾರೆ. ಪಿಸು ಮಾತಿನಲ್ಲಿ ಉಸುರಲೂ ಹೆದರುತ್ತಿರುತ್ತಾರೆ. ಕಡೇ ಪಕ್ಷ ಪ್ರೇಮಿಗಳ ದಿನವಾದರೂ ನೇರವಾಗಿ, ನಡುಗುತ್ತಲೋ, ಒಂದು ಸಣ್ಣ ಗಿಫ್ಟ್ ಮೂಲಕವೋ ತನ್ನ ಪ್ರೀತಿ ಹೇಳಿಕೊಳ್ಳುವ ಅವಕಾಶವಾಗುತ್ತದೆ. ಪ್ರೇಮಿಗಳ ದಿನ ತಪ್ಪಲ್ಲ. ನಡೀಬೇಕು ಎನ್ನೋದು ಇಸೆಬೆಲ್ಲಾ ಅವರ ವಾದ.
ಯಾವ ದಿನವಾದರೂ..,
ಆದರೆ, ಪ್ರೇಮಿಗಳ ದಿನದ ಮಹತ್ವ ಗೊತ್ತಿಲ್ಲದವರು ಮಾತ್ರ ಅದರ ಹೆಸರಲ್ಲಿ ಕಾಮಕೇಳಿ, ಕುಡಿತ, ಕುಣಿತ ಮಾಡುತ್ತಾರೆ. ಅವರನ್ನೇ ನೋಡಿ, ಅವರಷ್ಟೇ ಪ್ರೇಮಿಗಳು. ಅದೇ ಪ್ರೇಮಿಗಳ ದಿನ ಎಂದು ಭಾವಿಸಿ ಕೆಲವು ಸಂಘಟನೆಗಳು ವಿರೋಧದ ಕೂಗು ಎಬ್ಬಿಸಿವೆ. ಹೀಗೆ ಕುಡಿದು, ಕಾಮಕೇಳಿ ಆಡುವವರಿಗೆ ಅದು ಪ್ರೇಮಿಗಳ ದಿನವೇ ಆಗಬೇಕಿಲ್ಲ, ಹೊಸ ವರ್ಷದ ನೆಪದಲ್ಲೂ ಮಾಡುತ್ತಾರೆ. ಹುಟ್ಟಿದ ಹಬ್ಬಗಳಾದರೂ ಇವರಿಗೆ ಸಾಕು. ಅವರಿಂದಾಗಿ, ನಿಜವಾದ ಪ್ರೇಮಿಗಳಿಗೆ, ಮುಕ್ತವಾಗಿ ಹೇಳಿಕೊಳ್ಳಬಹುದಾದ ಅವಕಾಶವೂ ತಪ್ಪಿಸುವ ಕೆಲಸ ಆಗುವುದು ಬೇಡ. ಹೃದಯದ ಪಿಸು ಮಾತುಗಳು ಇಷ್ಟ ಪಟ್ಟ ಹೃದಯಕ್ಕೆ ಕೇಳಿಸುವ ಅವಕಾಶ ತಪ್ಪಿಸಬೇಡಿ ಎಂದೂ ಮನವಿ ಮಾಡುತ್ತಾರೆ.
ಕಾಮವಲ್ಲ..
ಪ್ರೀತಿ -ಪ್ರೇಮ ಎಂದರೆ ಬರಿಯ ಕಾಮವಲ್ಲ. ಕಾಮಕ್ಕಲ್ಲ. ಪ್ರೀತಿ ಎಂದರೆ ಅದೊಂದು ಪರಿಶುದ್ಧ ಸ್ನೇಹ. ಪ್ರೀತಿ ಆದ ಕೂಡಲೇ ಕಾಮಕ್ಕೆ ಇಳಿಯಬೇಡಿ. ಅದು ಪ್ರೀತಿಯ ಒಂದು ಭಾಗ ಅಷ್ಟೇ. ಇನ್ನು ಟೀನೇಜ್ ಜೋಡಿಗಳು ಸಾಕಷ್ಟು ಬರುತ್ತಾರೆ. ಅವರಿಗೆ ಕೌನ್ಸೆಲಿಂಗ್ ನಡೆಸಿ ಇದು ಪ್ರೀತಿ -ಪ್ರೇಮಕ್ಕೆ ಸಕಾಲವಲ್ಲ ಎಂದೂ ತಿಳುವಳಿಕೆ ನೀಡಿ ಕಳುಹಿಸುತ್ತೇವೆ. ಓಡಿ ಬಂದ ಕೂಡಲೇ ಅವರಿಗೆ ಆಪ್ತ ಸಮಾಲೋಚನೆ ನಡೆಸಿ, ಅದು ನಿಜವಾದ ಪ್ರೀತಿಯಾ ಎಂದು ಅರಿತೇ ಮದುವೆ ಮಾಡಿಸುತ್ತೇವೆ. ಕೆಲವರಿಗೆ ನಾವೇ ಕೆಲಸ ಕೊಡಿಸಿದ್ದೂ ಇದೆ. ಮನೆಯವರನ್ನೇ ಒಪ್ಪಿಸಿ ಮದುವೆ ಮಾಡಿಸಿದ ಅನುಭವವೂ ಇದೆ ಎಂದರು.
ನನ್ನ ಪ್ರೀತಿಯಂತಹ ದುರಂತ ಯಾರಿಗೂ ಆಗಬಾರದು. ನನ್ನ ಎಲ್ಲಾ ಹಿನ್ನೆಲೆ ಅರಿತು ನನ್ನ ಮದುವೆಯಾದ ಎಲ್.ಟಿ. ಪಾಟೀಲರು ಈ ಸಂಸ್ಥೆ ನಡೆಸಲು ನನ್ನ ಜೊತೆಗೆ ಬಂಬಲವಾಗಿ ನಿಂತಿದ್ದಾರೆ. ಪ್ರೀತಿಸಿದವರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪ್ರೀತಿ ನಿಜವಾಗಿದ್ದರೆ ಅದನ್ನು ಅರ್ಥ ಮಾಡಿಸಿ, ಆಗದಿದ್ದರೆ ಇಲ್ಲಿಗೆ ಬನ್ನಿ ನಾವು ನೆರವಾಗುತ್ತೇವೆ ಎಂದು ಇಸೆಬೆಲ್ಲಾ ಅಭಯ ನೀಡುತ್ತಾರೆ.
ಅವರ ವಿಳಾಸ -ಇಸೆಬೆಲ್ಲಾ ಝೇವಿಯರ್ ಪಾಟೀಲ, ಸಾಧನಾ ಸಂಸ್ಥೆ, ತೇಜಸ್ವಿನಿನಗರ, ಧಾರವಾಡ, ದೂರವಾಣಿ 0836 - 6551190 ಅಥವಾ ಮೊಬೈಲ್ -99452 57473 ಸಂಪರ್ಕಿಸಬಹುದು.

Friday, January 30, 2009

ಸಮಸ್ಯೆಗಳ ಸುನಾಮಿ ಮಾನೋಮಿಯಲ್ಲಿ ಜಗಳದ ಸುದ್ದಿ...

ಸಮಸ್ಯೆಗಳಲ್ಲಿ ಹಳ್ಳಿ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ ಗೊತ್ತಿಲ್ಲ. ಆದರೆ ಈ ಊರಿನಲ್ಲಿ ಭರ್ಜರಿಯಾಗಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ನಿಂತಿಲ್ಲ...?ಎಂಬಿತ್ಯಾದಿಯಾಗಿ ಕ್ಯಾಮೆರಾ ಮುಂದೆ ನಿಂತ ಟಿವಿ 9 ವರದಿಗಾರ ಮಿತ್ರ ರೆಹಮತ್ ಕಂಚಿಗಾರ ಅವರು ತಮ್ಮ ವಿಶೇಷ ವಿಶಿಷ್ಟ ಶೈಲಿಯಲ್ಲಿ ವರದಿ ಒಪ್ಪಿಸುತ್ತಿದ್ದರು.
ಅವರ ಒಂದು ಕೈ ಮೈಕ್ ಹಿಡಿದಿದ್ದರೆ ಮತ್ತೊಂದು ಕೈ ಪ್ಯಾಂಟು ನೀರಿನಲ್ಲಿ ತೋಯ್ದೀತು ಎಂದು ಪ್ಯಾಂಟು ಹಿಡಿದುಕೊಂಡಿದ್ದರು. ಅವರು ಹರಿಯುತ್ತಿದ್ದ ಹಳ್ಳದ ನೀರಿನಲ್ಲಿ ನಿಂತಿದ್ದರು.
ಅವರ ಎಡ ಬದಿಗೆ ಪ್ರತಿ ಮಳೆಗಾಲದಲ್ಲಿ ದ್ವೀಪವಾಗುವ, ರಸ್ತೆ ಇಲ್ಲದ ಸಮಸ್ಯೆಗಳ ಸುನಾಮಿಯಲ್ಲೇ ಇರುವ ಮಾನೋಮಿ?ಗ್ರಾಮ ಅಚ್ಚರಿಯಿಂದ ನೋಡುತಿತ್ತು. ಇನ್ನಾದರೂ ರಾಜಕಾರಣಿಗಳು ನಮ್ಮ ಸಮಸ್ಯೆಗೆ ಧಾವಿಸುವರೆ ಎಂದು ಆಸೆಯನ್ನು ಕಣ್ಣುಗಳಲ್ಲಿ ತುಂಬಿ ನಿಂತು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಟಿವಿ ಛಾನಲ್ ವರದಿಗಾರರನ್ನು ತದೇಕ ಚಿತ್ತದಿಂದ ಗ್ರಾಮಸ್ಥರು ನೋಡುತ್ತಿದ್ದರು.
ಆರು ಕಿಮೀ ನಡೆಯಬೇಕು..,
ಅದು ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಅರಬಾವಿ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ. ಆ ಗ್ರಾಮಕ್ಕೆ ನೀವು ಹೋಗಬೇಕು ಅಂದರೆ ಬರೋಬ್ಬರಿ 6 ಕಿಮೀ ನಡೆಯಬೇಕು. ಮೂರು ಕಿಮೀ ನಡೆಯಲು ಕಚ್ಚಾ ಹಾದಿ ನಿಮ್ಮ ನೆರವಿಗೆ ಬಂದರೆ, ಇನ್ನು 3 ಕಿಮೀ ಸಾಗಲು ನೀವು ಹೊಲದ ಬದಿಯ ಕಾಲು ಹಾದಿಯನ್ನೇ ಆಶ್ರಯಿಸಬೇಕು. ಇಷ್ಟೆಲ್ಲಾ ಸಾಗಿ ಬಂದ ಮೇಲೆ ಹೊಳೆಯಂತಹ ಹಳ್ಳ ನಿಮ್ಮನ್ನು ಅಡ್ಡಗಟ್ಟುತ್ತದೆ. ಆ ಹೊಳೆಯನ್ನು ದಾಟಿದರೆ ಊರು ಸಿಗುತ್ತದೆ. ಮಳೆಗಾಲದಲ್ಲಿ ಈ ಹಳ್ಳ ನಾಲ್ಕು ಆಳು ಎತ್ತರಕ್ಕೆ ಹರಿಯಲು ತೊಡಗುತ್ತದೆ. ಆಗ ಈ ಊರು ಅಕ್ಷರಶಃ ದ್ವೀಪವಾಗುತ್ತದೆ. ಸರಿ ಸುಮಾರು ಒಂದೂವರೆಯಿಂದ ಎರಡು ತಿಂಗಳು ಇಲ್ಲಿನವರಿಗೆ ಹೊರಗಿನ ಸಂಪರ್ಕ ಕಟ್ ಆಗುತ್ತದೆ. ಈ ಊರಿನಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬರಲಾಗುವುದಿಲ್ಲ. ಹೀಗಾಗಿ ಈ ಶಾಲೆಗೆ ಅಘೋಷಿತ ರಜೆ. ಇನ್ನು ಊರ ಹೊರಗೆ ಶಾಲೆ ಕಾಲೇಜಿಗೆ ಹೋಗುವ ಹುಡುಗರಿಗೂ ರಜೆ. ಇದರಿಂದಾಗಿಯೇ ಈ ಊರಿನಲ್ಲಿ ಹೆಚ್ಚು ಓದಿದವರು ಇಲ್ಲ.
ಇಷ್ಟೆಲ್ಲಾ ಸಮಸ್ಯೆ ಇರುವ ಈ ಊರಿನಲ್ಲಿ 400 ಮತಗಳಿವೆ. ಸರಿಸುಮಾರು 1200ರಷ್ಟು ಜನಸಂಖ್ಯೆ ಇದೆ. ಆದರೂ ಇಲ್ಲಿಗೆ ವೋಟು ಕೇಳಲು ಅಭ್ಯರ್ಥಿ ಬರುವುದಿಲ್ಲ. ಅವನ ಬಂಟರು ಬಂದು ಆಶ್ವಾಸನೆಯ ಮಳೆ ಸುರಿಸಿ, ಮತ ಯಾಚಿಸಿ ಹೋಗುತ್ತಾರೆ. ಅದನ್ನೇ ನಂಬಿದಂತೆ ಮಾಡಿ ಇವರು ವೋಟು ಹಾಕುತ್ತಾರೆ.
ಕೈ ತಪ್ಪಿತ್ತು..
ಈ ಗ್ರಾಮದ ಸಮಸ್ಯೆ, ಪಡಿಪಾಟಲನ್ನು ನಾನು ಅರಬಾವಿ ಕ್ಷೇತ್ರಕ್ಕೆ ಹೋಗುವ ಮುನ್ನಾ ದಿನವೇ ನಮ್ಮ ಬೆಳಗಾವಿಯ ಹಿರಿಯ ವರದಿಗಾರ ಎಂ.ಕೆ. ಹೆಗಡೆ ವಿಶೇಷ ವರದಿ ಬರೆದಿದ್ದರು. ನಾನು ಹೋಗಿ ಈ ಸುದ್ದಿ ನೋಡಿ, ನನ್ನ ಕೈಯಿಂದ ತಪ್ಪಿತಲ್ಲ. ವಾಪಸ್ ಹೋಗುವುದರೊಳಗೆ ಆ ಊರಿಗೆ ಹೋಗಿ ಬರಬೇಕು. ಎಂದುಕೊಂಡಿದೆ. ನನಗಿಂತ ಮುಂಚಿತವಾಗಿ ಹೋಗಿದ್ದರೂ ಆ ಸುದ್ದಿ ಮೊದಲು ತನಗೆ ಸಿಗಲಿಲ್ಲವಲ್ಲ ಎಂದು ಕಸ್ತೂರಿ ಟಿವಿಯ ಮುಸ್ತಫಾ, ಶಿವಾಜಿ ಕೈ ಕೈ ಹಿಸುಕಿಕೊಂಡಿದ್ದರು. ತಾವೂ ಅಲ್ಲಿಗೆ ಹೋಗು ಬರುವ ಇರಾದೆ ವ್ಯಕ್ತಪಡಿಸಿದ್ದರು. ಆದರೆ, ಸುದ್ದಿಯ ಒತ್ತಡಗಳಿಂದಾಗಿ ತಾಸು ಗಟ್ಟಲೆ ನಡೆದು ಹೋಗಿ ಸುದ್ದಿ ಮಾಡುವ ಸಮಯ ಯಾರಿಗೂ ಸಿಕ್ಕಿರಲಿಲ್ಲ.
ಜಗಳ ಎಂದೂ...
ಅರಬಾವಿ ಉಪ ಚುನಾವಣೆ ದಿನ ಇಂತಿಪ್ಪ ಮಾನೋಮಿ ಗ್ರಾಮದಲ್ಲಿ ಮತಗಟ್ಟೆಯಲ್ಲಿ ಅಧಿಕಾರಿಗಳು ಪಕ್ಷವೊಂದರ ಪರ ಮತ ಹಾಕುವಂತೆ ಹೇಳುತ್ತಿದ್ದರು. ಇದರಿಂದಾಗಿ ಜಗಳ ಶುರುವಾಗಿ ಮತದಾನ ಸ್ಥಗಿತಗೊಳಿಸಲಾಗಿದೆ ಎಂಬ ಮಾಹಿತಿ ಸುದ್ದಿಗಾರರಿಗೆ ದೊರೆಯಿತು. ಈ ಜಗಳದ ಸುದ್ದಿಗಾಗಿ ಟಿವಿ೯ನೇ ರೆಹಮತ್ ಕಂಚಿಗಾರ, ಅವರ ಕ್ಯಾಮೆರಾ ಕಣ್ಣು ಸ್ಟೀಫನ್, ಈಟಿವಿಯ ಗುರುಲಿಂಗಸ್ವಾಮಿ, ರಾಕೇಶ್, ಕಸ್ತೂರಿ ಟಿವಿಯ ಮುಸ್ತಫಾ, ಶಿವಾಜಿ, ಝೀ ಟಿವಿಯ ನಾಗರಾಜ್ ಕಿರಣಗಿ, ನಮ್ಮೆಲ್ಲರ ಪಾಲಿನ ಗೈಡ್ ಮುನ್ನಾ ಬಾಗವಾನ್ ಜೊತೆಯಲ್ಲಿ ಮಾನೋಮಿಗೆ ಹೋದೆವು.
ಆ ಊರಿಗೆ ಮಾಧ್ಯಮ ತಂಡವು ಕಾಲಿಡುತ್ತಿದ್ದಂತೆ ಆ ಊರಿನ ಮಂದಿ ರಾಜಕೀಯ ಜಗಳ ಮರೆತರು. (ರಾಜಕಾರಣಿಗಳು ಬಂದಾಗಲೂ ಗ್ರಾಮಸ್ಥರು ಹೀಗೆ ವರ್ತಿಸಿದರೆ ಚೆನ್ನಾಗಿರುತ್ತೆ.) ಅದು ಸಣ್ಣ ಜಗಳ ಬಿಡಿ. ಈ ವೋಟಿಂಗು ಶುರು ಆಗ್ಯದ. ನಮ್ಮೂರು ಸಮಸ್ಯೆ ಹಿಂಗಿಂಗ ಅದ ಎಂದು ಅಲವತ್ತುಕೊಳ್ಳಲು ತೊಡಗಿದರು. ಎಲ್ಲವೂ ಕ್ಯಾಮೆರಾಗಳ ಕಣ್ಣು ತುಂಬಿಕೊಳ್ಳ ತೊಡಗಿತು. ಆ ಊರಿನ ಸಮಸ್ಯೆ ಎಲ್ಲವೂ ದಾಖಲಾಯಿತು. ಅಲ್ಲಿಗೆ ನಮ್ಮಂತೆಯೇ ಚುನಾವಣಾ ಕರ್ತವ್ಯಕ್ಕಾಗಿ ನಮ್ಮ ಧಾರವಾಡದ ಪಿಎಸೈ ಒಬ್ಬರನ್ನು ಹಾಕಿದ್ದರು. ಅವರು ಊರಿನ ಸ್ಥಿತಿಯ ಬಗ್ಗೆ ಮರುಕ ವ್ಯಕ್ತಪಡಿಸಿ, ರಾಜಕೀಯ ಬಿಡಿ ಅಭಿವೃದ್ಧಿ ಕೇಳಿ ಎಂಬ ಕಿವಿಮಾತನ್ನು ಗ್ರಾಮಸ್ಥರಿಗೆ ಹೇಳುತ್ತಿದ್ದರು. ಎಲ್ಲವನ್ನೂ ಕೇಳಿಕೊಂಡಂತೆ ಗ್ರಾಮಸ್ಥರು ಮಾಡಿದರು. ಆದರೆ, ವಾಪಸ್ ನಾವು ಹೋಗುವಾಗ ದಾರಿ ಜೊತೆಗೆ ಸಿಕ್ಕ ಮಹಿಳೆ ಪಾರವ್ವ, ಹೇಳಿದ್ದು - ಎಲ್ಲಾ ನಮ್ಮೂರಿನವರದೇ ತಪ್ಪು. ರಸ್ತೆ ಮಾಡಿಸಿಕೊಡಿ ಎಂದು ಎಲ್ಲಾ ಒಗ್ಗಟ್ಟಾಗಿ ಕೇಳದ್ರ ಆಗುತ್ತೆ. ಆ ಪಾರ್ಟಿ, ಈ ಪಾರ್ಟಿ ಮಾಡಿಕೊಂಡು ಏನೂ ಆಗದಂಗೆ ಆಗೈತಿ. ರಸ್ತೆಗೆ ಜಾಗ ಬಿಡಿಸೋದು ಕಷ್ಟ ಆಗೈತೆ. ಈ ಕಷ್ಟ ಎಲ್ಲಾ ಗೆದ್ದವರೆಗೆ ಯಾಕೆ ಬೇಕು? ಎಂಬ ಪ್ರಶ್ನೆ, ವಿಷಾದವನ್ನು ವ್ಯಕ್ತಪಡಿಸಿ ಹಳ್ಳ ದಾಟಲಾಗದೆ ಸತ್ತ ಗರ್ಭಿಣಿಯರು, ಅಂಗವಿಕಲರ ಕಥೆಗಳನ್ನು ಹೇಳಿದರು. ಎಲ್ಲವೂ ಎಲ್ಲದರಲ್ಲೂ ಪ್ರಸಾರವಾಯಿತು. ಆದರೆ, ಆ ಹಳ್ಳಿಯತ್ತ ಚುನಾವಣೆ ನಂತರ ಗೆದ್ದವರು ಹೋಗಿಲ್ಲ, ಸೋತವರು ಹೋಗಿಲ್ಲ. ವೋಟು ಕೇಳಾಕೆ ಅವರು ಹೋಗಿರಲಿಲ್ಲ.
ಪಂಚಿಂಗ್ ಪಿಟಿಸಿ ಕೊಡುವ ರೆಹಮತ್ ಹೇಳುತ್ತಿದ್ದ - ಹಳ್ಳಿಗಳಲ್ಲಿ ಸಮಸ್ಯೆ ಇದೆಯೋ, ಈ ಹಳ್ಳಿನೇ ಸಮಸ್ಯೆ ಆಗಿದೆಯೋ...............ಅಭಿವೃದ್ಧಿಯ ಪಂಚಮಿ ಈ ಮಾನೋಮಿಗೆ ಯಾವಾಗ ಬರುತ್ತೋ ಎಂಬ ಮಾತು ಮಾತ್ರ ಈಗಲೂ ನೆನಪಾಗುತ್ತಿದೆ...,

ಮಾನೋಮಿ ಚಿತ್ರಗಳು...,
















Tuesday, January 13, 2009

ಆ ಮನೆಯಲ್ಲೇ ಎಲ್ಲರ ಫಸ್ಟ್ ನೈಟ್ ನಡೆಯುತಿತ್ತು...!


ಘಟಪ್ರಭ ನೀರಿನ ನಾಲೆ ಅಲ್ಲೇ ಮಗುಲಲ್ಲೇ ಹರಿಯುತಿತ್ತು. ಹೆಣ್ಣು ಮಕ್ಕಳು ಯಾವುದರ ಪರಿವೇ ಇಲ್ಲದೆ ಬಟ್ಟೆ ತೊಳೆಯುತ್ತಿದ್ದರು. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡುವವರಿಗೂ ಯಾವುದೇ ಅರಿವಿರಲಿಲ್ಲ. ಅಂತಹ ಹೊತ್ತಿನಲ್ಲೇ ನಮ್ಮ ಕಾರು ಅಲ್ಲಿಗೆ ಪ್ರವೇಶಿಸಿತು. ಪ್ರವೇಶದಲ್ಲೇ ಧೂಳು ಹೊದ್ದುಕೊಂಡಂತೆ ಇದ್ದ ಆ ಮನೆಯತ್ತಲೇ ನನ್ನ ದೃಷ್ಟಿ ನೇರವಾಗಿ ಬಿತ್ತು.
ನೀವು ಅಷ್ಟೇ ಗೋಕಾಕದಿಂದ ಕೊಟ್ಟೂರು ಬಸವೇಶ್ವರ ಸನ್ನಿಧಾನ ಇರುವ ಅರಬಾವಿಗೆ ಹೋದರೆ ಮೊದಲು ಸ್ವಾಗತಿಸುವುದೇ ಆ ಮನೆ. ಛೇ ಛೇ ಅದನ್ನು ಮನೆ ಎನ್ನುವುದಕ್ಕಿಂತ ಹಳೆಯ ಬಂಗಲೆ ಎನ್ನಲು ಅಡ್ಡಿ ಇಲ್ಲ. ಆ ಭಾರಿ ಮನೆಯತ್ತಲೇ ನನ್ನ ನೋಟ ನೆಟ್ಟಿತ್ತು. ಏನಿದು ಮನೆಯಾ? ಅರಮನೆಯಾ? ಕಾರು ನಿಲ್ಲಿಸಿ ಫೋಟೋ ತೆಗೆಯುವ ಎಂದು ನಾನು ಮಾತು ಆರಂಭಿಸುವ ಮುನ್ನವೇ ಗೆಳೆಯ ಮುನ್ನಾ ಮಾತನಾಡಲು ಶುರು ಮಾಡಿದ್ದರು.
ಒಂದು ಕಾಲದಲ್ಲಿ ಇದೇ ಮನೆಯಲ್ಲೇ ಸುತ್ತಲ ಹತ್ತು ಹಳ್ಳಿಯ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತಿತ್ತು ಎಂದರು.
ಓಹೋ..ಓಹೋ.. ಅಂತ ವಿಶೇಷ ಏನ್ ಗುರುವೇ ಈ ಮನೆಯಲ್ಲಿ, ನಿಲ್ಲಿಸು ಈಗ ಡೇನಲ್ಲಿ ಏನು ನಡೆಯುತ್ತೆ ನೋಡೋಣ ಅಂದೆ ಗೇಲಿಯಿಂದ.
ಕಾರು ನಿಲ್ಲಿಸಬೇಡಿ. ನಡೆಯಿರಿ. ಹತ್ತೂ ಊರಿನ ಹೆಣ್ಣು ಮಕ್ಕಳ ಫಸ್ಟ್ ನೈಟ್ ನಡೆಯುತ್ತಿದ್ದದ್ದು ಇಲ್ಲೇ. ಆದರೆ, ಎಲ್ಲಾ ಹೆಣ್ಣು ಮಕ್ಕಳ ಜೊತೆ ಮಲಗುತ್ತಿದ್ದದ್ದು ಮಾತ್ರ ಒಬ್ಬನೇ. ಅವನೇ ಸತ್ಯಪ್ಪ ವಡ್ಡರ ಎಂದು ಪ್ರಥಮ ರಾತ್ರಿಗಳ ಕಥೆಯ ಹಾಳೆಗಳು ತಿರುಗತೊಡಗಿದವು.
ಅದು ಸುಮಾರು 1935 - 1960ರ ನಡುವೆ ನಡೆದ ದರ್ಬಾರಿನ ದಿನಗಳು. ಈ ಸತ್ಯಪ್ಪ ವಡ್ಡರ ಶ್ರೀಮಂತನೂ ಹೌದು, ದೊಡ್ಡ ಪಾಳೇಗಾರ. ಈಗಿನ ಅರ್ಥದಲ್ಲಿ ಹೇಳಬೇಕು ಅಂದರೆ ರೌಡಿ. ಗೂಂಡಾ ಆಗಿದ್ದ. ಅರಬಾವಿಯಿಂದ ಜಮಖಂಡಿಯವರೆಗೂ ಎಲ್ಲೂ ತಪ್ಪದಂತೆ ಹೊಲವಿತ್ತು ಸತ್ಯಪ್ಪನಿಗೆ ಎಂದು ಹೇಳುತ್ತಾರೆ. ಸುತ್ತಲ ಯಾವುದೇ ಹಳ್ಳಿಯಲ್ಲಿ ಮದುವೆಯಾದರೂ ಆ ಹೆಣ್ಣು ಮಗಳ ಮೊದಲ ರಾತ್ರಿ ಮಾತ್ರ ಸತ್ಯಪ್ಪ ವಡ್ಡರ ಜೊತೆಯೇ ಆಗಬೇಕಿತ್ತು. ಇಲ್ಲವೇ ಜೀವ ಕಳೆದುಕೊಳ್ಳಬೇಕಿತ್ತು.
ಅದೇ ಕಟ್ಟಪ್ಪಣೆಯನ್ನು ತನ್ನ ಹಣಕಾಸಿನ ಲೆಕ್ಕ ನೋಡಿಕೊಳ್ಳುತ್ತಿದ್ದಾತನ ಮಗಳಿಗೂ ಅನ್ವಯಿಸಿದ. ಕೈ ಕೈ ಮುಗಿದು ಕಾಲಿಗೆ ಬಿದ್ದರೂ ಸತ್ಯಪ್ಪನ ಆಸೆ ಮಾತ್ರ ಕರಗಲಿಲ್ಲ. ಲೆಕ್ಕದವನ ಮಗಳೊಂದಿಗೆ ಮಲಗಿ ಆಕೆಯ ಆತ್ಮಹತ್ಯೆಗೆ ಕಾರಣವಾಗಿಬಿಟ್ಟ. ಬಡಪಾಯಿ ಲೆಕ್ಕದವ ಸತ್ಯಪ್ಪನ ಮೇಲೆ ಸೇಡು ತೀರಿಸಿಕೊಳ್ಳುವುದು ದೂರದ ಮಾತಾಗಿತ್ತು. ಆಗ, ಬ್ರಿಟೀಷರು ಆದಾಯ ತೆರಿಗೆಗಾಗಿ ತಪಾಸಣೆ ನಡೆಸ ತೊಡಗಿದರು. ಗುಟ್ಟಾಗಿ ಸತ್ಯಪ್ಪನ ಕಳ್ಳಲೆಕ್ಕದ ಮಾಹಿತಿ, ಅವಿತಿಟ್ಟ ಸಂಪತ್ತಿನ ಮಾಹಿತಿಯನ್ನು ಬ್ರಿಟೀಷರಿಗೆ ಮುಟ್ಟಿಸಿದ. ಬ್ರಿಟೀಷರು ಎಲ್ಲವನ್ನೂ ಜಫ್ತು ಮಾಡಿಕೊಂಡರು.
ಎಲ್ಲಾ ಗೂಂಡಾಗಿರಿಯ ಮೊದಲ ಶಕ್ತಿಯಾದ ಸಂಪತ್ತು ಅವನಿಂದ ದೂರಾಗಲು ತೊಡಗಿತ್ತು. ಅವನ ದರ್ಪವೂ ನಿಧನವಾಗಿ ಕ್ಷೀಣಿಸತೊಡಗಿತು. ಅಷ್ಟರಲ್ಲಿ ಭಾರತಕ್ಕೆ ಸ್ವಾತಂತ್ರ್ಯವೂ ಬಂತು. ಅನೇಕ ಬದಲಾವಣೆಗಳ ಗಾಳಿಗೆ ಗೋಕಾಕ ತಾಲೂಕು ಮೈ ಒಡ್ಡಿಕೊಂಡಿತು. ಆದರೆ, ವಯಸ್ಸಾಗುತ್ತಿದ್ದ ಸತ್ಯಪ್ಪನಿಗೆ ಮತ್ತಷ್ಟು ಹೆಣ್ಣು ಚಪಲ ಹೆಚ್ಚಾಯಿತು. ಮೊದಲಿನಂತೆ ಅಲ್ಲವಾದರೂ ಹೆದರುವವರನ್ನು ಹೆದರಿಸಿ ಚಪಲ ತೀರಿಸಿಕೊಳ್ಳುತ್ತಿದ್ದ. ಸತ್ಯಪ್ಪನ ತೆವಲಿಗೆ ಜೀವ ಕಳೆದುಕೊಂಡಕೆಯ ಸಾವಿನ ಪ್ರಕರಣದ ತನಿಖೆ ಖಡಕ್ ಅಧಿಕಾರಿಗಳು ಮುಂದಾದರು. ಆಗ ಸತ್ಯಪ್ಪನ ಮನೆ ಮೇಲೆ ದಾಳಿ ನಡೆಸಿದರು. ಅವನ ಮನೆ ಹಿಂದೆ ತೆಗ್ಗು ತೆಗೆಯಲು ತೊಡಗಿದರು. ಸುಮಾರು ೨ ಅಡಿಯಷ್ಟು ಆಳ ತೆಗೆಯುತ್ತಿದ್ದಂತೆ ಮೊದಲು ಚಿಮ್ಮಿದ್ದು ತಲೆಬುರುಡೆ. ಹಾಗೆ ಅಗೆಯುತ್ತಾ ಹೋಗುತ್ತಿದ್ದಂತೆ ತಲೆಬುರುಡೆ, ಮೂಳೆಗಳು ಎಷ್ಟು ಎಂಬುದನ್ನು ಲೆಕ್ಕ ಇಟ್ಟವರಾರು ಈಗ ಉಳಿದಿಲ್ಲವಂತೆ. ಅದಾದ ನಂತರ ಸತ್ಯಪ್ಪನ ಅವನತಿ ಆರಂಭವಾಯಿತಂತೆ. ಕೊನೆಗೆ ನಾನಾ ಕಾಯಿಲೆಗಳು ಅಮರಿಕೊಂಡು ಚಿಂತಾಜನಕ ಸಾವು ಕಂಡನಂತೆ. ಆತನ ಅಧಿಕೃತ ಪತ್ನಿಗೆ ಹುಟ್ಟಿದ ಮಕ್ಕಳ ಮಕ್ಕಳು ಈಗ ಆ ಬಂಗಲೆಯಲ್ಲಿ ಇದ್ದಾರೆ. ಆ ಬಂಗಲೆ ಮೇಲಿನ ಧೂಳು ನೋಡಿದರೆ ತಾತನ ಅಬ್ಬರ ಯಾವುದೂ ಆ ಮನೆ, ಮನದಲ್ಲಿ ಉಳಿದಿಲ್ಲ. ಸತ್ಯಪ್ಪ ವಡ್ಡರ ಎಂದರೆ ನಡಗುತ್ತಿದ್ದ ಗೋಕಾಕ ತಾಲೂಕು ಈಗ ಈ ಮನೆ ಕಡೆಗೆ ಅಸಹ್ಯದಿಂದ ನೋಡುತ್ತಾ ತಮಗೆ ತೋಚಿದಂತೆ ಕಥೆ ಹಳಲು ಶುರುವಿಡುತ್ತಾರೆ. ಆ ಮನೆಯಲ್ಲಿ ಇರುವವರನ್ನು ಕರುಣೆಯಿಂದ ನೋಡುತ್ತಾರೆ. ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುತ್ತಿದೆ ಎಂಬುದು ಅರಬಾವಿ ಮಠದ ಪಕ್ಕದ ಗುಡಿಸಲು ಕ್ಯಾಂಟೀನ್‌ನಲ್ಲಿ ಟೀ ಕುಡಿಯುತ್ತಾ ಕುಳಿತಿದ್ದ ಹಿರಿಯರೊಬ್ಬರ ವಾದವಾಗಿತ್ತು.
ಎಲ್ಲಾ ಅನ್ಯಾಯ, ಅಕ್ರಮ ಎಸಗಿದವರೇ ಸುಖದಿಂದಲೇ ಜೀವಿಸುತ್ತಾ, ಜೀವ ಬಿಟ್ಟ ಅನೇಕ ಉದಾಹರಣೆಗಳಿವೆ. ಇನ್ನು ತಾತ ಮಾಡಿದ ಪಾಪ ಮೊಮ್ಮಕ್ಕಳನ್ನು ಕಾಡುವುದೇ ಎಂಬ ನನ್ನ ನಖರ ಪ್ರಶ್ನೆ ತುಟಿಗೆ ಬಂತೇ ಹೊರತು ಶಬ್ದವಾಗಿ ಹೊರ ಹೊಮ್ಮಲಿಲ್ಲ.
ಗೋಕಾಕ ತಾಲೂಕಿಗೆ ಕುಟುಂಬ ರಾಜಕಾರಣ, ಗೂಂಡಾಗಿರಿ ಇತ್ತೀಚಿಗೆ ಅಂಟಿಕೊಂಡ ರೋಗವಲ್ಲ. ಅದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಜಮೀನುದಾರಿಕೆ, ಪಾಳುದಾರಿಕೆಯ ಗಟ್ಟಿ ಬೇರಿದೆ ಎಂಬುದು ಅರ್ಥವಾಯಿತು. ಆಮೇಲೆ ಆಧುನಿಕ ಪಾಳೇಗಾರರ ಮೇಲೆ ನನಗೆ ಅಷ್ಟಾಗಿ ಸಿಟ್ಟು ಬರಲಿಲ್ಲ. ಶಿಕ್ಷಣ, ಸ್ವಾತಂತ್ರ್ಯ ಜನಪ್ರಿಯ ಆಗಿರುವ ಈ ಕಾಲದಲ್ಲೂ ಜನರನ್ನು ಇನ್ನು ಹಿಡಿದಿಟ್ಟಿದ್ದಾರಲ್ಲ ಎಂದು ಆಶ್ಚರ್ಯವೇ ಆಯಿತು.

Friday, January 2, 2009

ಎಡವಿಬಿದ್ದರೆ ಬಾರ್‌ನಲ್ಲಿ ಎಂಬ ಊರಿನಲ್ಲಿ..,


ನಮ್ಮೂರಿನಲ್ಲಿ ಒಂದು ಮಾತಿದೆ, ಎಡವಿ ಬಿದ್ದರೆ ಬಾರ್‌ನಲ್ಲಿ, ನಗೆದು ಬಿದ್ದರೆ ದವಾಖಾನೆಯಲ್ಲಿ ಎಂದೇ ಮಾತಿಗೆ ಆರಂಭಿಸಿದರು ನನಗೆ ಗೋಕಾಕ ತಾಲೂಕು ಪರಿಚಯಿಸಿದ ಹಿರಿಯ ವರದಿಗಾರ ಮಿತ್ರ ಮುನ್ನಾ ಬಾಗವಾನ್. ಗೋಕಾಕ ನಗರದ ರಸ್ತೆಯೊಂದರಲ್ಲೇ ನಾಲ್ಕಾರು ಬಾರ್ ಅಂಡ್ ರೆಸ್ಟೋರಂಟ್‌ಗಳು, ಅದು ತಾಲೂಕಾದರೂ ಮೆಘಾ ಸಿಟಿಯಲ್ಲಿ ಕಾಣುವಂತಹ ಫೈವ್ ಸ್ಟಾರ್ ಶೈಲಿಯ ಆಸ್ಪತ್ರೆಗಳನ್ನು ಕಂಡು ನಾನು ಅವಕ್ಕಾದಾಗ ಮುನ್ನಾ ಹೇಳಿದ್ದೇ ಹಾಗೆ.
ಕರದಂಟು ಖ್ಯಾತಿಯ ಗೋಕಾಕ ನಗರವು ರಕ್ತಸಿಕ್ತ ರಾಜಕಾರಣಕ್ಕೂ ಹೆಸರು ವಾಸಿ. ಹೆಸರಿಗೆ ಬೆಳಗಾವಿ ಜಿಲ್ಲೆಯ ಒಂದು ತಾಲೂಕು. ಆದರೆ, ಇದು ಒಂದು ಜಿಲ್ಲೆಯಾಗುವಷ್ಟು ಬೆಳೆದಿದೆ. ಈ ತಾಲೂಕಿನ ಒಡಲಲ್ಲಿ ನಾಲ್ಕಾರು ಸಕ್ಕರೆ ಕಾರ್ಖಾನೆ, ಸಿಮೆಂಟು ಕಾರ್ಖಾನೆ ಹಾಗೂ ಕುಟುಂಬ ರಾಜಕಾರಣವಿದೆ.
ಇದೇ ತಾಲೂಕಿನ ಅರಬಾವಿ ವಿಧಾನಸಭಾ ಕ್ಷೇತ್ರವು ಆಪರೇಷನ್ ಕಮಲದಿಂದಾಗಿ ಇತ್ತೀಚೆಗೆ ಉಪ ಚುನಾವಣೆ ಎದುರಿಸಿತು. ಅದಕ್ಕೆ ಸಾಕ್ಷಿಯಾಗುವ ಅವಕಾಶವನ್ನು ನಮ್ಮ ಸಂಪಾದಕರು ನನಗೆ ಕಲ್ಪಿಸಿ ಕಳುಹಿಸಿಕೊಟ್ಟಿದ್ದರು. 10 ದಿನಗಳು ಅಲ್ಲಿ ಕೆಲಸ ಮಾಡಿದ್ದು, ಸಿಕ್ಕ ಗೆಳೆಯರು, ಗಳಿಸಿದ ಅನುಭವ ನನ್ನ ಪಾಲಿಗೆ ಅಮೂಲ್ಯ. 10 ದಿನದ ಉದ್ದಕ್ಕೂ ನನ್ನ ಸಲುಹಿದ ಮುನ್ನಾ ಯಾವಾಗಲೂ ನನೆಪಿನಲ್ಲಿ ಉಳಿಯುತ್ತಾರೆ. ಅವರೊಬ್ಬ ಅದ್ಭುತ ಸ್ಟೋರಿ ಟೆಲ್ಲರ್. ಅದೆಲ್ಲಕ್ಕಿಂತ ಹೆಚ್ಚಾಗಿ ಜೀವನ ಪ್ರೇಮ ಉಳಿಸಿಕೊಂಡಿರುವ ರಸಿಕ. ಅದೇ ತಾಲೂಕಿನ ಮೂಡಲಗಿ ಗ್ರಾಮದ ನಮ್ಮ ಪ್ರತಿನಿಧಿ ಕೃಷ್ಣ ಗಿರಿಯಣ್ಣವರ ತೋರಿಸಿದ ಪ್ರೀತಿ, ಕಳಕಳಿ ನೆನೆದರೆ ಇಂದಿಗೂ ಮನಸ್ಸು ಪ್ರಫುಲ್ಲವಾಗುತ್ತದೆ.
ಈ ತಾಲೂಕಿನಲ್ಲಿ ಜಾರಕಿಹೊಳಿ ಕುಟುಂಬವನ್ನು ಸಾಹುಕಾರರು ಎಂದೇ ಕರೆಯುತ್ತಾರೆ. ಗೋಕಾಕ ತಾಲೂಕಿನ ಬಗ್ಗೆ ಮತಾನಾಡುವಾಗ ಆ ಕುಟುಂಬವನ್ನು ಬಿಟ್ಟು ಮಾತನಾಡುವುದೇ ಕಷ್ಟ. ಅವರ ಬಗ್ಗೆ ಹೆಚ್ಚು ಮಾತನಾಡುವುದು ಕಷ್ಟ. ಇಡೀ ತಾಲೂಕಿನಲ್ಲಿ ಆ ಕುಟುಂಬದ ಬಗ್ಗೆ ಮೆಚ್ಚುವವರು, ಭಕ್ತಿ ತೋರುವವರು, ಭೀತಿಯಿಂದಲೇ ಬಾಯಿ ತೆರೆಯುವವರು, ಅವರ ಕಂಡರೆ ಹಲ್ಲು ಹಲ್ಲು ಕಡಿಯುವವರು ಸಿಗುತ್ತಾರೆ. ಅವರ ರಕ್ತಸಿಕ್ತ ರಾಜಕಾರಣ, ವ್ಯವಹಾರದ ಬಗ್ಗೆ ಮುಂದೆದಾದರೂ ಬರೆದೇನು.
ದಾರಿ ತಪ್ಪುವ ಮುನ್ನ - ಎಡವಿಬಿದ್ದರೆ ಬಾರಿನಲ್ಲಿ ಎಂಬ ಊರಿನಲ್ಲಿ ಸಿಕ್ಕ ಮುನ್ನಾ ಬಾಗವಾನ ಅವರು ಒಂದು ರಾತ್ರಿಯ ತೀರ್ಥಗೋಷ್ಠಿಯ ನಂತರ ಲಾಡ್ಜ್ ಎದುರಿನ ರಸ್ತೆಯಲ್ಲಿ ಏಳೆಂಟು ವರದಿಗಾರ ಮಿತ್ರರು ಮಾತನಾಡುತ್ತಾ ನಿಂತಿದ್ದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಪೊಲೀಸರನ್ನು ನೋಡಿದ ಕೂಡಲೇ ಮುನ್ನಾ ಜಾಗೃತರಾದರು. ತಾವು ತೀರ್ಥ ಸೇವನೆ ಶುರು ಮಾಡಿದಕ್ಕೆ ಪೊಲೀಸರೇ ಕಾರಣ ಎಂದು ಹೇಳಿದ ಕಥೆ ಹೀಗಿದೆ...,
ಅದು ಬಾಬ್ರಿ ಮಸೀದಿ ಉರುಳಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಮು ಗಲಭೆ ನಡೆಯುತ್ತಿದ್ದ ದಿನಗಳು. ಆಗ ಅಲ್ಲಿನ ಸ್ಥಳೀಯ ಪತ್ರಿಕೆಯಾದ ಗೋಕಾಕ ಟೈಮ್ಸ್‌ನಲ್ಲಿ ಮುನ್ನಾ ವರದಿಗಾರರಾಗಿದ್ದರು. ಆಗೆಲ್ಲಾ ಒಂದು ಫೋಟೋ ಬ್ಲಾಕ್ ಮಾಡಿಸಲು ಸಹ ಬೆಳಗಾವಿಗೆ ಹೋಗಬೇಕಿತ್ತು. ಇನ್ನು ಪಿಟಿಐ ಸುದ್ದಿಗಳಿಗೂ ಬೆಳಗಾವಿಗೆ ಹೋಗಿ, ಅಲ್ಲಿಯೇ ಅನುವಾದ ಮುಗಿಸಿ ಹೊತ್ತುಕೊಂಡು ಬರುವ ಕೆಲಸ ಮುನ್ನಾ ಅವರದು. ಹಾಗೆ ಹೊರಟ ಒಂದು ದಿನ ಗೋಕಾಕದಲ್ಲಿ ಕರ್ಫ್ಯೂ.. ವಿಧಿಸಲಾಗಿತ್ತು. ತನ್ನ ಗುರುತಿನ ಚೀಟಿಯನ್ನು ಕೊರಳಿಗೆ ನೇತು ಬಿಟ್ಟುಕೊಂಡು ರಸ್ತೆಗಿಳಿದರು ಮುನ್ನಾ. ಎಲ್ಲಾ ಹೊರಗಿನ ಪೊಲೀಸರೇ ಆದ್ದರಿಂದ ಇವರನ್ನು ವರದಿಗಾರರು ಎಂದು ಗುರುತಿಸಬೇಕಿದ್ದದ್ದು ಕೊರಳಿನಲ್ಲಿದ್ದ ಐಡಿ ಕಾರ್ಡ್‌ನಿಂದಲೇ. ಅವರು ಬಸ್ಸು ನಿಲ್ದಾಣದ ಕಡೆಯಿಂದ ಹಾದು ಹೋಗುವಾಗ ಮಲ್ಲಿಕಾಜನ ಗುಡ್ಡದ ಕಡೆಯಿಂದ ಇಬ್ಬರು ಕಂದಮ್ಮಗಳೊಂದಿಗೆ ಮಹಿಳೆಯೊಬ್ಬರು ಬ್ಯಾಗು, ಬಿದಿರು ಬುಟ್ಟಿ ಹಿಡಿದು ಬರುತ್ತಿದ್ದಳು. ಕೂಡಲೇ ಆಕೆಯನ್ನು ಮುತ್ತಿಕೊಂಡ ಪೊಲೀಸರು ತಪಾಸಣೆಗೆ ಇಳಿದರು. ಮಕ್ಕಳು ಅಳಲಾರಂಭಿಸಿದವು. ಇಬ್ಬರು ಪೊಲೀಸರು ಬುಟ್ಟಿ ಬ್ಯಾಗು ಜಾಲಾಡಿ, ಅದರಲ್ಲಿದ್ದ ಒಂದಷ್ಟು ಅನ್ನ ಚೆಲ್ಲಿದರು. ಬಟ್ಟೆ ಎಳೆದಾಡಿದರು. ಪೊಲೀಸೊಬ್ಬ ಆಕೆಯತ್ತ ಲಾಠಿ ಬೀಸತೊಡಗಿದ. ಬೇಡಿ ತಂದಿದ್ದ ಅನ್ನವನ್ನು ಕಸಿದುಕೊಂಡಿರಲ್ಲಾ. ಇನ್ನು ಯಾವ ಮನೆಯಲ್ಲಿ ಬೇಡಲಿ. ಯಾರೂ ಬಾಗಿಲು ತೆಗೆಯೊಲ್ಲಾ ಎಂದು ಕಣ್ಣೀರಾಗತೊಡಗಿದಳು. ಆದರೂ ಲಾಠಿಗೆ ಕನಿಕರ ಬರಲಿಲ್ಲ.
ಅದನ್ನು ತಡೆಯಲು ಹೋದೆ ಅಷ್ಟೇ. ಹಿಗ್ಗಾ ಮುಗ್ಗಾ ಲಾಠಿಗಳು ಅಬ್ಬರಿಸಿ ಮುಗಿಬಿದ್ದು ನಗ್ಗು ಮಾಡಿದವು ನನ್ನ. ಕಾಲುಗಳು ಸರಿದಾಡಿದವು. ತೋಳಿಗೆ, ಮುಖಕ್ಕೆ ಬ್ಯಾಂಡೇಜ್ ಬಂತು. ಆ ನೋವು ಗೊತ್ತಾಗದೇ ಇರಲು ಕುಡಿ ಎಂದು ಗೆಳೆಯರು ಪ್ರೇರೇಪಿಸಿದರು. ಅಂದಿನಿಂದ ತೀರ್ಥ ಸೇವನೆ ಶುರುವಾಯಿತು ಎಂದು ಅವರದ ಅದ್ಭುತ ಶೈಲಿಯಲ್ಲಿ ಕಥೆ ಹೇಳಿದರು. ನಮ್ಮೊಂದಿಗೆ ಪೊಲೀಸರು ನಕ್ಕರು. ನಾವು ನಕ್ಕೆವು. ಆದರೆ ಮುನ್ನಾ ಮುಖದಲ್ಲಿ ನಗುವಿಗಿಂತ ಹೆಚ್ಚು ವಿಷಾದವೇ ಕಾಣುತಿತ್ತು...,

ಮುಂದಿನ ಘಟನೆ - ಆ ಊರಲ್ಲಿ ಯಾರದೇ ಮದುವೆಯಾದರೂ ಅವರ ಫಸ್ಟ್ ನೈಟ್ ಮಾತ್ರ ಆ ಮನೆಯಲ್ಲೇ ನಡೆಯುತಿತ್ತು...!