Thursday, April 23, 2009
Friday, April 17, 2009
ಚಿಕ್ಕೋಡಿ ಎಂಬ ಬೇವು ಬೆಲ್ಲದ ನಾಡಿನಲ್ಲಿ..,
‘ಧಾರವಾಡ’ ಉತ್ತರ ಕರ್ನಾಟಕದಲ್ಲೇ ಇದೆ. ‘ಚಿಕ್ಕೋಡಿ’ ಉತ್ತರ ಕರ್ನಾಟಕದಲ್ಲೇ ಇದೆ.ಆದರೆ, ಧಾರವಾಡಕ್ಕೂ ಚಿಕ್ಕೋಡಿಗೂ ಸಾಮಾನ್ಯ ಎನ್ನುವಂತಹ ಒಂದೇ ಒಂದು ಅಂಶವಿಲ್ಲ.ಅಷ್ಟೇ ಏಕೆ ಬೆಳಗಾವಿ ಜಿಲ್ಲೆಯ ಒಡಲಲ್ಲೇ ಇರುವ ಚಿಕ್ಕೋಡಿಗೆ ಬೆಳಗಾವಿ ಜೊತೆಗೂಹೋಲಿಸಿ ಮಾತನಾಡುವುದು ಸಾಧ್ಯವಿಲ್ಲ. ಅಬ್ಬಬ್ಬಾ ಸಮೃದ್ಧ ನಾಡು ಎಂದುಕೊಳ್ಳುತ್ತಾ ಸಾಗುತ್ತಿದ್ದಂತೆ ನಿಮಗೆ ಬರಗಾಲ ಪ್ರದೇಶಎದುರಾಗುತ್ತದೆ. ಇಲ್ಲಿನ ಬಿಸಿಲು, ಸಮುದ್ರದಂತೆ ಕೊನೆಯಿಲ್ಲದೆ ಚಾಚಿಕೊಂಡಿರುವಬರಭೂಮಿ ಕೆಲಕಾಲ ಆತಂಕ ಮೂಡಿಸುತ್ತದೆ.
ಮತ್ತೆ ಒಂದಿಷ್ಟು ದೂರ ಸಾಗುತ್ತಿದ್ದಂತೆಕೃಷ್ಣಾ ನದಿ ಗಕ್ಕನೆ ಎದುರಾಗುತ್ತದೆ. ಇದು ಥೇಟು ಪುರುಷ ಗಾಂಭೀರ್ಯದಿಂದಲೇಹರಿಯುತ್ತದೆ, ಹಣಿಯುತ್ತದೆ. ಈ ನದಿಗೆ ಕಾವೇರಿ, ಮಲಪ್ರಭಾ, ಘಟಪ್ರಭಾ ನದಿಗಳಂತೆ ನಲಿಯುತ್ತಾ ಸಾಗುವುದು ಒಗ್ಗುವುದೇಇಲ್ಲ ಎಂಬಷ್ಟು ಗಾಂಭೀರ್ಯದಿಂದಲೇ ಹರಿಯುತ್ತದೆ. ತೀರಾ ಕೆಲವೇ ಕೆಲವು ಕಡೆ ಸಾಗುವ ದೃಶ್ಯ ಕಾಣುತ್ತದೆ. ಬರಗಾಲವನ್ನೇ ಹಾಸಿ, ಹೊದ್ದು, ಉಂಡು ಬದುಕುವಪ್ರದೇಶವಿದೆ. ಇಷ್ಟೆಲ್ಲದರ ಜೊತೆಗೆ ದೇವದಾಸಿ, ಗಾಳಿ ಬಿಡಿಸುವುದು ಮತ್ತಿತ್ಯಾದಿ ಕಂದಾಚಾರಗಳು ಇದರ ಒಡಲಲ್ಲಿವೆ.
ಇದೊಂದೇ ಲೋಕಸಭಾ ಕ್ಷೇತ್ರದಲ್ಲಿ ೧೫ ಸಕ್ಕರೆ ಕಾರ್ಖಾನೆಗಳಿವೆ. ಸಕ್ಕರೆ ಕಾರ್ಖಾನೆಗಳಸಮೃದ್ಧಿಯಷ್ಟೇ ರೈತರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ವ್ಯಾಪಕ ತಂತ್ರ,ಕುತಂತ್ರಗಾರಿಕೆಗಳು ಇವೆ. ಹೊಲದಲ್ಲಿ ನಡು ಬಗ್ಗಿಸಿ ದುಡಿಯುವ ರೈತ ಮಾತ್ರಚುನಾವಣೆಯಲ್ಲಿ ಉತ್ತಮನನ್ನು ಆಯ್ಕೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರಕಂಡುಕೊಳ್ಳಬಹುದು. ಆದರೆ, ಅಂತುಹುದೆಲ್ಲವನ್ನೂ ಇಡೀ ಭಾರತದಲ್ಲೇ ಕಷ್ಟವಾಗಿರುವುದರಿಂದಇಲ್ಲಿ ನಿರೀಕ್ಷಿಸುವುದು ತಪ್ಪಾಗುತ್ತದೆ. ಅಂತಹುದೊಂದು ಐಡಿಯಾವೇ ಇದ್ದಂತಿಲ್ಲಇವರಿಗೆ.
ಬಡತನ, ಅನಕ್ಷರತೆಯು ಸಲೀಸಾಗಿ ಪಾಳೇಗಾರಿಕೆಗೆ, ಹಣಕ್ಕೆ ಬೆದರಿ ಶರಣಾದಂತೆಯೇಇಲ್ಲಿನ ಕತ್ತಿ ಸಾಹುಕಾರ ಹಾಗೂ ಹುಕ್ಕೇರಿ ಸಾಹುಕಾರರಿಗೆ ಜನ ತಲೆಬಾಗಿದ್ದಾರೆ.ಮರಾಠಿಯ ಪ್ರಾಬಲ್ಯ, ಗಡಿ ಸಮಸ್ಯೆ, ಜಲ ಸಮಸ್ಯೆ, ಸಕ್ಕರೆಯ ಕಣಜದಲ್ಲಿ ಓಡಾಡಿ ಅನುಭವಹೆಚ್ಚಿಸಿಕೊಳ್ಳಲು ನಮ್ಮ ಸಂಪಾದಕರು ಅವಕಾಶ ಮಾಡಿಕೊಟ್ಟಿದ್ದಾರೆ. ಕಳೆದ ೧೪ ದಿನಗಳಿಂದನನ್ನ ಅನುಭವದ ಬುತ್ತಿ ತುಂಬಿದೆ. ಇನ್ನು ಒಂದು ವಾರ ಇಲ್ಲೇ ಓಡಾಡುತ್ತೇನೆ. ಎಲ್ಲಾಅನುಭವಗಳನ್ನು ಹೇಳಿಕೊಳ್ಳುವುದು ಕಷ್ಟ. ಹೇಳಿಕೊಳ್ಳಲೇಬೇಕು ಎಂದು ಕಾಡುವುದನ್ನುಬರೆಯುವ ಯತ್ನ ಮಾಡುತ್ತೇನೆ. ಅಥಣಿ ಎಂಬ ಬರಗಾಲದ ಊರಿನಲ್ಲಿ ಭಗೀರಥನಂತೆಶ್ರಮಿಸುತ್ತಿರುವ ಬಿ.ಎಲ್. ಪಾಟೀಲರು ಬಗ್ಗೆ ಹೇಳಲೇಬೇಕು. ಎಲ್ಲಾ ಸರಿ ನಿಮ್ಮೂರಲ್ಲಿಎಲೆಕ್ಷನ್ ಕಾವು ಹೇಗಿದೆ...?
Saturday, March 21, 2009
ಯಾವ ಕಾನ್ಫಿಡೆನ್ಸಿಗಿದೆ...?

ತುಂಬಾ ಪ್ರೀತಿಸಿದ ಗರ್ಲ್ ಫ್ರೆಂಡ್ ಕಳೆದುಕೊಳ್ಳುವುದಕ್ಕಿಂತ ದೊಡ್ಡ ದುರಂತ ಏನಾದರೂ ಇದೆಯಾ? ಯುವಕನೊಬ್ಬ ಸ್ವಾಮಿ ವಿವೇಕಾನಂದರ ಮುಂದೆ ನಿಂತು ಕೇಳಿದ.
ಹೌದು ಖಂಡಿತಾ ಇದೆ. ಮತ್ತೊಬ್ಬ ಹುಡುಗಿ ಸಿಕ್ಕೇ ಸಿಗುತ್ತಾಳೆ ಎಂಬ ಆತ್ಮವಿಶ್ವಾಸ ಕಳೆದುಕೊಳ್ಳವುದು ದೊಡ್ಡ ದುರಂತ. ಆತ್ಮವಿಶ್ವಾಸ ಕಳೆದುಕೊಂಡರೇ ಜೀವನವನ್ನೇ ಕಳೆದುಕೊಂಡಂತೆ ಎಂದು ವಿವೇಕಾನಂದರು ಉತ್ತರಿಸಿದರಂತೆ.
ಈ ಘಟನೆ ಎಸ್ಎಂಎಸ್ ರೂಪದಲ್ಲಿ ಒಂದು ತಡರಾತ್ರಿ ವೈದ್ಯ ಮಿತ್ರ ಡಾ. ಮಂಜು ಮೊಬೈಲ್ನಿಂದ ಬಂತು. ಮಲಗಿದ್ದರೂ ನಿದ್ದೆ ಬರದೇ ಒದ್ದಾಡುತ್ತಿದ್ದವನು, ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಏನು ಗೊತ್ತು? ಎಂದು ಮೆಸೇಜಿಸಿದ.
ವಿವೇಕಾನಂದರಿಗೆ ಗರ್ಲ್ ಫ್ರೆಂಡ್ ಬಗ್ಗೆ ಗೊತ್ತಿಲ್ಲ. ಕಾನ್ಫಿಡೆನ್ಸ್ ಗೊತ್ತು ಎಂದು ಪಾಠ ಶುರುವಿಟ್ಟ.
ಪಾಠ ಕೇಳಿದ ಮನಸ್ಸು, ‘ಇಡೀ ಜಗತ್ತನ್ನೇ ಗೆಲ್ಲುವ ಆತ್ಮವಿಶ್ವಾಸವನ್ನು ಒಬ್ಬ ಗರ್ಲ್ಫ್ರೆಂಡ್ ನೀಡಬಲ್ಲಳು, ನೀಡುತ್ತಾಳೆ. ಯಾವ ಕಾನ್ಫಿಡೆನ್ಸು ಒಬ್ಬ ಗರ್ಲ್ಫ್ರಂಡ್ ಅನ್ನು ಗೆದ್ದೇ ಗೆಲ್ಲಬಲ್ಲೇ ಎಂದು ಕಾನ್ಫಿಡೆಂಟ್ ಆಗಿ ಹೇಳುತ್ತದೆ’ ಎಂಬ ಪ್ರಶ್ನೆ ಎಸೆದೆ. ಇನ್ನೂ ಉತ್ತರ ಬಂದಿಲ್ಲ.
Monday, March 2, 2009
ಈ ಊರು ಪ್ರತಿ ಬೇಸಿಗೆಗೂ ಮೊಮ್ಮಕ್ಕಳಿರುವ ವೃದ್ಧಾಶ್ರಮ
ಬಿಸಿಲ ಬೇಗೆ ಶುರುವಾಗಿದೆ. ಮರದಲ್ಲಿ ಎಲೆ ಉದುರುತ್ತಿದೆ. ಗರಿಕೆ ಹುಲ್ಲು ಕಮರಿದೆ. ದನ -ಕರುಗಳಿಗೆ ಮೇವಿನ ಅಭಾವ. ದುಡಿಯುವ ಕೈಗಳಿಗೆ ಕೆಲಸದ ಅಭಾವ. ಹೀಗಾಗಿ ಧಾರವಾಡ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಮಂದಿ ಕೆಲಸ ಅರಸಿ ಊರು ಬಿಡವುದು ಸಾಮಾನ್ಯ. ತಾಲೂಕಿನ ಹುಣಶಿಕುಮರಿ ಮತ್ತು ಉಡವನಾಗಲಾವಿ ಗ್ರಾಮಗಳಂತೂ ವಲಸೆಯಿಂದಾಗಿ ಗ್ರಾಮಗಳು ಮೊಮ್ಮಕ್ಕಳೊಂದಿಗೆ ವೃದ್ಧರಿರುವ ವೃದ್ಧಾಶ್ರಮಗಳಾಗಿ ಬಿಟ್ಟಿವೆ.
ಸರಿಯಾದ ರಸ್ತೆಯನ್ನೂ ಕಾಣದ ಈ ಎರಡು ಹಳ್ಳಿಗಳ ಯುವಕರು, ಮಧ್ಯ ವಯಸ್ಕರು ಪ್ರತಿ ಬೇಸಿಗೆಯಂತೆಯೇ ಈ ಬಾರಿಯೂ ಊರು ಬಿಟ್ಟಿದ್ದಾರೆ. ಕೆಲವರು ಮನೆಯಲ್ಲಿನ ದನಗಳನ್ನು ಮೇವಿರುವ ಕಡೆಗೆ ಮೇಯಿಸಲು ಹೋಗಿಬಿಟ್ಟಿದ್ದಾರೆ. ಇನ್ನು ಕೆಲವರು ಗೋವಾದಲ್ಲಿ ಕೆಲಸ ಅರಸಿ ಗಂಟು ಮೂಟೆ ಕಟ್ಟಿ ತಿಂಗಳಾಗಿದೆ. ಈಗ ಈ ಎರಡೂ ಹಳ್ಳಿಗಳಲ್ಲಿ ಇರುವುದು ವೃದ್ಧರು, ಮಕ್ಕಳು ಮತ್ತು ಹೆಣ್ಣು ಮಕ್ಕಳು ಮಾತ್ರ.
ಇಂತಹ ವಲಸೆ ತಡೆಯಬೇಕು. ಅವರಿರುವ ಊರಿನಲ್ಲೇ ಉದ್ಯೋಗ ದೊರಕಿಸಿಕೊಡಬೇಕು. ದುಡಿಯುವ ಕೈಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ ಎಂಬ ತತ್ವದೊಂದಿಗೆ ಜಾರಿಗೆ ಬಂದಿರುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೂ ಈ ವಲಸೆ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಎರಡೂ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿಯ ನೋಂದಣಿಯಾಗಿದ್ದರೂ ಯಾರೂ ಆ ಯೋಜನೆಯ ಕೆಲಸಕ್ಕೆ ಹೋಗದೇ, ಊರು ಬಿಟ್ಟಿದ್ದಾರೆ.
ನಿತ್ಯದ ಹಾಲಿಗೆ ಎಂದು ಒಂದೆರಡು ಹಸುಗಳನ್ನು ಕೆಲವರು ಊರಲ್ಲೇ ಉಳಿಸಿಕೊಂಡಿದ್ದಾರೆ. ಎರಡೂ ಗ್ರಾಮದಲ್ಲಿ ಜನಸಂಖ್ಯೆಗಿಂತ ಮೂರು ಪಟ್ಟು ಹಸು -ಕರುಗಳಿವೆ. ಪಶುಸಂಗೋಪನೆಯೇ ಈ ಗ್ರಾಮದ ದೊಡ್ಡ ಉದ್ಯೋಗ. ಇವರ್ಯಾರು ಹಾಲು ಮಾರುವುದಿಲ್ಲ. ಹಾಲನ್ನು ಖೋವಾ ಮಾಡಿ, ಧಾರವಾಡದ ಸಿಹಿ ತಯಾರಕರಿಗೆ ಮಾರುತ್ತಾರೆ.
ಆರೋಗ್ಯ ಕೆಟ್ಟರೆ..
ಈ ಎರಡೂ ಗ್ರಾಮಗಳು ಧಾರವಾಡ ತಾಲೂಕಿನಲ್ಲಿದ್ದರೂ ಕಲಘಟಗಿ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಇವು ಧಾರವಾಡದಿಂದ ೧೭ ಕಿಮೀ ದೂರದಲ್ಲಿರುವ ಕಲಕೇರಿ ಗ್ರಾಮ ಪಂಚಾಯ್ತಿಗೆ ವ್ಯಾಪ್ತಿಯಲ್ಲಿವೆ. ಕಲಕೇರಿಯಿಂದ ಕಚ್ಚಾ ಮಣ್ಣಿನ ಹಳ್ಳಕೊಳ್ಳದ ರಸ್ತೆಯಲ್ಲಿ ೫.೫ ಕಿಮೀ ಸಾಗಿದರೆ ಹುಣಶೀಕುಮರಿ ಸಿಗುತ್ತದೆ. ಅಲ್ಲಿಂದ ಇನ್ನೂ ೨.೫ ಕಿಮೀ ಸಾಗಿದರೆ ಉಡವ ನಾಗಲಾವಿ ಗ್ರಾಮ ಸಿಗುತ್ತದೆ. ೪೦೦ ಜನಸಂಖ್ಯೆ ಇರುವ ಉಡವ ನಾಗಲಾವಿಗೆ ಹೋಲಿಸದರೆ ೬೦೦ ರಷ್ಟು ಜನಸಂಖ್ಯೆ ಇರುವ ಹುಣಶೀಕುಮರಿ ಸ್ವಲ್ಪ ಅಭಿವೃದ್ಧಿ ಕಂಡಿದೆ. ಅಂದರೆ ಹೆಂಚಿನ ಮನೆಗಳು ಹೆಚ್ಚಿವೆ ಅಷ್ಟೇ. ರಸ್ತೆಯಂತೂ ಎರಡೂ ಊರಿಗೂ ಇಲ್ಲ.
ಊರಲ್ಲಿ ಶಕ್ತರಾದ ಮಕ್ಕಳು ಇಲ್ಲದ ಹೊತ್ತಿನಲ್ಲಿ ಯಾರಿಗಾದರೂ ಆರೋಗ್ಯ ಕೆಟ್ಟರೆ, ದೇವರೆ ಗತಿ. ಕಾರಣ ಅವರನ್ನು ಆಸ್ಪತ್ರೆಗೆ ಒಯ್ಯಬೇಕು ಅಂದರೆ ಹೊತ್ತುಕೊಂಡೇ ಸಾಗಬೇಕು. ಒಬ್ಬಿಬ್ಬರ ಬಳಿ ಬೈಕ್ ಇದ್ದರೂ ಅದನ್ನು ಆ ಕಲ್ಲಿನ ಹಾದಿಯಲ್ಲಿ ಓಡಿಸುವುದೇ ಒಂದು ಸಾಹಸದ ಕೆಲಸ. ಬೈಕ್ ಓಡಿಸುವ ಮಕ್ಕಳು ಸದ್ಯ ದನ ಅಟ್ಟಿಕೊಂಡು ಊರು ಬಿಟ್ಟಿದ್ದಾರೆ.
ಯಾರಿಗೆ ಬೇಕ್ರಿ ಖಾತ್ರಿ..?
ಉದ್ಯೋಗ ಖಾತ್ರಿ ಯೋಜನೆಗೆ ನಾವೆಲ್ಲಾ ಸೇರಿವಿ. ದಿನಕ್ಕೆ ೮೨ ರೂಪಾಯಿ ಕೊಡ್ತಾರಂತೆ. ಅದೇ ಗೋವಾ, ಬೆಳಗಾವಿ, ಹುಬ್ಬಳ್ಯಾಗ ಹೋದ್ರೆ ೨೦೦ ರು.ವರೆಗೂ ಸಂಪಾದಿಸ್ತಾರೆ. ಅಲ್ಲದೆ, ಇಲ್ಲಿ ಏನ ಕೆಲಸ ಸಲಾಕೆ (ಗುದ್ದಲಿ)ಯಾಗ ರಸ್ತೆ ಅಗೆಯೋದು. ಮಣ್ಣಿನಲ್ಲಿ ರಸ್ತೆ ಮಾಡಿಕೋರಿ ಅಂತ ೧.೪೦ ಲಕ್ಷ ರು.ದ ಕಾಮಗಾರಿ ಹೇಳ್ಯಾರ. ಯಾರೂ ಆ ನೌಕರಿಗೆ ಹೋಗಿಲ್ಲ. ಹೋಗಾದೂ ಇಲ್ಲ. ಎಲ್ಲಾ ದನ ಹೊಡ್ಕಂಡು, ಕೆಲವರು ಗೋವಾಗೆ ಹೋಗ್ಯಾರ ಅಂತ ಅಳಲು ತೋಡಿಕೊಂಡವರು ಹುಣಶಿಕುಮರಿ ಗ್ರಾಪಂ ಮಾಜಿ ಸದಸ್ಯ ತುಕಾರಾಮ.
ಮಳೆಗಾಲಕ್ಕೆ ಬರೋದು..,
ನಮ್ಮ ಹುಡುಗರು ದೇವಗಿರಿ ಕಡೇಗೆ ದನ ಹೊಡ್ಕಂಡು ಹೋಗ್ಯಾರ. ನಮ್ಮ ಪೈಕಿ ಕೆಲವರು ಗೋವಾಗೂ ಹೋಗ್ಯಾರ. ಇದ ಇಲ್ಲಿ ಪ್ರತಿ ಬೇಸಿಗೆಗೂ ಕಾಯಂ ನಡೆಯೋದ್ರಿ. ಮಳೆಗಾಲ ಶುರುವಾದ ಕೂಡ್ಲೆ ಎಲ್ಲಾ ವಾಪಸ್ ಬರ್ತಾರೆ. ಉದ್ಯೋಗ ಕಾರ್ಡ್ ಕೊಟ್ಟಾರೆ, ಎಲ್ಲಾ ಮನೆಯಾಗೆ ಅದಾವು. ಅದೇನು ಮಾಡೋದ್ರಿ ಎಂದು ಪ್ರಶ್ನಿಸಿದವರು ಭೈರು.
ಉದ್ಯೋಗ ಖಾತರಿ ಯೋಜನೆ ಎಲ್ಲಿ ವಿಫಲವಾಗಿದೆ? ಏಕೆ ವಿಫಲವಾಗಿದೆ? ಹೇಗೆ ವಿಫಲವಾಗಿದೆ? ಎಂಬ ಪ್ರಶ್ನೆಗಳಿಗೆ ಈ ಊರುಗಳಲ್ಲಿ ಉತ್ತರ ಸಿಗುತ್ತದೆ.
Wednesday, February 18, 2009
ನನ್ನೊಬ್ಬನ ಬಿಟ್ಟು...,

ಕಾಯೋದಿಲ್ಲ ಯಾರು ನಿನಗೆ ಸದಾ,
ನನ್ನೊಬ್ಬನ ಬಿಟ್ಟು...,
ನಿನ್ನ ಇರುವಿಕೆಯ ಮಧುರ ಭಾವದಲ್ಲೇ
ಕಾದಿರುವೆ............
ನೀ ಬರುವ ಹಾದಿಯಲ್ಲೇ ನಾನಿರುವೆ
ಕಾಯೋದಿಲ್ಲ ಯಾರು ಮಳೆಗೆ ಸದಾ
ಭುವಿಯ ಬಿಟ್ಟು
ಕಾದಿರುವೆ ನಾ ಭುವಿಯಾಗಿ
ಎಂದು ಬರುವೆ ನೀ ಮಳೆಯಾಗಿ.....?
ಕಾಯೋದಿಲ್ಲ ಯಾರು ಸದಾ
ನನ್ನೊಬ್ಬನ ಬಿಟ್ಟು.....
- ಡಾ. ವಿನಯ್ ಮಂಡ್ಯ
(ಗುಳಿಗೆ, ಸೂಜಿ, ಕಾಯಿಲೆ ಅಂತ ಓದುತ್ತ, ಕೆಲಸ ಮಾಡುತ್ತ ಬ್ಯುಸಿ ಆಗಿರಬೇಕಾದ ಗೆಳಯ ವಿನಯ್ ಅವಳಿಗೆ ಕಾಯುತ್ತ ಕವಿಯಾಗಿದ್ದಾನೆ.)
Sunday, February 15, 2009
59 ಪ್ರೇಮ ವಿವಾಹ ಮಾಡಿಸಿದ 'ಸಾಧನಾ'

ಪ್ರೀತಿಸಿದ ಹೃದಯಗಳನ್ನು ಬೇರ್ಪಡಿಸುವ ಮನೆಯವರ ಯತ್ನಕ್ಕೆ ಹೆದರಿ ಧಾರವಾಡದತ್ತ ಓಡಿ ಬರುವ ಜೋಡಿಗಳಿಗೆ ಇಲ್ಲಿನ ತೇಜಸ್ವಿನಿನಗರದ ಮನೆಯೊಂದು ತವರು ಮನೆಯಾಗುತ್ತದೆ.
ಹೀಗೆ ಓಡಿ ಬಂದ ಜೋಡಿಯೊಂದು ಆತ್ಮಹತ್ಯೆಗೆ ಯತ್ನಿಸುವಾಗ ವ್ಯಕ್ತಿಯೊಬ್ಬರಿಗೆ ಸಿಕ್ಕಿದ ಕೂಡಲೇ ಅವರು ತಂದು ಬಿಟ್ಟದ್ದು ಇದೇ ಮನೆಗೆ. ಪ್ರೀತಿಯ ಹೆಸರಲ್ಲಿ ಗರ್ಭವತಿ ಮಾಡಿ ಹುಡುಗ ಕೈ ಕೊಟ್ಟಾಗಲೂ ಇಲ್ಲಿನವರಿಗೆ ನೆನಪಾಗುವುದು ಇದೇ ಮನೆಯೇ. ಕಳೆದ 8 ವರ್ಷಗಳಲ್ಲಿ ಹೀಗೆ ಬಂದ 59 ಜೋಡಿಗಳಿಗೆ ಮದುವೆ ಮಾಡಿಸಿದೆ ಈ ಮನೆ. ಇದರ ಹೆಸರು 'ಸಾಧನಾ' ಸ್ವಯಂ ಸೇವಾ ಸಂಸ್ಥೆ. ಇದು ಮನೆಯೂ ಹೌದು. 'ಸಾಧನಾ'ದ ಕಚೇರಿಯೂ ಹೌದು.
ಇಸೆಬೆಲ್ಲಾ ಝೇವಿಯರ್ ಪಾಟೀಲ್ ಎಂಬಾಕೆಯೇ ಇದರ ಮುಖ್ಯಸ್ಥೆ. ಪ್ರೇಮಿಗಳ ಪೈಕಿ ಹೆಣ್ಣು ಮಕ್ಕಳಿಗೆ ತಾಯಿಯಾಗಿ, ಹುಡುಗರಿಗೆ ಅತ್ತೆಯಾಗುವ ಈಕೆಯದೂ ಒಂದು ದುರಂತ ಪ್ರೇಮ ಕಥೆ ಇದೆ. 8ನೇ ತರಗತಿಯಲ್ಲಿರುವಾಗಲೇ ತನ್ನ ಮೇಲೆ ನಡೆದ ದೌರ್ಜನ್ಯಗಳೇ ಈ ಕಾರ್ಯಕ್ಕೆ ಪ್ರೇರಣೆ. ತನ್ನ ಪ್ರೀತಿಯಂತೆ ಇನ್ನೊಬ್ಬರ ಪ್ರೀತಿಯು ಸಮಸ್ಯೆಗೆ ಸಿಲುಕಬಾರದು ಎಂಬ ಆಸೆ, ಪ್ರೇಮ ವಿವಾಹದಿಂದ ಜಾತಿಯ ಎಲ್ಲೆಗಳು ನಾಶವಾಗುತ್ತವೆ ಎಂಬ ಆಶಯದಿಂದ ಪ್ರೇಮ ವಿವಾಹಕ್ಕೆ ಪೌರೋಹಿತ್ಯ ವಹಿಸುತ್ತಾ, ಮಾನವ ಹಕ್ಕುಗಳ ಬಗ್ಗೆಯೂ ಕೆಲಸ ಮಾಡುತ್ತಿದ್ದಾರೆ.
59ರಲ್ಲಿ..
59 ಮದುವೆಗಳ ಪೈಕಿ 26 ಜೋಡಿಗಳು ಮನೆಯವರಿಗೆ ಹೆದರಿ ಓಡಿ ಬಂದಾಗ ನಿಂತು ಮದುವೆ ಮಾಡಿಸಿದವು. 26ರ ಪೈಕಿ 23 ಜೋಡಿಗಳು ಸುಖಿ ಸಂಸಾರ ಸಾಗಿಸುತ್ತಿದ್ದಾರೆ. ಅಂತರ್ಜಾತಿ ವಿವಾಹಗಳೇ ಹೆಚ್ಚು. 3 ಕುಟುಂಬಗಳು ಮಾತ್ರ ಅತಿಯಾದ ಪ್ರೀತಿ, ಅನುಮಾನದಿಂದ, ಕೇವಲ ದೈಹಿಕ ಆಕರ್ಷಣೆಯಾದ್ದರಿಂದ ಒಡೆದ ಮನೆಯಾಗಿವೆ. ಸಾಧನಾ ಸಂಸ್ಥೆಗೂ ಮೊದಲು ತಾನು ಶಿಕ್ಷಕಿಯಾಗಿದ್ದಾಗ ಬೆಂಬಲಿಸಿ ಮಾಡಿಸಿದ ಪ್ರೇಮ ವಿವಾಹಗಳ ಸಂಖ್ಯೆ ಲೆಕ್ಕಕ್ಕಿಟ್ಟಿಲ್ಲ ಎಂದು ತಾವು ನಡೆದು ಬಂದ ಹಾದಿ, ಅನುಭವದ ಬಗ್ಗೆ ಇಸೆಬೆಲ್ಲಾ, ಮಾಹಿತಿ ನೀಡಿದರು.
ಉಳಿದ 33 ಮದುವೆಗಳು ಮಾತ್ರ ತೀವ್ರ ತರಹದ ಹೋರಾಟದಿಂದಲೇ ಮಾಡಿಸಿದವು. ಊರಿನಲ್ಲಿ ಹುಡುಗಿಯನ್ನು ನಂಬಿಸಿ, ಗರ್ಭವತಿ ಮಾಡಿದ ನಂತರ ಜಾತಿ, ಅಂತಸ್ತಿನ ನೆಪ ಹೇಳಿ ಕೈ ಕೊಡುತ್ತಿದ್ದ ವಂಚಕ ಪ್ರಕರಣಗಳ ಮದುವೆ ಅವು. ಕಾನೂನು ಪ್ರಕಾರ ಸಿಗಬೇಕಾದ ನ್ಯಾಯ ಒದಗಿಸಿದ ತೃಪ್ತಿ ಅಷ್ಟೇ ಇದರಿಂದ ಸಿಕ್ಕಿದ್ದು. ಈ ಜೋಡಿಗಳ ಪೈಕಿ ಸುಖಿ ಸಂಸಾರ ಕಾಣುತ್ತಿರುವುದು ಕೆಲವೇ ಕೆಲವು ಅಂತಾರೆ.
ಹೇಳಿಕೊಳ್ಳಲು..
ನಮ್ಮ ಎಲ್ಲಾ ಆಚರಣೆಯಂತೆಯೇ 'ಪ್ರೇಮಿಗಳ ದಿನ'ವೂ ಒಂದು. ಅದು ಅಗತ್ಯ ಕೂಡ. ಆಕೆ ಅಥವಾ ಆತನ ಮೇಲೆ ಆಸೆ, ಪ್ರೀತಿ ಹುಟ್ಟಿದ್ದರೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿರುತ್ತಾರೆ. ಪಿಸು ಮಾತಿನಲ್ಲಿ ಉಸುರಲೂ ಹೆದರುತ್ತಿರುತ್ತಾರೆ. ಕಡೇ ಪಕ್ಷ ಪ್ರೇಮಿಗಳ ದಿನವಾದರೂ ನೇರವಾಗಿ, ನಡುಗುತ್ತಲೋ, ಒಂದು ಸಣ್ಣ ಗಿಫ್ಟ್ ಮೂಲಕವೋ ತನ್ನ ಪ್ರೀತಿ ಹೇಳಿಕೊಳ್ಳುವ ಅವಕಾಶವಾಗುತ್ತದೆ. ಪ್ರೇಮಿಗಳ ದಿನ ತಪ್ಪಲ್ಲ. ನಡೀಬೇಕು ಎನ್ನೋದು ಇಸೆಬೆಲ್ಲಾ ಅವರ ವಾದ.
ಯಾವ ದಿನವಾದರೂ..,
ಆದರೆ, ಪ್ರೇಮಿಗಳ ದಿನದ ಮಹತ್ವ ಗೊತ್ತಿಲ್ಲದವರು ಮಾತ್ರ ಅದರ ಹೆಸರಲ್ಲಿ ಕಾಮಕೇಳಿ, ಕುಡಿತ, ಕುಣಿತ ಮಾಡುತ್ತಾರೆ. ಅವರನ್ನೇ ನೋಡಿ, ಅವರಷ್ಟೇ ಪ್ರೇಮಿಗಳು. ಅದೇ ಪ್ರೇಮಿಗಳ ದಿನ ಎಂದು ಭಾವಿಸಿ ಕೆಲವು ಸಂಘಟನೆಗಳು ವಿರೋಧದ ಕೂಗು ಎಬ್ಬಿಸಿವೆ. ಹೀಗೆ ಕುಡಿದು, ಕಾಮಕೇಳಿ ಆಡುವವರಿಗೆ ಅದು ಪ್ರೇಮಿಗಳ ದಿನವೇ ಆಗಬೇಕಿಲ್ಲ, ಹೊಸ ವರ್ಷದ ನೆಪದಲ್ಲೂ ಮಾಡುತ್ತಾರೆ. ಹುಟ್ಟಿದ ಹಬ್ಬಗಳಾದರೂ ಇವರಿಗೆ ಸಾಕು. ಅವರಿಂದಾಗಿ, ನಿಜವಾದ ಪ್ರೇಮಿಗಳಿಗೆ, ಮುಕ್ತವಾಗಿ ಹೇಳಿಕೊಳ್ಳಬಹುದಾದ ಅವಕಾಶವೂ ತಪ್ಪಿಸುವ ಕೆಲಸ ಆಗುವುದು ಬೇಡ. ಹೃದಯದ ಪಿಸು ಮಾತುಗಳು ಇಷ್ಟ ಪಟ್ಟ ಹೃದಯಕ್ಕೆ ಕೇಳಿಸುವ ಅವಕಾಶ ತಪ್ಪಿಸಬೇಡಿ ಎಂದೂ ಮನವಿ ಮಾಡುತ್ತಾರೆ.
ಕಾಮವಲ್ಲ..
ಪ್ರೀತಿ -ಪ್ರೇಮ ಎಂದರೆ ಬರಿಯ ಕಾಮವಲ್ಲ. ಕಾಮಕ್ಕಲ್ಲ. ಪ್ರೀತಿ ಎಂದರೆ ಅದೊಂದು ಪರಿಶುದ್ಧ ಸ್ನೇಹ. ಪ್ರೀತಿ ಆದ ಕೂಡಲೇ ಕಾಮಕ್ಕೆ ಇಳಿಯಬೇಡಿ. ಅದು ಪ್ರೀತಿಯ ಒಂದು ಭಾಗ ಅಷ್ಟೇ. ಇನ್ನು ಟೀನೇಜ್ ಜೋಡಿಗಳು ಸಾಕಷ್ಟು ಬರುತ್ತಾರೆ. ಅವರಿಗೆ ಕೌನ್ಸೆಲಿಂಗ್ ನಡೆಸಿ ಇದು ಪ್ರೀತಿ -ಪ್ರೇಮಕ್ಕೆ ಸಕಾಲವಲ್ಲ ಎಂದೂ ತಿಳುವಳಿಕೆ ನೀಡಿ ಕಳುಹಿಸುತ್ತೇವೆ. ಓಡಿ ಬಂದ ಕೂಡಲೇ ಅವರಿಗೆ ಆಪ್ತ ಸಮಾಲೋಚನೆ ನಡೆಸಿ, ಅದು ನಿಜವಾದ ಪ್ರೀತಿಯಾ ಎಂದು ಅರಿತೇ ಮದುವೆ ಮಾಡಿಸುತ್ತೇವೆ. ಕೆಲವರಿಗೆ ನಾವೇ ಕೆಲಸ ಕೊಡಿಸಿದ್ದೂ ಇದೆ. ಮನೆಯವರನ್ನೇ ಒಪ್ಪಿಸಿ ಮದುವೆ ಮಾಡಿಸಿದ ಅನುಭವವೂ ಇದೆ ಎಂದರು.
ನನ್ನ ಪ್ರೀತಿಯಂತಹ ದುರಂತ ಯಾರಿಗೂ ಆಗಬಾರದು. ನನ್ನ ಎಲ್ಲಾ ಹಿನ್ನೆಲೆ ಅರಿತು ನನ್ನ ಮದುವೆಯಾದ ಎಲ್.ಟಿ. ಪಾಟೀಲರು ಈ ಸಂಸ್ಥೆ ನಡೆಸಲು ನನ್ನ ಜೊತೆಗೆ ಬಂಬಲವಾಗಿ ನಿಂತಿದ್ದಾರೆ. ಪ್ರೀತಿಸಿದವರು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪ್ರೀತಿ ನಿಜವಾಗಿದ್ದರೆ ಅದನ್ನು ಅರ್ಥ ಮಾಡಿಸಿ, ಆಗದಿದ್ದರೆ ಇಲ್ಲಿಗೆ ಬನ್ನಿ ನಾವು ನೆರವಾಗುತ್ತೇವೆ ಎಂದು ಇಸೆಬೆಲ್ಲಾ ಅಭಯ ನೀಡುತ್ತಾರೆ.
ಅವರ ವಿಳಾಸ -ಇಸೆಬೆಲ್ಲಾ ಝೇವಿಯರ್ ಪಾಟೀಲ, ಸಾಧನಾ ಸಂಸ್ಥೆ, ತೇಜಸ್ವಿನಿನಗರ, ಧಾರವಾಡ, ದೂರವಾಣಿ 0836 - 6551190 ಅಥವಾ ಮೊಬೈಲ್ -99452 57473 ಸಂಪರ್ಕಿಸಬಹುದು.
Subscribe to:
Posts (Atom)
